ಗುವಾಹತಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಭಾರಿ ಆಘಾತ ಎದುರಾಗಿದ್ದು, ಹಿರಿಯ ನಾಯಕ ಭೂಪೇನ್ ಬೋರಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ಈ ಮಹತ್ವದ ಘೋಷಣೆ ಮಾಡಿದ್ದು, ಫೆಬ್ರವರಿ 22 ರಂದು ಬೋರಾ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.
ಗುವಾಹತಿ ಮತ್ತು ಉತ್ತರ ಲಖಿಂಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭೂಪೇನ್ ಬೋರಾ ಅವರೊಂದಿಗೆ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಇವರ ಸೇರ್ಪಡೆಗೆ ಅನುಮೋದನೆ ನೀಡಿದ್ದಾರೆ. ದಿಲೀಪ್ ಸೈಕಿಯಾ ಅವರು ಈ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
“ಬಿಜೆಪಿಯಲ್ಲಿ ಭೂಪೇನ್ ಬೋರಾ ಅವರಿಗೆ ಸಕಲ ಗೌರವ ನೀಡಲಾಗುವುದು. ಇದು ಅವರಿಗೆ ‘ಮನೆಗೆ ಮರಳಿದಂತೆ’ (Homecoming). ಇಲ್ಲಿ ಸಾಮಾನ್ಯ ಹಿನ್ನೆಲೆಯುಳ್ಳವರಿಗೆ ಹೆಚ್ಚಿನ ಸ್ಥಾನಮಾನವಿದೆ” ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಭೂಪೇನ್ ಬೋರಾ ಅಸಮಾಧಾನ
ದೀರ್ಘಕಾಲ ಕಾಂಗ್ರೆಸ್ನಲ್ಲಿ ಸೇವೆ ಸಲ್ಲಿಸಿದ್ದ ಬೋರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಮತ್ತು ಸರಿಯಾದ ಸ್ಥಾನಮಾನ ನೀಡುತ್ತಿಲ್ಲ ಎಂದು ಅವರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು 32 ವರ್ಷಗಳ ಕಾಲ ಕಾಂಗ್ರೆಸ್ ಸೇವೆ ಮಾಡಿದ್ದೇನೆ. ಪಕ್ಷದ ಭವಿಷ್ಯದ ಬಗ್ಗೆ ನನಗೆ ಆತಂಕವಿದೆ. ಗುಪ್ತವಾಗಿ ನಾನು ಈ ನಿರ್ಧಾರ ಕೈಗೊಂಡಿಲ್ಲ, ಎಲ್ಲವನ್ನೂ ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸುತ್ತೇನೆ,” ಎಂದು ಭೂಪೇನ್ ಬೋರಾ ತಿಳಿಸಿದ್ದಾರೆ.
ಸಿಎಂ ಭೇಟಿ ಮತ್ತು ಸ್ವಾಗತ
ರಾಜೀನಾಮೆ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬೋರಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬೋರಾ ಅವರ ಕುಟುಂಬದವರು ಮುಖ್ಯಮಂತ್ರಿಗಳನ್ನು ಆರತಿ ಬೆಳಗಿ ಆತ್ಮೀಯವಾಗಿ ಸ್ವಾಗತಿಸಿದರು. ಬೋರಾ ಅವರನ್ನು ಅಸ್ಸಾಂ ವಿಧಾನಸಭೆಯ “ಸುರಕ್ಷಿತ ಕ್ಷೇತ್ರ”ದಿಂದ ಗೆಲ್ಲಿಸುವ ಭರವಸೆಯನ್ನು ಮುಖ್ಯಮಂತ್ರಿ ಹಿಮಂತ ಶರ್ಮಾ ನೀಡಿದ್ದಾರೆ.
ಯಾರು ಈ ಭೂಪೇನ್ ಬೋರಾ?
2021 ರಿಂದ 2025 ರವರೆಗೆ ಅಸ್ಸಾಂ ರಾಜ್ಯ ಕಾಂಗ್ರೆಸ್ ಸಮಿತಿಯ (APCC) ಅಧ್ಯಕ್ಷರಾಗಿದ್ದರು. ಎರಡು ಬಾರಿ ಅಸ್ಸಾಂ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷವಷ್ಟೇ ಅಸ್ಸಾಂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗೌರವ್ ಗೊಗೊಯ್ ಅವರನ್ನು ನೇಮಿಸಲಾಗಿತ್ತು. ಭೂಪೇನ್ ಬೋರಾ ಅವರ ನಿರ್ಗಮನದಿಂದ ಅಸ್ಸಾಂನಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ