ವೀಡಿಯೊ | ಮರದಿಂದ ಹೊರಚಿಮ್ಮಿದ ನೀರು ; ಪವಿತ್ರ ಜಲ ಎಂದು ಕುಂಕುಮ ಹಚ್ಚಿ ಪೂಜಿಸಿದ ಜನ : ನಿಜಕ್ಕೂ ಆಗಿದ್ದೇನಂದ್ರೆ…

ಕುರುಡು ಭಕ್ತಿಯು ಮೂಢನಂಬಿಕೆಗೆ ಕಾರಣವಾಗುವ ಪ್ರಕರಣವೊಂದಕ್ಕೆ ಪುಣೆಯ ವೀಡಿಯೊ ವೈರಲ್ ಪುಷ್ಟಿ ನೀಡಿದೆ. ಸ್ಥಳೀಯರು ಹೂವುಗಳು, ಅರಿಶಿನ ಮತ್ತು ಕುಂಕುಮವನ್ನು ಮರದ ಕಾಂಡಕ್ಕೆ ಅರ್ಪಿಸುವುದನ್ನು ಇದು ತೋರಿಸುತ್ತದೆ. ಅದು ಪವಿತ್ರ ನೀರನ್ನು ಹೊರಹಾಕುತ್ತಿದೆ ಎಂದು ಜನರು ಭಾವಿಸಿ ಜನರು ಅದಕ್ಕೆ ಪೂಜೆ ಮಾಡಿದ್ದಾರೆ. ಆದರೆ, ನಂತರ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ತಪಾಸಣೆ ಮಾಡಿದ ನಂತರ ಈ ನೀರು ವಾಸ್ತವವಾಗಿ ನೆಲದಡಿ ಹುಗಿದ ಪೈಪ್‌ಲೈನ್‌ನಿಂದ ಸೋರಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜೂನ್ 6ರಂದು ಸಹಾರಾ ಸೊಸೈಟಿಯ ಹೊರಗಿನ ಮುಖ್ಯ ರಸ್ತೆಯ ಬಳಿ ಈ ಘಟನೆ ನಡೆದಿದೆ. ನೋಡುಗರು ದಾಖಲಿಸಿದ ವೀಡಿಯೊದಲ್ಲಿ ಜನರು ಹೂಮಾಲೆಗಳನ್ನು ಅರ್ಪಿಸಿ ಮರದ ಕಾಂಡದ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚಿದ್ದು ವೀಡಿಯೊದಲ್ಲಿ ಕಂಡುಬಂದಿದೆ. ಇದು ಏನೇ ಆದರೂ ಗುಣಪಡಿಸುವ ಶಕ್ತಿ ಹೊಂದಿರುವ “ಪವಾಡ ನೀರು” ಎಂದು ಅನೇಕರು ನಂಬಿದ್ದರು.

ಆದರೆ ಈ ಘಟನೆ ಬೆಳಕಿಗೆ ಬಂದ ನಂತರ, ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (PCMC) ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತು, ನಂತರ ಭೂಗತ ನೀರಿನ ಪೈಪ್ ಸೋರಿಕೆಯಾಗಿ ಇದು ಸಂಭವಿಸಿದೆ ಎಂಬುದು ಪತ್ತೆಯಾಯಿತು ಎಂದು ವರದಿಯಾಗಿದೆ.
“ಪಿಂಪ್ರಿ ಚಿಂಚವಾಡ ಸುತ್ತಮುತ್ತಲಿನ ಮರದಿಂದ ನೀರು ಬರುತ್ತಿರುವುದನ್ನು ನೋಡಿದ ಜನರು, ಹೂಮಾಲೆ, ಹೂವು, ಅರಿಶಿನ ಮತ್ತು ಕುಂಕುಮ ಅರ್ಪಿಸುವ ಮೂಲಕ ಮರವನ್ನು ಪೂಜಿಸಲು ಪ್ರಾರಂಭಿಸಿದರು. ನಂತರ, ಕೆಲವು ಉತ್ತಮ ಮಾಹಿತಿಯುಳ್ಳ ನಾಗರಿಕರು ಈ ಬಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ಗೆ ಮಾಹಿತಿ ನೀಡಿದರು ಮತ್ತು ತಪಾಸಣೆಯ ಸಮಯದಲ್ಲಿ, ಮರದ ಕೆಳಗಿರುವ ನೀರಿನ ಪೈಪ್‌ಲೈನ್ ಒಡೆದಿರುವುದು ತಿಳಿದುಬಂದಿದೆ” ಎಂದು ಬಳಕೆದಾರರು X ನಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

“ಇದು ಮೂಢನಂಬಿಕೆಯ ಪರಮಾವಧಿ. ಎರಡು ಸಾವಿರ ವರ್ಷಗಳ ಹಿಂದೆ ವಿಶ್ವ ಗುರು ಎಂದು ಕರೆಯಲ್ಪಡುತ್ತಿದ್ದ ಭಾರತ; ಜಗತ್ತಿನಲ್ಲಿ ಬೇರೆಲ್ಲಿಯೂ ಒಂದೇ ಸ್ಥಳದಲ್ಲಿ ಕಂಡುಬರದ ಅನೇಕ ತತ್ವಜ್ಞಾನಿಗಳಿದ್ದ ಭಾರತ, ಇಂದು ಅದರ ಸ್ಥಿತಿಯನ್ನು ನೋಡಿ ದುಃಖವಾಗುತ್ತದೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ಈ ರೀತಿಯ ವಿಷಯಗಳು 2025 ರಲ್ಲಿಯೂ ಸಂಭವಿಸಿದರೆ ನಾವು ಒಂದು ರಾಷ್ಟ್ರವಾಗಿ ಹೇಗೆ ಪ್ರಗತಿ ಹೊಂದಬಹುದು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಯನ್ನು ಬೆನ್ನಟ್ಟಿದ ವೇಗದಲ್ಲೇ ಪವಾಡಗಳನ್ನೂ ಬೆನ್ನಟ್ಟುತ್ತೇವೆ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಇಂತಹ ಘಟನೆ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಮಥುರಾದ ಪೂಜ್ಯ ಬಂಕೆ ಬಿಹಾರಿ ಮಂದಿರದಲ್ಲಿ ಇದೇ ರೀತಿಯ ವಿದ್ಯಮಾನ ಬೆಳಕಿಗೆ ಬಂದಿತ್ತು, ಅಲ್ಲಿ ಭಕ್ತರು ಆನೆಯ ಶಿಲ್ಪದಿಂದ ತೊಟ್ಟಿಕ್ಕುವ ನೀರನ್ನು ಸಂಗ್ರಹಿಸಿ ಕುಡಿಯಲು ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತಿದ್ದರು, ಅದು ಶ್ರೀಕೃಷ್ಣನ ಪಾದಗಳಿಂದ ಬಂದ ಪವಿತ್ರ ನೀರು ಎಂದು ನಂಬಿದ್ದರು. ಆದಾಗ್ಯೂ, ನೀರು ಹವಾನಿಯಂತ್ರಣ ಘಟಕದಿಂದ ಸೋರಿಕೆಯಾದ ನೀರಾಗಿತ್ತು ಎಂದು ದೇವಾಲಯದ ಅರ್ಚಕರೊಬ್ಬರು ದೃಢಪಡಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ ನಂತರವೂ ಹಲವಾರು ಭಕ್ತರು ನೀರನ್ನು ಸಂಗ್ರಹಿಸುವುದು, ಕುಡಿಯುವುದು ಮತ್ತು ಸಿಂಪಡಣೆ ಮಾಡುವುದನ್ನು ಮುಂದುವರೆಸಿದ್ದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement