ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ | ರಾಜಕೀಯ ವಿವಾದಕ್ಕೆ ಕಾರಣವಾದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ 5ನೇ ಸಾಲಿನಲ್ಲಿ ಆಸನ ವ್ಯವಸ್ಥೆ

ನವದೆಹಲಿ: ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ “ಐದನೇ ಸಾಲಿನಲ್ಲಿ ಆಸನ ವ್ಯವಸ್ಥೆ” ಮಾಡಿರುವುದು ರಾಜಕೀಯ ವಿವಾದಕ್ಕ ಕಾರಣವಾಗಿದೆ. ಹಾಗೂ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಸರ್ಕಾರ ಗೌರವ ಕೊಡುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.
ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಐದನೇ ಸಾಲಿನಲ್ಲಿ ಆಸನ ಕಲ್ಪಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಇದು ‍ಪ್ರಧಾನಿ ನರೇಂದ್ರ ಮೋದಿಯವರ ಸಣ್ಣತನ ಹಾಗೂ ಪ್ರಜಾಪ್ರಭುತ್ವ ಸಂಪ್ರದಾಯಗಳ ಬಗ್ಗೆ ಇರುವ ಗೌರವದ ಕೊರತೆಯನ್ನು ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಪ್ರಧಾನಿ ನರೇಂದ್ರ ಮೋದಿ ಒಬ್ಬ ಕ್ಷುಲಕ ಮನಸ್ಥಿತಿಯ ವ್ಯಕ್ತಿ ಎಂಬುದಕ್ಕೆ ಅವರೇ ಪದೇ ಪದೇ ಸಾಕ್ಷಿ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಹೇಳಿದ್ದಾರೆ.

‘ಕ್ಷುಲಕ ಮನಸ್ಥಿತಿ ಇರುವವರಿಂದ ದೊಡ್ಡದ್ದನ್ನು ಬಯಸುವುದು ತಪ್ಪು. ಸ್ವಾತಂತ್ರ್ಯ ದಿನಾಚರಣೆ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಐದನೇ ಸಾಲಿನಲ್ಲಿ ಕೂಡ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಹತಾಶೆಯನ್ನು ಹೊರಗೆ ಹಾಕಿದ್ದಾರೆ. ಆದರೆ ಇದು ರಾಹುಲ್ ಗಾಂಧಿ ಅವರ ಮೇಲೆ ಪರಿಣಾಮ ಬೀರದು. ಅವರು ಈ ಹಿಂದಿನಂತೆ ಜನರ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ’ ಎಂದು ಸುಪ್ರಿಯಾ ಶ್ರೀನಾತೆ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊ ‍ಪೋಸ್ಟ್‌ನಲ್ಲಿ ಹೇಳಿದ್ದಾರೆ. ‘ ವಿಪಕ್ಷದ ನಾಯಕನಿಗೆ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ ಇದೆ. ಸಚಿವರೆಲ್ಲರೂ ಮೊದಲ ಸಾಲಿನಲ್ಲಿದ್ದರು. ಆದರೆ ವಿಪಕ್ಷದ ನಾಯಕ ರಾಹುಲ್‌ ಗಾಂಧಿಯವರಿಗೆ ಐದನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿದ್ದರು. ಇದು ಪ್ರಸ್ತುತ ಸರ್ಕಾರಕ್ಕೆ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ವಿಪಕ್ಷದ ನಾಯಕನ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ತೋರಿಸುತ್ತದೆ.ರಾಹುಲ್ ಗಾಂಧಿ ಮಾತ್ರವಲ್ಲ, ಮಲ್ಲಿಕಾರ್ಜುನ ಖರ್ಗೆಯವರಿಗೂ 5ನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದವರನ್ನು ಗೌರವಿಸಲು ಈ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮೂರ್ಖ ಹೇಳಿಕೆ ರಕ್ಷಣಾ ಸಚಿವಾಲಯದಿಂದ ಬಂದಿದೆ. ಅವರನ್ನು ಗೌರವಿಸಲೇಬೇಕು. ಅವರ ಜೊತೆಗೆ ವಿನೇಶ್ ಫೋಗಟ್ ಅವರನ್ನೂ ಗೌರವಿಸಬೇಕಿತ್ತು. ಆದರೆ ಮುಂದಿನ ಸಾಲಿನಲ್ಲಿ ಕುಳಿತ ಅಮಿತ್ ಶಾ, ಜೆಪಿ ನಡ್ಡಾ, ಎಸ್ ಜೈಶಂಕರ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಕ್ರೀಡಾಪಟುಗಳನ್ನು ಗೌರವಿಸಬೇಕು ಎಂದು ಅನಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
‘ರಾಹುಲ್ ಗಾಂಧಿ ಐದನೇ ಸಾಲಿನಲ್ಲಿ ಕುಳಿತರೂ ಅಥವಾ ಐವತ್ತನೇ ಸಾಲಿನಲ್ಲಿ ಕುಳಿತುಕೊಂಡರೂ, ಅವರು ಜನನಾಯಕರಾಗಿ ಉಳಿಯುತ್ತಾರೆ. ಆದರೆ ನೀವು ಇಂತಹ ಕ್ಷುಲ್ಲಕತನವನ್ನು ಯಾವಾಗ ನಿಲ್ಲಿಸುತ್ತೀರಿ’ ಎಂದು ಸುಪ್ರಿಯಾ ಪ್ರಶ್ನೆ ಮಾಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳು ಕುಳಿತಿದ್ದ ನಂತರದ ಸಾಲಿನಲ್ಲಿ ರಾಹುಲ್ ಗಾಂಧಿ ಆಸೀನರಾಗಿದ್ದು ಕಂಡು ಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement