ವೆನೆಜುವೆಲಾದಲ್ಲಿ ಮೃತಪಟ್ಟ ಭಾರತದ ನಾವಿಕನ ಶವದ ಮೆದುಳು, ಹೃದಯ, ಶ್ವಾಸಕೋಶ ಸೇರಿ ಎಲ್ಲ ಪ್ರಮುಖ ಅಂಗಗಳು ನಾಪತ್ತೆ !

ನವದೆಹಲಿ: ವೆನೆಜುವೆಲಾದಲ್ಲಿ ಕಳೆದ ಮೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾದ ಭಾರತೀಯ ನಾವಿಕನ ಸಾವಿನ ಪ್ರಕರಣ ಇದೀಗ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೆನೆಜುವೆಲಾದಿಂದ ಭಾರತಕ್ಕೆ ಮೃತದೇಹವನ್ನು ತಂದ ಬಳಿಕ, ಮೃತನ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಬಹುತೇಕ ಎಲ್ಲಾ ಆಂತರಿಕ ಅಂಗಗಳು ಕಾಣೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಈ ಸಾವಿನ ಹಿಂದಿನ ನಿಜವಾದ ಕಾರಣವೇನು ಎಂಬ ಪ್ರಶ್ನೆ ತೀವ್ರವಾಗಿ ಉದ್ಭವಿಸಿದ್ದು, ಫೆಡರೇಶನ್ ಆಫ್ ಸೀಫೇರರ್ಸ್ ಯೂನಿಯನ್ಸ್ ಆಫ್ ಇಂಡಿಯಾ (FSUI) ಪ್ರಕರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದೆ.
33 ವರ್ಷದ ರಾಕೇಶ ಚೌಹಾಣ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಲಗ್ಡಾ ಬಜಾರ್ ಟೋಲಾ ಗ್ರಾಮದ ನಿವಾಸಿಯಾಗಿದ್ದು, 2025ರ ನವೆಂಬರ್‌ನಲ್ಲಿ ಮರ್ಚೆಂಟ್ ನೇವಿ ಹಡಗಿನಲ್ಲಿ ಸಿಬ್ಬಂದಿಯಾಗಿ ವೆನೆಜುವೆಲಾಗೆ ತೆರಳಿದ್ದರು. ‘ಎಕ್ಸ್‌ಫಿನಿಟಿ’ (Xfinity) ಕಂಪನಿಯು ಅವರನ್ನು ಹಡಗಿಗೆ ನೇಮಕ ಮಾಡಿತ್ತು.

ಎಫ್‌ಎಸ್‌ಯುಐ ಗಂಭೀರ ಆರೋಪ
ಎಫ್‌ಎಸ್‌ಯುಐ ತನ್ನ ಎಕ್ಸ್ (X) ಖಾತೆಯಲ್ಲಿ ಪ್ರಕಟಿಸಿದ ಮಾಹಿತಿಯ ಪ್ರಕಾರ, ವೆನೆಜುವೆಲಾದ ಅಧಿಕಾರಿಗಳು ಯಾವುದೇ ಮರಣೋತ್ತರ ಪರೀಕ್ಷೆಯ ವರದಿ ಅಥವಾ ಸಾವಿನ ಕುರಿತ ಅಧಿಕೃತ ದಾಖಲೆಗಳನ್ನು ನೀಡದೆ ಮೃತದೇಹವನ್ನು ಉತ್ತರ ಪ್ರದೇಶದ ದಿಯೋರಿಯಾಗೆ ಕಳುಹಿಸಿದ್ದಾರೆ.ಭಾರತದಲ್ಲಿ ಕುಟುಂಬದ ಒತ್ತಾಯದ ಮೇರೆಗೆ ಮರು ಮರಣೋತ್ತರ ಪರೀಕ್ಷೆ ನಡೆಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಸಂಘಟನೆ ಹೇಳಿದೆ.
ಸಂಘಟನೆಯ ಪ್ರಕಾರ, ಮೃತದೇಹದಲ್ಲಿ ಒಂದೇ ಒಂದು ಆಂತರಿಕ ಅಂಗವೂ ಇರಲಿಲ್ಲ. ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಪ್ಲೀಹೆ, ಅಗ್ನ್ಯಾಶಯ, ಹೊಟ್ಟೆ, ಸಣ್ಣ ಹಾಗೂ ದೊಡ್ಡ ಕರುಳುಗಳು, ಥೈರಾಯ್ಡ್, ಹಯಾಯ್ಡ್ ಎಲುಬು, ಲ್ಯಾರಿಂಕ್ಸ್ ಮತ್ತು ಟ್ರೇಕಿಯಾ ಸೇರಿದಂತೆ ಎಲ್ಲ ಪ್ರಮುಖ ಅಂಗಗಳು ಕಾಣೆಯಾಗಿದ್ದವು.
ಮೃತದೇಹದಲ್ಲಿ ಕುತ್ತಿಗೆಯಿಂದ ಪ್ಯೂಬಿಕ್ ಸಿಂಫೈಸಿಸ್‌ವರೆಗೆ 22 ಹೊಲಿಗೆಗಳು ಹಾಗೂ ಎಡ ಕಿವಿಯಿಂದ ಬಲ ಕಿವಿವರೆಗೆ 21 ಹೊಲಿಗೆಗಳಿದ್ದವು. ಸಾವಿಗೆ ಮುನ್ನ ಉಂಟಾದ ಯಾವುದೇ ಗಾಯಗಳ ಗುರುತುಗಳು ಪತ್ತೆಯಾಗಿಲ್ಲ. ಮೃತದೇಹವನ್ನು ಸುಮಾರು ಒಂದು ತಿಂಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಎಲ್ಲಾ ಆಂತರಿಕ ಅಂಗಗಳು ಇಲ್ಲದ ಕಾರಣ ಸಾವಿನ ನಿಖರ ಕಾರಣವನ್ನು ವೈದ್ಯರು ನಿರ್ಧರಿಸಲು ಸಾಧ್ಯವಾಗಿಲ್ಲ ಎಂದು ಎಫ್‌ಎಸ್‌ಯುಐ ತಿಳಿಸಿದೆ.
ಈ ಪ್ರಕರಣವು ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ನಾವಿಕರ ಸುರಕ್ಷತೆ, ಪಾರದರ್ಶಕತೆ ಹಾಗೂ ವಿದೇಶಿ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಸಂಘಟನೆ ಹೇಳಿದೆ.

ಸಂಪೂರ್ಣ ತನಿಖೆಗೆ ಆಗ್ರಹ
ಈ ಘಟನೆ ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಹೇಳಿರುವ ಎಫ್‌ಎಸ್‌ಯುಐ, ಭಾರತೀಯ ನಾವಿಕರು ಬಲಿಪಶುಗಳಾಗುತ್ತಿದ್ದಾರೆ ಎಂದು ಆರೋಪಿಸಿದೆ.
ವೆನೆಜುವೆಲಾದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು, ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಬೇಕು, ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸಾವಿನ ಸಂದರ್ಭಗಳ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗಪಡಿಸಬೇಕು ಮತ್ತು ಮೃತನ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕುಟುಂಬದ ಆರೋಪಗಳೇನು?
ರಾಕೇಶ ಚೌಹಾಣ ಅವರ ಕುಟುಂಬದ ಪ್ರಕಾರ, ಅವರ ಸಾವಿನ ಸುದ್ದಿ ಕಂಪನಿಯಿಂದಲೇ ಬಂದಿತ್ತು. ಮೃತದೇಹವನ್ನು 60 ದಿನಗಳೊಳಗೆ ಭಾರತಕ್ಕೆ ತಲುಪಿಸಲಾಗುವುದು ಎಂದು ಕಂಪನಿ ಭರವಸೆ ನೀಡಿತ್ತು.
ಮೃತನ ತಂದೆ ರಾಮದೇವ ಚೌಹಾಣ ಮಾತನಾಡಿ, “ನಮ್ಮನ್ನು ಸಂಪೂರ್ಣ ಕತ್ತಲೆಯಲ್ಲೇ ಇಡಲಾಯಿತು. ಮೊದಲೇ ಒಂದು ಮರಣೋತ್ತರ ಪರೀಕ್ಷೆ ನಡೆದಿತ್ತು. ನಂತರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಭಾರತದಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿದ್ದ ಎಲ್ಲಾ ಆಂತರಿಕ ಅಂಗಗಳು ಕಾಣೆಯಾಗಿರುವುದು ಬೆಳಕಿಗೆ ಬಂತು. ಸಾವಿನ ಕಾರಣವನ್ನೂ ವೈದ್ಯರು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸರ್ಕಾರ ಕಂಪನಿಯ ವಿರುದ್ಧ ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಕುಟುಂಬದವರ ಹೇಳಿಕೆಯಂತೆ, ಆರಂಭದಲ್ಲಿ ಕಂಪನಿಯ ಅಧಿಕಾರಿಗಳು ರಾಕೇಶ ಅವರು ಹಡಗಿನಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರವಾಣಿ ಮೂಲಕ ತಿಳಿಸಿದ್ದರು. ಮರುದಿನ ಬೆಳಗ್ಗೆ ಅವರು ಬದುಕುಳಿಯುವ ಸಾಧ್ಯತೆ ಕೇವಲ 5 ಶೇಕಡಾ ಮಾತ್ರ ಇದೆ ಎಂದು ಮಾಹಿತಿ ನೀಡಿದ್ದರು. ಅದೇ ದಿನ ಸಂಜೆ ಅವರ ಸಾವಿನ ಸುದ್ದಿಯನ್ನು ತಿಳಿಸಿದ್ದರು.
ಸಾವಿನ ಕಾರಣವನ್ನು ಪ್ರಶ್ನಿಸಿದಾಗ, ಹಡಗಿನಲ್ಲಿ ಬಿದ್ದು ತೀವ್ರ ಗಾಯಗಳಾಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ಕಂಪನಿ ತಿಳಿಸಿತ್ತು ಎಂದು ಕುಟುಂಬ ಆರೋಪಿಸಿದೆ.

ಪ್ರಮುಖ ಸುದ್ದಿ :-   ಟ್ರಾಫಿಕ್ ಜಾಮ್‌ನಲ್ಲಿ ಕಾರಿನಲ್ಲೇ ವ್ಯಕ್ತಿಗೆ ಹೃದಯಾಘಾತ, ಬಸ್‌ನಿಂದ ಧಾವಿಸಿ ಬಂದು ಜೀವ ಉಳಿಸಿದ ನರ್ಸ್‌ಗಳು

ಮೃತದೇಹವನ್ನು ಒಂದು ವಾರದೊಳಗೆ ಹಸ್ತಾಂತರಿಸುವುದಾಗಿ ಕಂಪನಿ ಹೇಳಿದ್ದರೂ, ಸುಮಾರು ಒಂದು ತಿಂಗಳ ಬಳಿಕ ಜೂನ್ 4ರಂದು ಮಾತ್ರ ಮೃತದೇಹ ದಿಯೋರಿಯಾಗೆ ತಲುಪಿದೆ ಎಂದು ಕುಟುಂಬ ಹೇಳಿದೆ.
ಭಾರತದಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಏನು ಪತ್ತೆಯಾಯಿತು?
ದಿಯೋರಿಯಾದಲ್ಲಿ ಪೊಲೀಸ್ ಸಮ್ಮುಖದಲ್ಲಿ ವೈದ್ಯರ ತಂಡ ಮೃತದೇಹವನ್ನು ಪರಿಶೀಲಿಸಿತು. ಮೊದಲೇ ಮರಣೋತ್ತರ ಪರೀಕ್ಷೆ ನಡೆದಿರುವ ಲಕ್ಷಣಗಳು ಕಂಡುಬಂದ ಕಾರಣ ಜಿಲ್ಲಾಧಿಕಾರಿಗಳ ಅಧಿಕೃತ ಆದೇಶವಿಲ್ಲದೆ ಮರು ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ನಿರಾಕರಿಸಿದರು.
ನಂತರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮರು ಮರಣೋತ್ತರ ಪರೀಕ್ಷೆ ನಡೆಸಿದಾಗ, ಮೃತದೇಹದಲ್ಲಿ ಎಲ್ಲಾ ಆಂತರಿಕ ಅಂಗಗಳು ಕಾಣೆಯಾಗಿರುವುದು ದೃಢಪಟ್ಟಿತು. ವರದಿಯಲ್ಲಿ ಎರಡೂ ಕಣ್ಣುಗಳು ಮತ್ತು ಬಾಯಿ ಮುಚ್ಚಿದ ಸ್ಥಿತಿಯಲ್ಲಿದ್ದವು ಎಂದು ಉಲ್ಲೇಖಿಸಲಾಗಿದೆ. ಕುತ್ತಿಗೆಯಿಂದ ಪ್ಯೂಬಿಕ್ ಸಿಂಫೈಸಿಸ್‌ವರೆಗೆ ಸುಮಾರು 60 ಸೆಂ.ಮೀ ಉದ್ದದ ಹೊಲಿಗೆ (22 ಹೊಲಿಗೆಗಳು) ಹಾಗೂ ಎಡ ಕಿವಿಯಿಂದ ಬಲ ಕಿವಿವರೆಗೆ ಆಕ್ಸಿಪಿಟಲ್ ಭಾಗದಲ್ಲಿ ಸುಮಾರು 20 ಸೆಂ.ಮೀ ಉದ್ದದ ಹೊಲಿಗೆ (21 ಹೊಲಿಗೆಗಳು) ಇರುವುದು ದಾಖಲಾಗಿದೆ.
ಮೃತದೇಹ ನೀಲಿ ಬಣ್ಣಕ್ಕೆ ತಿರುಗಿದ್ದು, ಕೆಲವೆಡೆ ಚರ್ಮ ಕಳಚಿಕೊಂಡಿತ್ತು. 2026ರ ಮೇ 7ರಿಂದ ಜೂನ್ 5ರವರೆಗೆ ಮೃತದೇಹವನ್ನು ಡೀಪ್ ಫ್ರೀಜರ್‌ನಲ್ಲಿ ಸಂರಕ್ಷಿಸಲಾಗಿತ್ತು ಎಂದು ವರದಿ ಹೇಳಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಮೆದುಳು, ಮೆದುಳಿನ ಪೊರೆ ಹಾಗೂ ರಕ್ತನಾಳಗಳು, ಥೈರಾಯ್ಡ್, ಹಯಾಯ್ಡ್ ಎಲುಬು, ಲ್ಯಾರಿಂಕ್ಸ್, ಟ್ರೇಕಿಯಾ, ಪ್ಲೂರಲ್ ಗುಹೆ, ಹೃದಯ, ಎರಡೂ ಶ್ವಾಸಕೋಶಗಳು, ಪೆರಿಕಾರ್ಡಿಯಂ, ಕೊರೊನರಿ ಧಮನಿಗಳು ಹಾಗೂ ಪ್ರಮುಖ ರಕ್ತನಾಳಗಳು, ಹೊಟ್ಟೆ, ಸಣ್ಣ ಮತ್ತು ದೊಡ್ಡ ಕರುಳುಗಳು, ಪಿತ್ತಕೋಶ, ಯಕೃತ್ತು, ಪ್ಲೀಹೆ ಹಾಗೂ ಎರಡೂ ಮೂತ್ರಪಿಂಡಗಳು ಸೇರಿದಂತೆ ಎಲ್ಲಾ ಪ್ರಮುಖ ಅಂಗಗಳು ಕಾಣೆಯಾಗಿದ್ದವು ಎಂದು ವೈದ್ಯರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ‘ಯೂಸರ್‌ನೇಮ್’ ವೈಶಿಷ್ಟ್ಯ ವಿವಾದ: ವಾಟ್ಸ್ಆ್ಯಪ್ ನಂತರ ಟೆಲಿಗ್ರಾಂ, ಸಿಗ್ನಲ್‌ಗೆ ಕೇಂದ್ರ ಸರ್ಕಾರದ ನೋಟಿಸ್

ಮರಣೋತ್ತರ ಪರೀಕ್ಷೆಯಲ್ಲಿ ಅಂಗಗಳನ್ನು ಏಕೆ ತೆಗೆಯಲಾಗುತ್ತದೆ?
ಸಾಮಾನ್ಯವಾಗಿ ಹೃದಯ, ಪಿತ್ತಕೋಶ, ಮೂತ್ರಪಿಂಡಗಳು ಸೇರಿದಂತೆ ಕೆಲವು ಆಂತರಿಕ ಅಂಗಗಳನ್ನು ಮೊದಲ ಮರಣೋತ್ತರ ಪರೀಕ್ಷೆಯ ವೇಳೆ ವೈಜ್ಞಾನಿಕ ಪರೀಕ್ಷೆಗಳಿಗಾಗಿ ತೆಗೆದುಹಾಕುವುದು ವೈದ್ಯಕೀಯ ಪ್ರಕ್ರಿಯೆಯ ಭಾಗವಾಗಿರಬಹುದು.
ಆದರೆ ಈ ಪ್ರಕರಣದಲ್ಲಿ ವೆನೆಜುವೆಲಾದ ಅಧಿಕಾರಿಗಳಾಗಲಿ ಅಥವಾ ಸಂಬಂಧಿತ ಕಂಪನಿಯಾಗಲಿ, ರಾಕೇಶ ಚೌಹಾಣ ಅವರ ಸಾವಿನ ನಿಖರ ಕಾರಣವೇನು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಅಥವಾ ಮರಣೋತ್ತರ ಪರೀಕ್ಷೆಯ ವರದಿಯನ್ನು ಕುಟುಂಬಕ್ಕೆ ನೀಡಿಲ್ಲ.
ಇದೇ ಕಾರಣದಿಂದ ಈ ಪ್ರಕರಣ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿನ ಸತ್ಯಾಂಶವನ್ನು ಬಹಿರಂಗಪಡಿಸುವಂತೆ ಕುಟುಂಬ ಹಾಗೂ ನಾವಿಕರ ಸಂಘಟನೆಗಳು ಆಗ್ರಹಿಸಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement