ನವದೆಹಲಿ : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡ ಕುರಿತು ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್ ದೆಹಲಿ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಎರಡು ದಿನಗಳಲ್ಲಿಯೇ ಮತ್ತಿಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿ ಲೋಕಸಭೆ ಕ್ಷೇತ್ರಗಳ ಕಾಂಗ್ರೆಸ್ ವೀಕ್ಷಕರೂ ಆಗಿರುವ ನಾಯಕರಾದ ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿರುವ ಈ ನಾಯಕರು, ಪಕ್ಷ ತೊರೆಯಲು ಕಾಂಗ್ರೆಸ್ ಮತ್ತು ಆಪ್ ಮೈತ್ರಿಕೊಂಡಿದ್ದು ಮುಖ್ಯ ಕಾರಣ ಎಂದು ತಿಳಿಸಿದ್ದಾರೆ. ಅರವಿಂದರ್ ಸಿಂಗ್ ಲವ್ಲಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ದೇವಿಂದರ್ ಯಾದವ್ ಅವರನ್ನು ನೇಮಕ ಮಾಡಿರುವುದು ಸಹ ಕೈ ನಾಯಕರ ಅಸಮಾಧಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಮಾಜಿ ಶಾಸಕ ಹಾಗೂ ಪಶ್ಚಿಮ ದೆಹಲಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ವೀಕ್ಷಕರಾಗಿರುವ ನೀರಜ್ ಬಸೋಯಾ, “ದೆಹಲಿಯಲ್ಲಿ ಎಎಪಿ ಜೊತೆಗೆ ಪಕ್ಷ ಮೈತ್ರಿ ಮಾಡಿಕೊಂಡಿದ್ದಕ್ಕೆ ನೊಂದು, ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ಈ ಮೈತ್ರಿಯು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿ ನಿತ್ಯವೂ ಮುಜುಗರ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ನಾನು ಪಕ್ಷದ ಎಲ್ಲ ಹುದ್ದೆಗಳು ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನಗೆ ಕಳೆದ 30 ವರ್ಷಗಳಲ್ಲಿ ಎಲ್ಲ ಅವಕಾಶಗಳನ್ನು ನೀಡಿದ್ದಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು” ಎಂದು ಬಸೋಯಾ ತಿಳಿಸಿದ್ದಾರೆ.
ವಾಯವ್ಯ ದೆಹಲಿ ಲೋಕಸಭೆ ಕ್ಷೇತ್ರದ ವೀಕ್ಷಕ ಹಾಗೂ ಮಾಜಿ ಶಾಸಕ ನಸೀಬ್ ಸಿಂಗ್ ಕೂಡ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ದೇವಿಂದರ್ ಯಾದವ್ ಅವರನ್ನು ನೇಮಿಸಿರುವುದಕ್ಕೆ ನಸೀಬ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದೇವಿಂದರ್ ಯಾದವ್ ಅವರು ದೆಹಲಿಯಲ್ಲಿ ಎಎಪಿ ಮತ್ತು ಅದರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹೊಗಳುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ದೆಹಲಿ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಅರವಿಂದರ್ ಸಿಂಗ್ ಲವ್ಲಿ ಅವರು ಎಎಪಿ ಜತೆಗಿನ ಹೊಂದಾಣಿಕೆ ಹಾಗೂ ಪಕ್ಷದ ನಿರ್ಧಾರಗಳಲ್ಲಿ ಉಸ್ತುವಾರಿಯ ಹಸ್ತಕ್ಷೇಪಗಳ ಬಗ್ಗೆ ಅಸಮಾಧಾನಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ದೆಹಲಿಯ ಏಳು ಲೋಕಸಭೆ ಕ್ಷೇತ್ರಗಳಿಗೆ ಮೇ 25ರಂದು ಚುನಾವಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ