ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಜೈನರ ಕ್ಷಮೆಯಾಚಿಸಿದ ಹಂಸಲೇಖ

ಬೆಂಗಳೂರು: ಜೈನ ಸಮುದಾಯದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚಿಸಿದ್ದಾರೆ. ಹೇಳಿಕೆ ಕುರಿತು ಲಿಖಿತ ಹಾಗೂ ವೀಡಿಯೊ ಮೂಲಕ ಕ್ಷಮೆಯಾಚಿಸಿದ ತಮ್ಮ ಹೇಳಿಕೆಯನ್ನು ಹಂಸಲೇಖ ಬಿಡುಗಡೆಗೊಳಿಸಿದ್ದಾರೆ.
ಸೋಮವಾರ ಗೌರಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಹಂಸಲೇಖ, ಜೈನರ ಫಿಲಾಸಫಿಯಲ್ಲಿ 24 ಜನ್ಮಗಳಿವೆ ಅಂತಾರೆ, ಅದೆಲ್ಲ ಬುಲ್ ಶಿಟ್ ಎಂದು ಹೇಳಿದ್ದರು. ಈ ಹೇಳಿಕೆ ಜೈನ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಹಂಸಲೇಖ ಜೈನ ಸಮುದಾಯದ ಜನತೆ ಬಳಿ ಕ್ಷಮೆ ಯಾಚಿಸಿದ್ದಾರೆ.
ಹಂಸಲೇಖ ಹೇಳಿಕೆ…
ಕ್ಷಮೆಯಿರಲಿ, ನನ್ನ ಪಂಪನಾಣೆ, ನನ್ನ ಪದ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮೆರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ, ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸುಮುದಾಯಕ್ಕೆ ಶಿರವಾಗಿ ಕ್ಷಮೆ ಕೋರುತ್ತೇನೆ ಎಂದು ಹಂಸಲೇಖ ಹೇಳಿದ್ದಾರೆ.
ಪ್ರಿಯ ಮಾಧ್ಯಮಗಳೇ, ದಯಮಾಡಿ, ನಾನು ದುಡುಕಿ ಮಾತಾಡಿದ ಆ ಬುಲ್‌ಶಿಟ್‌ (Bullshit) ಪದವನ್ನು ಡಿಲೀಟ್‌ (Delete) ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿ ಮಾಡಲು ಈ ಮೂಲಕ ಕೋರುತ್ತಿದ್ದೇನೆ. ಆಡು ಮಾತುಗಳನ್ನು ಕಾಯ್ನ್‌ (COIN) ಮಾಡುವ ನನ್ನಂತ ಸಿನಿಮಾ ರೈಟರ್‌ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ.
ಆ ಮಾತು ನನ್ನ ಬಾಯಿಂದ ಅಲ್ಲಿ ಹೊರಟ ಹಿನ್ನೆಲೆ ಹೀಗಿದೆ. ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಚಾನೆಲ್ ಅವರು ಪ್ರತ್ಯೇಕ ಬೈಟ್‌ಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರ ಬಂದೆ. ನನ್ನ ಸಹಾಯಕ , ನನ್ನನ್ನ ಹೊಗಳಿದ. ಸಿಟ್ಟು ತಡೆಯಲಾಗಲಿಲ್ಲ ಆದರೂ ತಡೆದುಕೊಂಡಿದ್ದು ಒಳ್ಳೆದಾಯ್ತು ಸಾರ್ ಎಂದು ಹೇಳಿದ. ಆಗ ನಾನು ಆತನಿಗೆ ʼಸಿಟ್ಟು ಹೋಗಿ ಬರೋ ಬುಲೆಟ್ಟುʼ ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು, ಸಿಟ್ಟು ಒಂದು ಬುಲ್ಶಿಟ್ಟು ಎಂದೆ. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೆ ನಡೆದಿದ್ದು. ದಯವಿಷ್ಟು ಕ್ಷಮಿಸಿ ಎಂದು ಹಂಸಲೇಖ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement