ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮ ಎಂಬುದು ಮೋಸ ಎಂದು ಹೇಳಿರುವ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿದ್ದಾರೆ. “1955 ರಲ್ಲಿ, ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹಿಂದೂ ಧರ್ಮವಲ್ಲ ಆದರೆ ಜೀವನ ವಿಧಾನ ಎಂದು ಹೇಳಿದೆ” ಎಂದು ಮೌರ್ಯ ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ಸೋಮವಾರ ನಡೆದ ಬಹುಜನ ಸಮಾಜ ಹಕ್ಕುಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೌರ್ಯ, ಸೋಮವಾರ ಹಿಂದೂ ಧರ್ಮವನ್ನು ಮೋಸ ಎಂದು ಕರೆದರು.
“ಹಿಂದೂ ಧರ್ಮ ಏಕ್ ಧೋಖಾ ಹೈ(ಹಿಂದೂ ಎಂಬುದು ಮೋಸ)” ಎಂದು ಸ್ವಾಮಿ ಪ್ರಸಾದ ಮೌರ್ಯ ಹೇಳಿದ್ದು, ಅದಕ್ಕೆ ಅವರು ಸುಪ್ರೀಂ ಕೋರ್ಟ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಹಿಂದೂ ಧರ್ಮ ಒಂದು ಧರ್ಮವಲ್ಲ, ಅದು ಕೇವಲ “ಜೀವನ ವಿಧಾನ” ಎಂದು ಅವರು ಹೇಳಿದ್ದಾರೆ.
ಮೋಹನ್ ಭಾಗವತ್ ಕೂಡ ಒಂದಲ್ಲ ಎರಡೆರಡು ಬಾರಿ ಹಿಂದೂ ಎನ್ನುವುದು ಧರ್ಮವಲ್ಲ, ಅದು ಜೀವನ ವಿಧಾನ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದೂ ಧರ್ಮ ಒಂದು ಧರ್ಮವಲ್ಲ ಎಂದು ಹೇಳಿದ್ದಾರೆ. ಅವರು ಇಂತಹ ಹೇಳಿಕೆ ನೀಡಿದಾಗ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅದನ್ನು ಹೇಳಿದರೆ, ಅಶಾಂತಿಗೆ ಕಾರಣವಾಗುತ್ತದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ” ಎಂದು ವಾಗ್ದಾಳಿ ನಡೆಸಿದ್ದಾರೆ.
1955ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ‘ಹಿಂದೂ ಒಂದು ಧರ್ಮವಲ್ಲ, ಬದಲಿಗೆ ಜೀವನ ವಿಧಾನ’ ಎಂದು ಹೇಳಲಾಗಿದೆ. ಅದು 200ಕ್ಕೂ ಹೆಚ್ಚು ಧರ್ಮಗಳ ಮಿಶ್ರಣವಾಗಿದೆ ಎಂದು ಮೌರ್ಯ ಹೇಳಿದ್ದಾರೆ.
ಮೌರ್ಯ ಅವರ ಹೇಳಿಕೆಯನ್ನು ಅನುಸರಿಸಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ಧರ್ಮ ಮತ್ತು ಜಾತಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಲಕ್ನೋದಲ್ಲಿರುವ ಪಕ್ಷದ ರಾಜ್ಯ ಕೇಂದ್ರ ಕಚೇರಿಯಲ್ಲಿ ಕನೌಜ್ನ ಪ್ರಬುದ್ಧ ಸಮಾಜ ಮತ್ತು ಮಹಾಬ್ರಾಹ್ಮಣ ಸಮಾಜ ಪಂಚಾಯತದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ ಯಾದವ್, ನಾಯಕರು ಧರ್ಮ ಮತ್ತು ಜಾತಿಯ ಬಗ್ಗೆ ಕಾಮೆಂಟ್ ಮಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಸ್ವಾಮಿ ಮೌರ್ಯ ಅವರ ಹೆಸರನ್ನು ತೆಗೆದುಕೊಳ್ಳದೆ ಅವರ ಹೇಳಿಕೆಗೆ ಪಕ್ಷದ ಕೆಲವು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಹಾ ಪಂಚಾಯತದಲ್ಲಿ ವಿಷಯ ಪ್ರಸ್ತಾಪಿಸಿದಾಗ ಅಖಿಲೇಶ ಯಾವುದೇ ಬೆಲೆ ತೆತ್ತಾದರೂ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒಪ್ಪಿಕೊಂಡರು.
ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಮೌರ್ಯ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಉತ್ತರ ಪ್ರದೇಶದ ಪ್ರಮುಖ ಒಬಿಸಿ ನಾಯಕರಾದ ಮೌರ್ಯ ಅವರು ರಾಮಚರಿತಮಾನಗಳ ಕೆಲವು ಶ್ಲೋಕಗಳು ಜಾತಿಯ ಆಧಾರದ ಮೇಲೆ ಸಮಾಜದ ದೊಡ್ಡ ವರ್ಗವನ್ನು ಅವಮಾನಿಸುತ್ತವೆ ಮತ್ತು ಇವುಗಳನ್ನು “ನಿಷೇಧಿಸಬೇಕು” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.
ಬಿಜೆಪಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಮೌರ್ಯ ಅವರು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲು ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಅನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ