ಬೆಂಗಳೂರು: ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ನಡೆದ ರಸ್ತೆ ಜಗಳದ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಅವರ ಗನ್ಮ್ಯಾನ್ ಮತ್ತು ಚಾಲಕನ ವಿರುದ್ಧ ದಾಬಸ್ಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹಳೆ ನಿಜಗಲ್ ಬಳಿ ಅನಂತಕುಮಾರ ಹೆಗಡೆ ಅವರು ಕಾರಿನಲ್ಲಿ ಬರುತ್ತಿದ್ದಾಗ, ಅವರ್ ಕಾರನ್ನು ಓವರ್ ಟೇಕ್ ಮಾಡಿದ ಕಾರನ್ನು ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೊಂದು ಕಾರನ್ನು ಸೈಫ್ ಖಾನ್ ಎಂಬುವವರು ಚಲಾಯಿಸುತ್ತಿದ್ದು ಅವರ ಕಾರು ಅನಂತಕುಮಾರ ಹೆಗಡೆ ಅವರ ಕಾರನ್ನು ಓವರ್ ಟೇಕ್ ಮಾಡಿಕೊಂಡು ಮುಂದೆ ಹೋದ ನಂತರ ಇವರ ಮುಂದಕ್ಕೆ ಹೋಗಲು ದಾರಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಓವರ್ ಟೇಕ್ ಮಾಡಿ ಕಾರು ನಿಲ್ಲಿಸಿ ವಾಗ್ವಾದ ನಡೆದಿದ್ದು ವಿಕೋಪಕ್ಕೆ ಹೋಯಿತು ಎನ್ನಲಾಗಿದೆ.
ಹೆಗಡೆ ಅವರ ಕಾರು ಚಾಲಕ, ಸೈಫ್ ಖಾನ್ ಅವರ ಕಾರಿಗೆ ಎರಡು ಮೂರು ಬಾರಿ ಹಾರ್ನ್ ಮಾಡಿದ್ದರೂ ಸೈಫ್ ಖಾನ್ ಅದನ್ನು ಗಮನಿಸದೆ ಚಾಲನೆಯನ್ನು ಮುಂದುವರೆಸಿದರು. ಇದಕ್ಕೆ ಕೋಪದಿಂದ ಹೆಗಡೆ ಅವರ ಕಾರು ಚಾಲಕ ಎಸ್ಯುವಿಯನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಜಗಳ ನಡೆದಿದ್ದು, ಇದು ವಿಕೋಪಕ್ಕೆ ಹೋಗಿ, ಹೆಗಡೆ ಅವರ ಚಾಲಕ ಮತ್ತು ಗನ್ಮ್ಯಾನ್ ಇಬ್ಬರೂ ಹೊರಬಂದು ಸೈಫ್ ಖಾನ್ ಮತ್ತು ಇತರ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸೈಫ್ ಖಾನ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ, ಕುಟುಂಬದವರ ಹೇಳಿಕೆಯನ್ನು ದಾಖಲಿಸಲಾಗಿದೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಇತರರನ್ನು ನೆಲಮಂಗಲದ ಸಮೀಪದ ಡಿವೈಎಸ್ಪಿ ಕಚೇರಿಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಓವರ್ ಟೇಕ್ ವೇಳೆ ಕಾರಿಗೆ ಮತ್ತೊಂದು ಕಾರ್ ಟಚ್ ಆಗಿದ್ದಕ್ಕೆ ಗಲಾಟೆ ನಡೆದೆ ಎಂದು ತಿಳಿಸಿದ್ದಾರೆ. ತಾವು ಕಾರಿನಲ್ಲಿದ್ದೆ, ಹಲ್ಲೆ ಮಾಡಿಲ್ಲ ಎಂದೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ