ರಾಯ್ಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿನ ಅಮೆರಿಕ ಭೇಟಿಯ ವೇಳೆ ನೀಡಿದ ಹೇಳಿಕೆಗಳು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದೆ ಎಂದು ಆರೋಪಿಸಿ ಛತ್ತೀಸ್ಗಢದಲ್ಲಿ ರಾಹುಲ್ ಗಾಂಧಿಯವರ ಮೇಲೆ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ರಾಜಧಾನಿ ರಾಯ್ಪುರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಮತ್ತು ಬಿಲಾಸ್ಪುರ ಜಿಲ್ಲೆಯ ಬಿಲಾಸ್ಪುರ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ದಾಖಲಾಗಿದ್ದರೆ, ಶುಕ್ರವಾರ ದುರ್ಗ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ಮುಖಂಡರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಆಡಳಿತ ಪಕ್ಷದ ನಾಯಕರಿಂದಲೂ ಇದೇ ರೀತಿಯ ದೂರುಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ಬಿಜೆಪಿ ವಕ್ತಾರ ಅಮರ್ಜೀತ್ ಸಿಂಗ್ ಛಾಬ್ರಾ, ರಾಯ್ಪುರದಲ್ಲಿ ಸಲ್ಲಿಸಿದ ದೂರಿನಲ್ಲಿ ಸಿಖ್ಖರಿಗೆ ಪೇಟ ಅಥವಾ ‘ಕಡಾ’ ಧರಿಸಲು ಅವಕಾಶವಿದೆಯೇ ಮತ್ತು ಭಾರತದಲ್ಲಿ ಗುರುದ್ವಾರಗಳಿಗೆ ಹೋಗಲು ಅವಕಾಶ ನೀಡಬಹುದೇ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯು ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಛಾಬ್ರಾ ದೂರಿನಲ್ಲಿ ತಿಳಿಸಿದ್ದಾರೆ.
“ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಸಿಖ್ ಸಮುದಾಯವು ಪೇಟ ಧರಿಸುವುದನ್ನು ಮತ್ತು ಗುರುದ್ವಾರಗಳಿಗೆ ಭೇಟಿ ನೀಡುವುದನ್ನು ಎಲ್ಲಿಯೂ ನಿಷೇಧಿಸಿಲ್ಲ, ಪ್ರಧಾನಿ ಕೂಡ ಪೇಟವನ್ನು ಧರಿಸಿ ಗುರುದ್ವಾರಗಳಿಗೆ ಭೇಟಿ ನೀಡುತ್ತಾರೆ. ರಾಹುಲ್ ಗಾಂಧಿಯವರ ಹೇಳಿಕೆಯು ಸಿಖ್ಖರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ