ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರದಿಂದ ಬೈತಖೋಲ ಮಾರ್ಗವಾಗಿ ಬಿಣಗಾದ ಕಡೆ ಸಾಗುವ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರ ಆದೇಶ ಹೊರಡಿಸಿದ್ದಾರೆ. ಸುರಂಗಮಾರ್ಗದ ನಿರ್ಮಾಣದ ಬಳಿಕ ನಗರದಿಂದ ಬಿಣಗಾ ಸಂಪರ್ಕಿಸುತ್ತಿದ್ದ ಈ ಹಿಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಹಲವಾರು ವಾಹನಗಳ ಸಂಚಾರ ನಡೆದೇ ಇದೆ. ಈ ಮಾರ್ಗದಲ್ಲಿ ಪ್ರತಿದಿನ ಆಟೋಗಳು, ಶಾಲಾ ವಾಹನ, ಬಂದರು ಪ್ರದೇಶಕ್ಕೆ ಬರುವ ಟ್ಯಾಂಕರ್ ಸೇರಿದಂತೆ ಭಾರಿ ವಾಹನಗಳು ಹಾಗೂ ನೌಕಾನೆಲೆಯವರ ವಾಹನಗಳು ಸಂಚರಿಸುತ್ತಿವೆ.
ಆದರೆ ಇದೀಗ ಬೈತಖೋಲದಿಂದ ಬಿಣಗಾ ಸಾಗುವಾಗ ಎಡಬದಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಬೀಳುತ್ತಿರುವ ಮಳೆಯ ಪ್ರಮಾಣವೂ ಹೆಚ್ಚಾಗಿರುವುದರಿಂದ ಇದೇ ಭಾಗದಲ್ಲಿ ದೊಡ್ಡ ದೊಡ ಬಂಡೆಗಳು ರಸ್ತೆಗೆ ಉರುಳುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಈ ಮಾರ್ಗವನ್ನು ಬಂದ್ ಮಾಡುವಂತೆ ಕಾರವಾರ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಬಗ್ಗೆ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶಿಸಿದ್ದಾರೆ. ಇನ್ನು ಬಿಣಗಾದಿಂದ ಬೈತಖೋಲ ಹಾಗೂ ಬೈತಖೋಲದಿಂದ ಬಿಣಗಾದತ್ತ ಸಂಚರಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ