ಮೈಸೂರು: ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ಮೇಲೆ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಕೆಂಡಾಮಂಡಲವಾಗಿದ್ದು, ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ (ಡಿಸೆಂಬರ್3) ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ. ಇದರಿಂದ ಸಿಟ್ಟಿಗೆದ್ದ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಬೈದಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ವೀಡಿಯೋದಲ್ಲಿ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ನಂತರ ಭವಾನಿ ರೇವಣ್ಣ ಅವರು ಕಾರಿನಿಂದ ಇಳಿದು ಬಂದು ಬೈಕ್ ಸವಾರನಿಗೆ ಬೈಯುತ್ತಿಯುತ್ತಿದ್ದಾರೆ. ಡಿಕ್ಕೆ ಹೊಡೆಯೋಕೆ ನನ್ನ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ಟು ಹಾಕ್ರೋ ಈ ಗಾಡಿನ ಎಂದು ಹೇಳಿರುವುದು ಕಂಡು ಬಂದಿದೆ.
ಬಳಿಕ ವಾಹನದ ಮುಂಭಾಗ ಡ್ಯಾಮೇಜ್ ಆಗಿರುವುದು ನೋಡಿದ ಭವಾನಿ ರೇವಣ್ಣ ಅವರು, ಬೈಕ್ ಸವಾರನ ಮೊಬೈಲ್ ಕಸಿದುಕೊಂಡು ಬೈಕ್ ಕೀ ಕಿತ್ತುಕೊಂಡರು. ” ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದು ಕೇಳಿದರು. ಅಲ್ಲದೇ, ‘ಬಿಟ್ಬಿಡಿ ಅಕ್ಕ’ ಎಂದು ಮಧ್ಯಪ್ರವೇಶಿಸಿದ ಸ್ಥಳೀಯರಿಗೆ, ‘ ನೀವು 50 ಲಕ್ಷ ರೂ. ಕೊಡ್ತೀರಾ ರಿಪೇರಿ ಮಾಡಿಸೋಕೆ? ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಎಂದು ಗದರಿರುವುದು ಕೇಳಿಸುತ್ತದೆ.
‘ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ ಎಂದು ಅಭ್ಯ ಪದ ಬಳಸಿ ಹರಿಹಾಯ್ದಿದ್ದಾರೆ.
ಇದು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೆ. ಗಾಡಿ ಸೀಜ್ ಮಾಡಿಸು. ಈ ಗ್ರಾಮದ ಎಸ್ಐ ಬರೋಕೆ ಹೇಳಿ ಎಂದು ಹೇಳಿದ್ದು, ಬೈಕ್ ಸವಾರ ಮತ್ತು ಹಿಂಬದಿ ಸವಾರನ ಫೋಟೋವನ್ನು ಕ್ಲಿಕ್ಕಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
ಈ ನಡುವೆ ಘಟನೆಯ ವೀಡಿಯೊ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತದ ಬಳಿಕ ವಾಹನ ಸವಾರನ ಆರೋಗ್ಯ ವಿಚಾರಿಸದೇ ಕಾರಿನ ಬಗ್ಗೆ ಯೋಚಿಸಿ ಕೂಗಾಡಿದ ಭವಾನಿ ರೇವಣ್ಣ ಬಗ್ಗೆ ಹಲವರು ಆಕ್ಷೇಪಿಸಿದ್ದಾರೆ. ಕೆಲವರು ಅವರನ್ನು ಬೆಂಬಲಿಸಿದ್ದಾರೆ ಮತ್ತು ಬೈಕರ್ ರಸ್ತೆಯ ಮಾರ್ಗದಲ್ಲಿ ಸವಾರಿ ಮಾಡಬಾರದು ಎಂದು ಹೇಳಿದ್ದಾರೆ.
ಭವಾನಿ ರೇವಣ್ಣ ಅವರ ಪತಿ ಹೆಚ್ಡಿ ರೇವಣ್ಣ ಶಾಸಕರಾಗಿದ್ದು, ಅವರ ಪುತ್ರರಾದ ಪ್ರಜ್ವಲ್ ರೇವಣ್ಣ ಸಂಸದರು ಮತ್ತು ಸೂರಜ್ ರೇವಣ್ಣ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ