ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ಸ್ವಯಂ ಪ್ರೇರಿತವಾಗಿ ಏಪ್ರಿಲ್ 23ರಿಂದ ಮುಚ್ಚಲು ಥಿಯೇಟರ್ ಮಾಲೀಕರು ನಿರ್ಧರಿಸಿದ್ದಾರೆ.
ಸೋಂಕು ಹೆಚ್ಚಳ ಜೊತೆಗೆ ಜನರು ಕೂಡ ಸಿನಿಮಾ ಮಂದಿರಗಳತ್ತ ಮುಖ ಮಾಡುತ್ತಿಲ್ಲ. ಜೊತೆಗೆ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಚಿತ್ರ ಮಂದಿರಗಳ ನಿರ್ವಹಣೆ ಕಷ್ಟವಾಗುತ್ತಿದೆಎಂದು ವೀರೇಶ್ ಚಿತ್ರಮಂದಿರದ ಮಾಲೀಕ ಕೆ. ವಿ. ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 650ಕ್ಕೂ ಹೆಚ್ಚೂ ಚಿತ್ರಮಂದಿಗಳನ್ನು ಇದೇ ಏಪ್ರಿಲ್ 23ರಿಂದ ಬಂದ್ ಮಾಡಲಾಗುವುದು. ಸೋಂಕು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಲಾಕ್ಡೌನ್ನಿಂದಾಗಿ ಚಿತ್ರ ಮಂದಿರಗಳು ನಷ್ಟ ಅನುಭವಿಸಿದ್ದವು. ಕಳೆದ ಫೆಬ್ರವರಿಯಿಂದ ಶೇ 50ರಷ್ಟು ಆಸನ ಭರ್ತಿಗೆ ಸರ್ಕಾರಗಳು ಅನುಮತಿ ನೀಡಿದ್ದವು. ಇದಾದ ಬಳಿಕ ಒಂದೆರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನೇನು ತುಸು ಚೇತರಿಕೆ ಕಾಣಲಿದೆ ಎಂಬಷ್ಟರಲ್ಲಿಯೇ ಮತತೆ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಸೋಂಕು ಹೆಚ್ಚಳದ ಕಾರಣ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬರುತ್ತಿಲ್ಲ. ಚಿತ್ರ ಬಿಡುಗಡೆಯೇ ಆಗುತ್ತಿಲ್ಲ. ಈ ಸಮಯದಲ್ಲಿ ಚಿತ್ರ ಮಂದಿರ ನಿರ್ವಹಣಾಕಾರರ ಆರೋಗ್ಯ ಕಾಪಾಡುವುದು ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ