ಕುಮಟಾ; ಶನಿವಾರ ರಾತ್ರಿ ಬ್ರಹ್ಮೀಭೂತರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಮಠದ ಅವಧೂತ ಪರಂಪರೆಯ ಶ್ರೀರಾಮಾನಂದರು ಭಾನುವಾರ ಯತಿಪರಂಪರೆಯಂತೆ ಮಹಾಸಮಾಧಿ ಹೊಂದಿದರು. ಸ್ವಾಮೀಜಿ ಶನಿವಾರ ರಾತ್ರಿ ಮುಕ್ತಿಹೊಂದಿದ್ದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಭಾನುವಾರದಂದು ಶ್ರೀಮಠದಲ್ಲಿ ಮುಂಜಾನೆಯಿಂದಲೇ ಶ್ರೀರಾಮಾನಂದರ ಸಮಾಧಿ ಪ್ರಕ್ರಿಯೇ ಆರಂಭವಾಗಿತ್ತು. ಬೆಳಿಗ್ಗೆ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಬೆಳಿಗ್ಗೆ ೧೧ ರಿಂದ ಯತಿಪರಂಪರೆಯಂತೆ ಧಾರ್ಮಿಕ ಶಾಸ್ತ್ರೀಯ ಕಾರ್ಯಕ್ರಮ ಆರಂಭವಾಯಿತು.
ಆರಂಭದಲ್ಲಿ ಜಲಾಭಿಷೇಕ, ಪಂಚಾಮೃತ ಅಭಿಷೇಕದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡವು. ನಂತರ ವೇದಘೋಷ, ವಾದ್ಯಗಳೊಂದಿಗೆ ಮಠದಲ್ಲಿ ಮೆರವಣಿಗೆ ನಡೆಯಿತು. ಸಮಾಧಿ ಸ್ಥಳದಲ್ಲಿ ಯತಿಗಳಿಗೆ ಪುನಃ ಅಲಂಕೃತ ಪೂಜೆ ನೆರವೇರಿಸಲಾಯಿತು. ಶಾಸ್ತ್ರೀಯವಾಗಿ ಸಮಾಧಿಯನ್ನು ವಿಶಿಷ್ಟ ವಸ್ತು ಮಂತ್ರಘೋಷದೊಂದಿಗೆ ಶುದ್ಧೀಕರಿಸಲಾಯಿತು. ಸಮಾಧಿ ಸ್ಥಳದಲ್ಲಿ ನವರತ್ನ, ಪಂಚಲೋಹ,ಕಮಂಡಲ,ದೇವತಾ ಸಾಲಿಗ್ರಾಮವನ್ನು ಸಮಾಧಿಯಲ್ಲಿ ಇಟ್ಟು ಮಂತ್ರ ಘೋಷದೊಂದಿಗೆ ಬ್ರಹ್ಮಸ್ಫೋಟ ಮಾಡಲಾಯಿತು. ಮರಳು, ಉಪ್ಪು,ಕರ್ಪೂರ, ದ್ರವ್ಯಾಧಿಗಳೂಂದಿಗೆ ಶ್ರೀರಾಮಾನಂದರ ದೇಹವನ್ನುಪಂಚ ಭೂತಗಳಿಂದ ಒಳಗೊಂಡಿರುವ ದೇಹವನ್ನು ಪುರುಷ ಸೂಕ್ತ ಇತ್ಯಾದಿ ಐಕ್ಯ ಮಂತ್ರಗಳೊಂದಿಗೆ ಜನರ ಶ್ರೀರಾಮನ ಜೈಕಾರ ಘೋಷಣೆಯೊಂದಿಗೆ ಸಮಾಧಿ ಮಾಡಲಾಯಿತು.
ರಾಜ್ಯಾದ್ಯಂತ ಭಕ್ತರು ಗಣ್ಯರ ಆಗಮನ; ಶ್ರೀಗಳ ದರ್ಶನಕ್ಕಾಗಿ ವಿವಿಧ ದೇವಾಲಯಗಳ ಮುಖ್ಯಸ್ಥರು,ಮಠಗಳ ವೇದ ಮೂರ್ತಿಗಳು ಆಗಮಿಸಿದ್ದರು. ಟ್ರಸ್ಟ್ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಸ್ಥಳದಲ್ಲಿಯೇ ಇದ್ದು ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಶಾಸಕ ದಿನಕರ ಶೆಟ್ಟಿ, ಡಾ.ಸುರೇಶ ಹೆಗಡೆ, ಹವ್ಯಕ ಸಂಘಟನೆ ಮುಖ್ಯಸ್ಥರು, ವಿವಿಧ ಸಮಾಜಗಳ ಗಣ್ಯರು ಆಗಮಿಸಿ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು. ವೇದಮೂರ್ತಿ ವಿಶ್ವನಾಥ ನಿರಗಾನ, ವೇ.ಗಜಾನನ ಹಿರೇಗಂಗೆ ಮುಂತಾದ ವೈದಿಕರೊಂದಿಗೆ ಸುಬ್ರಾಯ ಭಟ್ಟ ತಂಬಲಿ ಹೊಂಡ ಅವರ ಯಜಮಾನತ್ವದಲ್ಲಿ ಕಾರ್ಯಕ್ರಮ ನೆರವೇರಿತು..
ನಿಮ್ಮ ಕಾಮೆಂಟ್ ಬರೆಯಿರಿ