ಮುಡಾ ಮಾಜಿ ಆಯುಕ್ತ ನಟೇಶಗೆ ನೀಡಿದ್ದ ಸಮನ್ಸ್‌ ವಜಾ: ಇ.ಡಿ. ಮೇಲ್ಮನವಿ ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್‌

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಅವಧಿಯಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಡಿ ಬಿ ನಟೇಶ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ನಡೆಸಿ, ಸಮನ್ಸ್‌ ಜಾರಿ ಮಾಡಿದ್ದನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್‌ ಸೋಮವಾರ ವಿಚಾರಣೆಗೆ ಪರಿಗಣಿಸಿದೆ.
ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದ್ದು, ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ. ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಿದೆ.

ನಟೇಶ ಅವರ ಅರ್ಜಿ ಪುರಸ್ಕರಿಸಿದ್ದ ಏಕಸದಸ್ಯ ಪೀಠವು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 62ರ ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬಹುದು ಎಂದು ಆದೇಶಿಸಿತ್ತು.
ಏಕಸದಸ್ಯ ಪೀಠದ ಆದೇಶದಲ್ಲಿನ ನಿರ್ದೇಶನವು ಅದೇ ಆದೇಶದಲ್ಲಿ ಹೊರಡಿಸಿರುವ ಇತರ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಪೀಠವು ಮೌಖಿಕವಾಗಿ ತಿಳಿಸಿತು. ಅಲ್ಲದೆ ಅರ್ಜಿದಾರರು ಯಾವುದೇ ಮಧ್ಯಂತರ ಪರಿಹಾರ ಕೋರದೆ ಇರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಲು ಪೀಠವು ಅನುಮತಿಸಿತು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಏಕಸದಸ್ಯ ಪೀಠದ ಆದೇಶವನ್ನು ಹಲವು ಕಡೆ ಉಲ್ಲೇಖಿಸಲಾಗುತ್ತಿರುವುದರಿಂದ ಜಾರಿ ನಿರ್ದೇಶನಾಲಯಕ್ಕೆ ಪೂರ್ವಾಗ್ರಹ ಉಂಟಾಗುತ್ತಿದೆ. ಏಕಸದಸ್ಯ ಪೀಠವು ಪಿಎಂಎಲ್‌ಎ ಸೆಕ್ಷನ್‌ 19 ಮತ್ತು 17ಕ್ಕೆ ಗೊಂದಲ ಮಾಡಿಕೊಂಡಿದೆ. ಈ ಆದೇಶವು ಒಂದು ದಿನದ ಮಟ್ಟಿಗೂ ನಿಲ್ಲುವುದಿಲ್ಲ” ಎಂದರು.
ಡಾ. ನಟೇಶ ಪರವಾಗಿ ಕೇವಿಯಟರ್‌ ಆಗಿ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಅವರು “ಏಕಸದಸ್ಯ ಪೀಠ ಸೂಕ್ತ ಆದೇಶ ಮಾಡಿದೆ” ಎಂದು ಸಮರ್ಥಿಸಿದರು.
‘ನಂಬಲರ್ಹ ಕಾರಣ’ಗಳು ಇಲ್ಲದೇ ಇರುವುದರಿಂದ ನಟೇಶ್‌ ಅವರ ಮನೆಯಲ್ಲಿ ಶೋಧ ನಡೆಸಿ, ಜಪ್ತಿ ಮಾಡಿದ್ದು ಹಾಗೂ ಆನಂತರ ಪಿಎಂಎಲ್‌ ಸೆಕ್ಷನ್‌ 17(1)(f) ಅಡಿ ಹೇಳಿಕೆ ದಾಖಲಿಸಿಕೊಂಡಿದ್ದು ದೋಷಪೂರಿತ ಮತ್ತು ಕಾನೂನುಬಾಹಿರವಾಗಿದೆ. ಹೀಗಾಗಿ, ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ ಅಮಾನ್ಯ ಎಂದು ಏಕಸದಸ್ಯ ಪೀಠ ಆದೇಶಿಸಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement