ತೋಂಟದ ಸಿದ್ಧಲಿಂಗ ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವಾಗಿ ಆಚರಿಸಲು ಫಕೀರ ದಿಂಗಾಲೇಶ್ವರ ಶ್ರೀಗಳ ವಿರೋಧ

 ಗದಗ: ಗದಗ ಜಿಲ್ಲೆಯ ಎರಡು ಪ್ರಮುಖ ಮಠಗಳಾದ ಗದಗ ತೋಂಟದಾರ್ಯ ಮಠ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ನಡುವೆ ಭಾವೈಕ್ಯತಾ ದಿನದ ವಿಚಾರದಲ್ಲಿ ಸಂಘರ್ಷ ಉಂಟಾಗಿದ್ದು, ಗದಗ-ಡಂಬಳ ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ ಅವರ 75ನೇ ಜಯಂತಿ‌ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ ಅವರ ಜಯಂತಿ‌ ದಿನವನ್ನು ಭಾವೈಕ್ಯತಾ ದಿನ ಎಂದು ಆಚರಿಸುವುದಕ್ಕೆ ಆಕ್ಷೇಪಿಸಿದ್ದಾರೆ. 500 ವರ್ಷಗಳ ಭಾವೈಕ್ಯತಾ ಪರಂಪರೆಯ ಇತಿಹಾಸ ಹೊಂದಿರುವ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷ ಪದವನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಬಳಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪ್ರಾತಿನಿಧ್ಯದ ವಿರಕ್ತಮಠದ ಪರಂಪರೆ ಮುಂದುವರಿಸಿಕೊಂಡು ಬಂದವರು. ಅಲ್ಲದೆ, ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೇ ಈ ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಕರ್ತೃಗಳನ್ನು ಭಾವೈಕ್ಯತೆಯ ಹರಿಕಾರರೆಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಅವರ ಜಯಂತಿಯನ್ನು ಭಾವೈಕ್ಯತಾ ದಿನವಾಗಿ ಆಚರಿಸುವುದನ್ನು ಬಿಟ್ಟು, ಲಿ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಜಯಂತಿ ಆಚರಿಸಲು ನಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ಫೆಬ್ರವರಿ 21ರಂದು ಸಿದ್ದಲಿಂಗ ಸ್ವಾಮೀಜಿ 75ನೇ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಣೆ ಮಾಡಲು ತಯಾರಿ ನಡೆದಿದ್ದು, ಭಾವೈಕ್ಯತಾ ದಿನ ಆಚರಿಸಿದರೆ ಶಿರಹಟ್ಟಿ ಮಠದ ಭಕ್ತರು ಕರಾಳ ದಿನ ಆಚರಿಸಬೇಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ಫಕೀರೇಶ್ವರ ಮಠದ ಭಾವೈಕ್ಯದ ಸಂಪ್ರದಾಯದ ಮಠವಾಗಿದ್ದು, ಫಕೀರೇಶ್ವರ ಮಠವು ಹಿಂದೂ ಮುಸ್ಲಿಂ ಎರಡೂ ಸಂಪ್ರದಾಯ ಹೊಂದಿರುವ ಮಠ. ಶಿರಹಟ್ಟಿ ಫಕೀರೇಶ್ವರ ಮಠವು 50 ಶಾಖಾಮಠಗಳನ್ನು, 5 ಶಾಖಾ ದರ್ಗಾಗಳನ್ನು ಹೊಂದಿದೆ. ಫಕ್ಕಿರೇಶ್ವರ ಮಠದಲ್ಲಿ ಮಂದಿರವಿದೆ, ಮಸೀದಿಯಿದೆ. ಹೀಗಾಗಿ ಮಿನಾರ, ಗೋಪುರ ಹೊಂದಿರುವ ಮಠದ ಆಚಾರ ವಿಚಾರದಲ್ಲಿ ಭಾವೈಕ್ಯ ಮೇಳೈಸಿದೆ. ಮಠದ ಪೀಠಾಧಿಪತಿಗಳಿಗೆ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿ ಉಡುಗೆ ನೀಡುವ ಸಂಪ್ರದಾಯವಿದೆ. ಮಠದಲ್ಲಿ ಫಕ್ಕೀರ, ಈಶ್ವರ ಇಬ್ಬರ ಆರಾಧನೆ ನಡೆಯುತ್ತದೆ. ಶ್ರೀಮಠವನ್ನ ಬಿಟ್ಟು ಬೇರೆ ಮಠಕ್ಕೆ ಭಾವೈಕ್ಯ ಪದ ಬಳಸುವುದು ಸಮಂಜಸ ಅಲ್ಲ ಎಂಬುದು ಮಠದ ಭಕ್ತರ ಒತ್ತಾಯ. ಒಂದು ವೇಳೆ ಫೆ. 21 ರಂದು ಭಾವೈಕ್ಯತೆ ದಿನ ಆಚರಿಸಿದ್ದಾದಲ್ಲಿ, ಮಠದ ಭಕ್ತರು ಗದಗ ನಗರದಲ್ಲಿ ಕರಾಳ ದಿನ ನಡೆಸಿ, ತೋಂಟದಾರ್ಯ ಮಠದ ವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಂದ ಭಾವೈಕ್ಯತಾ ದಿನ ಘೋಷಣೆಯಾಗಿತ್ತು. ಆಗ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸುಮ್ಮನಾಗಿದ್ದರು. ಆದರೆ, ಈಗ ಶ್ರೀಮಠದ ಆಮಂತ್ರಣ ಪತ್ರಿಕೆಯಲ್ಲಿ ಭಾವೈಕ್ಯತಾ ದಿನ ಪ್ರಸ್ತಾಪವಾಗಿದೆ ಎಂದು ಅವರು ಹೇಳಿದ್ದಾರೆ.
ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿಯವರಿಗೆ ಭಾವೈಕ್ಯತೆಯ ಹರಿಕಾರ ಎಂಬುದು ಅನ್ವಯವಾಗುವುದಿಲ್ಲ. ಹೀಗಾಗಿ ʼಭಾವೈಕ್ಯತಾʼ ಹರಿಕಾರ ಎಂಬ ಪದ ಬಳಕೆ ಮಾಡಬಾರದು ಎಂದು ಈಗಿನ ತೋಂಟದಾರ್ಯ ಮಠದ ಶ್ರೀಗಳಾದ ಸಿದ್ದರಾಮ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿ.ಸಿ. ನೂರಶೆಟ್ಟರ, ಎನ್‌.ಆರ್‌. ಕುಲಕರ್ಣಿ, ಶಿವನಗೌಡ ಪಾಟೀಲ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement