ಬೆಳಗಾವಿ: ಯುವತಿಯನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಮನೆಗೆ ನುಗ್ಗಿ ಯುವತಿಯ ತಾಯಿ ಮತ್ತು ಸಹೋದರನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಕೊಲೆಯಾದವರನ್ನು ಅಕ್ಕೋಳ ಗ್ರಾಮದ ಮಂಗಲ ನಾಯಿಕ (42) ಹಾಗೂ ಪ್ರಜ್ವಲ ನಾಯಿಕ (18) ಎಂದು ಗುರತಿಸಲಾಗಿದೆ. ಮಾರಕಾಸ್ತ್ರಗಳಿಂದ ತಲೆಗೆ ಬಡಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ಮಾಹಿತಿ ತಿಳಿದು ನಿಪ್ಪಾಣಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆರೋಪಿ ರವಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಗೆ ತಾಯಿ ವಿರೋಧಿಸಿದ್ದೇ ಕೊಲೆಗೆ ಕಾರಣ..
ಮೃತ ಮಂಗಲ ನಾಯಿಕ ಅವರಿಗೆ ಮಗಳನ್ನು ಮದುವೆ ಮಾಡಿಕೊಡುವಂತೆ ಆಗಾಗ್ಗೆ ಆರೋಪಿ ರವಿ ಪೀಡಿಸುತ್ತಿದ್ದ. ಆದರೆ, ಮಗಳನ್ನು ನಿನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ತಾಯಿ ಹೇಳಿದ್ದಳು. ಇದೇ ಕಾರಣಕ್ಕೆ ಆರೋಪಿ ಮಂಗಲ ನಾಯಿಕ ಹಾಗೂ ಪ್ರಜ್ವಲನನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ