ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಗುರುವಾರ ಜಾಮೀನು ನಿರಾಕರಿಸಿದೆ. ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ರನ್ಯಾ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರ ಕಾಯ್ದಿರಿಸಿತ್ತು.
ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ಬೆಂಗಳೂರಿನ 64ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಈರಪ್ಪಣ್ಣ ಪವಡಿ ನಾಯ್ಕ್‌ ಗುರುವಾರ ಪ್ರಕಟಿಸಿದರು.
ರನ್ಯಾ ಪರ ಹಿರಿಯ ವಕೀಲ ಕಿರಣ ಜವಳಿ, “ಬಂಧಿಸಿದ ಬಳಿಕ ರನ್ಯಾಗೆ ಏಕೆ ಬಂಧಿಸಲಾಗುತ್ತಿದೆ ಎಂಬ ಮೆಮೊ ನೀಡಲಾಗಿಲ್ಲ. ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 102ರ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಶೋಧ ನಡೆಸಬೇಕಿತ್ತು. ಆದರೆ, ಅದನ್ನು ಅನುಪಾಲಿಸಲಾಗಿಲ್ಲ. ಆರೋಪಿತ ಅಪರಾಧವು ಜೀವಾವಧಿ ಅಥವಾ ಮರಣ ದಂಡನೆ ವಿಧಿಸುವ ಶಿಕ್ಷೆಯಾಗಿಲ್ಲವಾದ್ದರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 480, ಉಪ ಸೆಕ್ಷನ್‌ 1ರ ಅಡಿ ಮಹಿಳೆಯಾಗಿರುವುದರಿಂದ ಬಿಡುಗಡೆ ಮಾಡಬೇಕು” ಎಂದು ವಾದಿಸಿದರು.

ಡಿಆರ್‌ಐ ಪ್ರತಿನಿಧಿಸಿದ್ದ ವಕೀಲ ಮಧು ಎನ್.ರಾವ್‌, “ರನ್ಯಾ ಎಸಗಿರುವ ಅಪರಾಧಕ್ಕೆ ಏಳು ವರ್ಷ ಜೈಲು ಮತ್ತು ದಂಡ ವಿಧಿಸಬಹುದಾಗಿದೆ. ಆರೋಪಿತ ಅಪರಾಧವು ಭಾರತದ ಆರ್ಥಿಕತೆಗೆ ಹೊಡೆತ ನೀಡಲಿದ್ದು, ರಾಷ್ಟ್ರದ ಭದ್ರತೆಗೆ ಅಪಾಯ ಉಂಟು ಮಾಡಲಿದೆ. ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 104ರ ಅಡಿ ನಿಯಮಬದ್ಧವಾಗಿ ಆಕೆಯನ್ನು ಬಂಧನ ಪ್ರಕ್ರಿಯೆ ನಡೆಸಲಾಗಿದೆ. ರನ್ಯಾ ಬಳಿ ಯುಎಇ ನಿವಾಸಿ ಕಾರ್ಡ್‌ ಇದ್ದು, ಆಕೆಗೆ ಜಾಮೀನು ನೀಡಿದರೆ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ” ಎಂದು ವಾದಿಸಿದ್ದರು.
ಮಾರ್ಚ್‌ 3ರ ಸಂಜೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135(1)(i) ಅಡಿ ರನ್ಯಾಳನ್ನು ಬಂಧಿಸಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement