ಛತ್ತೀಸಗಢದ ಹಿಂದಿ ಸಾಹಿತಿ ವಿನೋದಕುಮಾರ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ

ನವದೆಹಲಿ: ಖ್ಯಾತ ಹಿಂದಿ ಬರಹಗಾರ ವಿನೋದಕುಮಾರ ಶುಕ್ಲಾ ಅವರುಭಾರತದಲ್ಲಿ ಸಾಹಿತ್ಯಕ್ಕೆ ನೀಡುವ ಅತ್ಯುನ್ನತ ಪುಸ್ಕಾರವಾದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
88 ವರ್ಷ ವಯಸ್ಸಿನ ಕವಿ, ಸಣ್ಣ ಕಥೆಗಾರ ಮತ್ತು ಪ್ರಬಂಧಕಾರ ವಿನೋದಕುಮಾರ ಶುಕ್ಲಾ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಛತ್ತೀಸ್‌ಗಢದ ಮೊದಲ ಲೇಖಕರಾಗಿದ್ದಾರೆ. ಶುಕ್ಲಾ ಅವರನ್ನು ಸಮಕಾಲೀನ ಹಿಂದಿ ಸಾಹಿತ್ಯದಲ್ಲಿ ಅತ್ಯಂತ ವಿಶಿಷ್ಟವಾದ ಧ್ವನಿ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ₹ 11 ಲಕ್ಷ ನಗದು, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರ ಹೊಂದಿದ್ದು, ಪ್ರಶಸ್ತಿಗೆ ಭಾಜನರಾದ 12ನೇ ಹಿಂದಿ ಸಾಹಿತಿಯಾಗಿದ್ದಾರೆ.
ಲೇಖಕಿ ಹಾಗೂ ಮಾಜಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜ್ಞಾನಪೀಠ ಆಯ್ಕೆ ಸಮಿತಿಯು ಅವರ ಹೆಸರನ್ನು ಅಂತಿಮಗೊಳಿಸಿದೆ. ಶುಕ್ಲಾ ಅವರ ಹಿಂದಿ ಸಾಹಿತ್ಯ, ಸೃಜನಶೀಲತೆ ಮತ್ತು ವಿಶಿಷ್ಟ ಬರವಣಿಗೆಯ ಶೈಲಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ. ಸಭೆಯಲ್ಲಿ ಮಾಧವ್ ಕೌಶಿಕ್, ದಾಮೋದರ ಮೌಜೊ, ಪ್ರಭಾ ವರ್ಮ, ಅನಾಮಿಕಾ, ಎ ಕೃಷ್ಣರಾವ್, ಪ್ರಫುಲ್ ಶಿಲೇದಾರ್, ಜಾನಕಿಪ್ರಸಾದ ಶರ್ಮಾ ಮತ್ತು ಜ್ಞಾನಪೀಠ ನಿರ್ದೇಶಕ ಮಧುಸೂದನ ಆನಂದ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಪ್ರಶಸ್ತಿ ಘೋಷಣೆಯಾದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿನೋದಕುಮಾರ ಶುಕ್ಲಾ ಅವರು, “ಇದು ಬಹಳ ದೊಡ್ಡ ಪ್ರಶಸ್ತಿ. ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಪ್ರಶಸ್ತಿಗಳ ಬಗ್ಗೆ ನಾನು ಎಂದಿಗೂ ಗಮನ ಹರಿಸಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಲು ನನಗೆ ಸರಿಯಾದ ಪದಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅವರ ವಯಸ್ಸಿನ ಹೊರತಾಗಿಯೂ, ಅವರು ವಿಶೇಷವಾಗಿ ಮಕ್ಕಳಿಗಾಗಿ ಸಾಹಿತ್ಯ ಬರೆಯುವುದನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಬರವಣಿಗೆ ಸಣ್ಣ ಕೆಲಸವಲ್ಲ, ಬರೆಯುವುದಾದರೆ ಬರೆಯುತ್ತಲೇ ಇರಿ. ನಿಮ್ಮ ಮೇಲೆ ವಿಶ್ವಾಸವಿರಲಿ. ಹಾಗೂ ನಿಮ್ಮ ಕೃತಿ ಪ್ರಕಟವಾದ ನಂತರ ಇತರರು ಪ್ರತಿಕ್ರಿಯೆ ನೀಡಿದರೆ ಅದಕ್ಕೂ ಗಮನ ಕೊಡಿ ಎಂದು ಅವರು ಕಿರಿಯ ಬರಹಗಾರರಿಗೆ ಸಲಹೆ ನೀಡಿದ್ದಾರೆ.
ಗದ್ಯ ಮತ್ತು ಕಾವ್ಯಾತ್ಮಕ ಸಂವೇದನೆಗಳಿಗೆ ಹೆಸರುವಾಸಿಯಾದ ಶುಕ್ಲಾ ಅವರಿಗೆ 1999 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರ ಮೆಚ್ಚುಗೆ ಪಡೆದ ಕೃತಿ ದೀವಾರ್ ಮೇ ಏಕ್ ಖಿರ್ಕೀ ರೆಹತಿ ಥಿ ಎಂಬುದಕ್ಕೆ ನೀಡಲಾಯಿತು. ಅವರ ಇತರ ಮಹತ್ವದ ಕೃತಿಗಳಲ್ಲಿ ಕಾದಂಬರಿ ನೌಕರ್ ಕಿ ಕಮೀಜ್ (1979) ಸೇರಿವೆ, ಇದನ್ನು ನಂತರ ಚಲನಚಿತ್ರ ನಿರ್ಮಾಪಕ ಮಣಿ ಕೌಲ್ ಅವರು ಚಲನಚಿತ್ರವಾಗಿ ಅಳವಡಿಸಿಕೊಂಡರು. ಅವರ ಪ್ರಮುಖ ಕವನ ಸಂಕಲನ ಸಬ್ ಕುಚ್ ಹೋನಾ ಬಚಾ ರಹೇಗಾ (1992).
ಜ್ಞಾನಪೀಠ ಪ್ರಶಸ್ತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು, ಜ್ಞಾನಪೀಠ ಪ್ರಶಸ್ತಿಯನ್ನು ಮೊದಲು ಮಲಯಾಳಂ ಕವಿ ಜಿ ಶಂಕರ ಕುರುಪ್ ಅವರಿಗೆ 1965 ರಲ್ಲಿ ಅವರ ಒಡಕುಝಲ್ ಸಂಕಲನಕ್ಕಾಗಿ ನೀಡಲಾಯಿತು. ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಭಾಷೆಯಲ್ಲಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಭಾರತೀಯ ಲೇಖಕರಿಗೆ ಮಾತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement