ಶಿರಸಿ: ಸ್ನಾನದ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡುವ ವೇಳೆ ಅದನ್ನು ಹಿಡಿಯಲು ಬಂದ ಉರಗ ಸಂರಕ್ಷಕನ ಮೇಲೆಯೇ ಕಾಳಿಂಗ ಸರ್ಪವು ದಾಳಿಗೆ ಯತ್ನಿಸಿದ್ದು, ಅವರು ಸ್ವಲ್ಪದರಲ್ಲೇ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹೆಚ್ಚಾಗಿ ತಂಪು ಪ್ರದೇಶದಲ್ಲಿ ವಾಸಿಸುವ ಕಾಳಿಂಗ ಸರ್ಪಗಳು ಬೇಸಿಗೆ ಉಷ್ಣತೆ ಹಿನ್ನೆಲೆಯಲ್ಲಿ ತಂಪು ಜಾಗ ಹುಡುಕಿಕೊಂಡು ಬರುತ್ತವೆ. ಕೆಲವೊಮ್ಮೆ ಮನೆಗಳತ್ತ ಬರುತ್ತಿವೆ. ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದ ಪರಮ ಮರಾಠಿ ಎಂಬವರ ಮನೆಯ ಸ್ನಾನಗೃಹದ ಮೇಲ್ಛಾವಣಿಯಲ್ಲಿ ಕಾಳಿಂಗ ಸರ್ಪ ಅಡಗಿಕೊಂಡಿತ್ತು. ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಕಂಡಿದ್ದಾರೆ. ಮೊದಲಿಗೆ ಸುಮ್ಮನಿದ್ದ ಅದರ ಗಾತ್ರವನ್ನು ನೋಡಿ ಅದು ಹೆಬ್ಬಾವಿ ಜಾತಿಗೆ ಸೇರಿದ ಹಾವಿರಬೇಕು ಎಂದು ಅಂದುಕೊಂಡಿದ್ದರು.
ಅದನ್ನು ಛಾವಣಿಯಿಂದ ಕೆಳಗೆ ಇಳಯುವಂತೆ ಮಾಡುವಾಗ ಕಾಳಿಂಗ ಸರ್ಪ ಒಮ್ಮೆಲೇ ಕ್ಷಣಾರ್ಧಲ್ಲಿ ಪವನ್ ಅವರ ಮೇಲೆರಗಿದೆ. ಹಾವು ಹಿಡಿಯುವದನ್ನು ನೋಡುತ್ತಿದ್ದ ಗ್ರಾಮಸ್ಥರು ಕಂಗಾಲಾಗಿ ಅಲ್ಲಿಂದ ಓಡಿದ್ದಾರೆ. ಆದರೆ ಕಾಳಿಂಗ ಸರ್ಪದ ಬಗ್ಗೆ ಮಾಹಿತಿಯಿದ್ದ ಪವನ್ ಅವರು ತಕ್ಷಣವೇ ಹಿಂದೆ ಸರಿದು ತಪ್ಪಿಸಿಕೊಂಡಿದ್ದರಿಂದ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ನಂತರ ಅವರು ಪ್ರಯತ್ನಪಟ್ಟು ಕಾಳಿಂಗವನ್ನ ಹಿಡಿದಿದ್ದಾರೆ. ಕಾಳಿಂಗ ಸರ್ಪ ಬಹಳ ಹೊತ್ತು ಛಾವಣಿ ಮೇಲೆ ಹೆಡೆ ಎತ್ತು ನಿಂತುಕೊಂಡಿತ್ತು. ಇದು ನೋಡುಗರಿಗೆ ಬಹಳ ಸೊಗಸಾಗಿತ್ತು. ಆದರೆ ಅದರ ಆರ್ಭಟ ಮಾತ್ರ ಎಂಥ ಧೈರ್ಯವಂತ ಎದೆಯಲ್ಲೂ ನಡುಕ ತರುವಂತಿತ್ತು. ನಂತರ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ