ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಉತ್ತರ ಕನ್ನಡದ ಇಬ್ಬರು ಎನ್​ಐಎ ವಶಕ್ಕೆ

ಕಾರವಾರ : ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ ತಾಂಡೇಲ ಹಾಗೂ ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಎಂಬವರನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್​ಐಎ ತಂಡ ನಸುಕಿನ ಜಾವ ಎರಡೂ ಕಡೆಯೂ ಏಕಕಾಲಕ್ಕೆ ದಾಳಿ ನಡೆಸಿ ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ.
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್​ಐಎ ನೋಟೀಸ್ ನೀಡಿ ಅವರನ್ನು ಬಿಟ್ಟಿತ್ತು. ಈಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್​ಐಎ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.

ಹನಿಟ್ರ್ಯಾಪ್ ಮಾಡಿ ಮಾಹಿತಿ ಕಲೆ ಹಾಕಿದ್ದ ಪಾಕಿಸ್ತಾನದ ಏಜೆಂಟ್
ಶಂಕಿತ ಆರೋಪಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದ ಪಾಕಿಸ್ತಾನಿ ಏಜೆಂಟ್ ಕಾರವಾರ ನೌಕಾ ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಳು ಎನ್ನಲಾಗಿದೆ. ಈ ಹಿಂದೆ ಕಾರವಾರದ ಚೆಂಡ್ಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪೆನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ತಾನಿ ಏಜೆಂಟ್, ಈ ಮೂವರ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು. ನಂತರ 2023 ರಲ್ಲಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಈ ಯುವಕರಿಂದ ಸೀಬರ್ಡ್ ಒಳಗೆ ಆಗುತ್ತಿರುವ ಕಾಮಗಾರಿ, ಯುದ್ಧನೌಕೆಗಳ ಮಾಹಿತಿ, ಆಗಮನ ಹಾಗೂ ಹೊರಡುವ ಸಮಯ, ಭದ್ರತೆಯ ಮಾಹಿತಿ ಇತ್ಯಾದಿ ಮಾಹಿತಿಗಳನ್ನು ಪಾಕಿಸ್ತಾನಿ ಏಜೆಂಟ್ ಪಡೆಯುತ್ತಿದ್ದಳು, ಮಾಹಿತಿ ನೀಡಿದ್ದಕ್ಕೆ ಅವರಿಗೆ 8 ತಿಂಗಳ ಕಾಲ ತಲಾ 5,000ರೂ. ನೀಡಿದ್ದಾಳೆ ಎನ್ನಲಾಗಿದೆ.
ಸೀಬರ್ಡ್ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಇನ್ನಷ್ಟು ಶಂಕಿತರಿದ್ದಾರೆ ಎಂದು ಅಂದೇ ಮೂಲಗಳಿಂದ ಮಾಹಿತಿ ಪಡೆದಿರುವ ಎನ್​ಐಎ ತಂಡ ಈಗ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿರುವ ಈ ಹಿಂದೆ ವಶಕ್ಕೆ ಪಡೆದವರನ್ನು ಮತ್ತೆ ವಿಚಾರಣೆ ನಡೆಸಿ, ಹೊಸ ಸಂಪರ್ಕದ ಬಗ್ಗೆ ತನಿಖೆ ನಡೆಸಲು ಆಗಮಿಸಿದೆ ಎನ್ನಲಾಗಿದೆ. ನೌಕಾ ನೆಲೆ ಮಾಹಿತಿ ಸೋರಿಕೆ ಸಂಬಂಧಿಸಿ ಮಂಗಳವಾರ ನೌಕಾನೆಲೆ ಅಧಿಕಾರಿಗಳನ್ನು ಎನ್‌ಐಎ ಅಧಿಕಾರಿಗಳು ಭೇಟಿ ಮಾಡುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

 

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement