ಮುಂಗಾರು ಮಳೆ ತಡೆದದ್ದು ಬರೀ ‘ಎಲ್ ನಿನೊ’ ಮಾತ್ರವಲ್ಲ ; ಇತರ 5 ಜಾಗತಿಕ ಹವಾಮಾನ ವೈಪರೀತ್ಯಗಳೂ ಕಾರಣ…!

ನವದೆಹಲಿ : ಜೂನ್ 4 ರಂದು ಭಾರತಕ್ಕೆ ಸಕಾಲದಲ್ಲಿ ಆಗಮಿಸಿದ್ದ ನೈಋತ್ಯ ಮುಂಗಾರು ಮಾರುತಗಳು ಈಗ ದಿಢೀರನೆ ಸ್ಥಗಿತಗೊಂಡಿವೆ. ಆರಂಭದಲ್ಲಿ ಚುರುಕಾಗಿದ್ದ ಮುಂಗಾರುಈಗ ಸಂಪೂರ್ಣ ಕುಂಠಿತಗೊಂಡಿದ್ದು, ದೇಶಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದೆ. ಜೂನ್ 4 ರಿಂದ ಜೂನ್ 18 ರವರೆಗಿನ ಅವಧಿಯಲ್ಲಿ ದೇಶದಲ್ಲಿ ಶೇಕಡಾ 41 ರಷ್ಟು ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆತಂಕಕಾರಿ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಈ ಅವಧಿಯಲ್ಲಿ ದೇಶದಲ್ಲಿ 72.2 ಮಿಮೀ ಮಳೆಯಾಗಬೇಕಿತ್ತು, ಆದರೆ ಕೇವಲ 42.6 ಮಿಮೀ ಮಳೆಯಷ್ಟೇ ದಾಖಲಾಗಿದೆ. ಈ ಹಠಾತ್ ಹಿನ್ನಡೆಯು ಬಿತ್ತನೆ ಕಾರ್ಯದ ನಿರೀಕ್ಷೆಯಲ್ಲಿದ್ದ ದೇಶದ ಕೋಟ್ಯಂತರ ರೈತರಲ್ಲಿ ಮತ್ತು ನೀರು ಪೂರೈಕೆ ಮಾಡುವ ಜಲಮಂಡಳಿಗಳಲ್ಲಿ ಭಾರಿ ಆತಂಕ ಮೂಡಿಸಿದೆ.
ಪ್ರಾದೇಶಿಕವಾಗಿ ಮಳೆ ಕೊರತೆಯ ವಿವರ:
ಕೇಂದ್ರ ಭಾರತ: ಅತ್ಯಂತ ಗಂಭೀರ ಪರಿಸ್ಥಿತಿ ಇದ್ದು, ಬರೋಬ್ಬರಿ ಶೇ. 67 ರಷ್ಟು ಮಳೆ ಕೊರತೆಯಾಗಿದೆ.
ಪೂರ್ವ ಮತ್ತು ಈಶಾನ್ಯ ಭಾರತ: ಶೇ. 42 ರಷ್ಟು ಕೊರತೆ ದಾಖಲಾಗಿದೆ.
ದಕ್ಷಿಣ ಭಾರತದಲ್ಲಿ ಶೇ. 22 ರಷ್ಟು ಮಳೆ ಕೊರತೆ ಉಂಟಾಗಿದೆ.
ಉಳಿದ ಭಾಗಗಳಿಗೆ ಹೋಲಿಸಿದರೆ ವಾಯುವ್ಯ ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದ್ದು, ಕೇವಲ ಶೇ. 6 ರಷ್ಟು ಮಾತ್ರ ಕೊರತೆ ಕಂಡುಬಂದಿದೆ.

ಮುಂಗಾರು ಮಳೆಯ ಸ್ಥಗಿತಕ್ಕೆ ಕಾರಣಗಳೇನು? ಹವಾಮಾನ ತಜ್ಞರ ವಿಶ್ಲೇಷಣೆ
ಮುಂಗಾರು ಮಾರುತಗಳು ಹೀಗೆ ಹಠಾತ್ ಆಗಿ ವಿಫಲವಾಗಿರುವುದಕ್ಕೆ ಕೇವಲ ಒಂದು ಕಾರಣವಲ್ಲ, ಬದಲಿಗೆ ಹಲವು ಜಾಗತಿಕ ಮತ್ತು ಪ್ರಾದೇಶಿಕ ಹವಾಮಾನ ವೈಪರೀತ್ಯಗಳ ಸಂಕೀರ್ಣ ಸೇರುವಿಕೆ ಕಾರಣ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಪ್ರಮುಖವಾಗಿ ಐದು ಕಾರಣಗಳನ್ನು ಅವರು ವಿಶ್ಲೇಷಿಸಿದ್ದಾರೆ.
ಪೆಸಿಫಿಕ್ ಮಹಾಸಾಗರದ ‘ಜಗ್ಮಿ’ ಚಂಡಮಾರುತದ ಪ್ರಭಾವ: ಜೂನ್ ಆರಂಭದಲ್ಲಿ ಹಿಂದೂ ಮಹಾಸಾಗರದಲ್ಲಿ ಮುಂಗಾರು ಮಾರುತಗಳು ತೀವ್ರಗೊಂಡಿದ್ದರೂ, ಅದರ ಬಹುಪಾಲು ಶಕ್ತಿಯು ಪೆಸಿಫಿಕ್ ಮಹಾಸಾಗರದತ್ತ ಮುಖ ಮಾಡಿತು. ಅಲ್ಲಿ ತೀವ್ರಗೊಂಡ ‘ಜಗ್ಮಿ’ (Typhoon Jagmi) ಚಂಡಮಾರುತವು ಭಾರತದ ಮುಂಗಾರಿನ ಶಕ್ತಿಯನ್ನು ತನ್ನತ್ತ ಸೆಳೆದುಕೊಂಡಿತು. ಇದರಿಂದಾಗಿ ಬಂಗಾಳ ಕೊಲ್ಲಿಯಲ್ಲಿ ಮುಂಗಾರು ಮುನ್ನೆಯಲು ಬೇಕಾದ ವಾಯುಭಾರ ಕುಸಿತ ವಲಯ ಸೃಷ್ಟಿಯಾಗಲಿಲ್ಲ.
ಪಶ್ಚಿಮದ ಅಡಚಣೆಗಳು (Western Disturbances): ಉತ್ತರ ಭಾರತದಲ್ಲಿ ಪಶ್ಚಿಮದ ಅಡಚಣೆಗಳು ತೀರಾ ದಕ್ಷಿಣದವರೆಗೂ ವ್ಯಾಪಿಸಿದವು. ಇವು ಸತತವಾಗಿ ಒಣ ಮಾರುತಗಳನ್ನು ಹೊತ್ತು ತಂದಿದ್ದರಿಂದ, ಮೋಡಗಳು ವ್ಯವಸ್ಥಿತವಾಗಿ ರೂಪುಗೊಳ್ಳಲು ಸಾಧ್ಯವಾಗಲಿಲ್ಲ.
ದುರ್ಬಲಗೊಂಡ ಮಾನ್ಸೂನ್ ಟ್ರಫ್ (Monsoon Trough): ಭಾರತದ ಉಪಖಂಡದಾದ್ಯಂತ ಹರಡಬೇಕಿದ್ದ ಕಡಿಮೆ ಒತ್ತಡದ ಪಟ್ಟಿಯೂ (Trough) ಸಹಜ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ ಚಂಡಮಾರುತದ ಸುಳಿಗಾಳಿ ಸೃಷ್ಟಿಯಾಯಿತಾದರೂ, ಅದು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ಸೆಳೆಯುವ ಬದಲಿಗೆ ತನ್ನದೇ ಪಥದಲ್ಲಿ ಸುತ್ತುವಂತೆ ಮಾಡಿತು. ಇದು ಗುಡುಗು ಸಹಿತ ಮಳೆಯ ಮೋಡಗಳು ವ್ಯವಸ್ಥಿತವಾಗಿ ಒಟ್ಟುಗೂಡುವುದನ್ನು ತಡೆದಿದ್ದಲ್ಲದೆ, ಒಂದು ಬಲವಾದ ಕಡಿಮೆ ಒತ್ತಡದ ಪ್ರದೇಶ (LPA) ನಿರ್ಮಾಣವಾಗುವುದನ್ನು ಕಷ್ಟಕರವಾಗಿಸಿತು.” ಪರಿಣಾಮವಾಗಿ ‘ಕಡಿಮೆ ಒತ್ತಡದ ಪ್ರದೇಶ’ (LPA) ಉಂಟಾಗಲು ಸಾಧ್ಯವಾಗಲಿಲ್ಲ.
ನೇರವಾದ ಗಾಳಿಯ ದಿಕ್ಕು: ಮಳೆ ತರಲು ಗಾಳಿಯು ವೃತ್ತಾಕಾರವಾಗಿ ತಿರುಗುತ್ತಾ ತೇವಾಂಶವನ್ನು ಒಟ್ಟುಗೂಡಿಸಬೇಕು. ಆದರೆ ಪೆಸಿಫಿಕ್ ವೈಪರೀತ್ಯಗಳಿಂದಾಗಿ ಮಾರುತಗಳು ಪಶ್ಚಿಮದಿಂದ ಪೂರ್ವಕ್ಕೆ ತೀರಾ ನೇರವಾಗಿ ಚಲಿಸಿದವು. ಇದರಿಂದ ಗಾಳಿಯ ಒಮ್ಮುಖ ಚಲನೆ (Convergence) ದುರ್ಬಲಗೊಂಡು ಮಳೆ ಪ್ರಕ್ರಿಯೆ ನಿಂತುಹೋಯಿತು.

ಪ್ರಮುಖ ಸುದ್ದಿ :-   ದೇವಸ್ಥಾನದ ಸಭಾಮಂಟಪದ ಮೇಲ್ಛಾವಣಿ ಕುಸಿತ; ನಾಲ್ವರು ಸಾವು, 23 ಮಂದಿಗೆ ಗಾಯ

ಎಲ್ ನಿನೊ (El Nino) ಮತ್ತು ಎಂಜೆಒ (MJO) ಪರಿಣಾಮ

ಪೆಸಿಫಿಕ್ ಮಹಾಸಾಗರದಲ್ಲಿ ತಲೆದೋರುತ್ತಿರುವ ‘ಎಲ್ ನಿನೊ’ ಪರಿಸ್ಥಿತಿಯು ವಾತಾವರಣವನ್ನು ಮತ್ತಷ್ಟು ಶುಷ್ಕಗೊಳಿಸಿರುವುದು ಕಳವಳಕ್ಕೆ ಕಾರಣವಾಗಿದೆ. ಇದರ ಜೊತೆಗೆ, ಜಾಗತಿಕವಾಗಿ ಮಳೆ ತರುವ ‘ಮ್ಯಾಡೆನ್-ಜುಲಿಯನ್ ಆಸಿಲೇಷನ್’ (MJO) ಪ್ರಕ್ರಿಯೆಯು ಜೂನ್ ಮೊದಲಾರ್ಧದಲ್ಲಿ ಪ್ರತಿಕೂಲ ಹಂತದಲ್ಲಿದ್ದರಿಂದ ಹಿಂದೂ ಮಹಾಸಾಗರದಲ್ಲಿ ಮೋಡಗಳ ಸೃಷ್ಟಿಗೆ ಯಾವುದೇ ಅನುಕೂಲತೆ ಸಿಗಲಿಲ್ಲ.
ಕೇರಳ ಮತ್ತು ಭಾರತದ ಪಶ್ಚಿಮ ಕರಾವಳಿಯಲ್ಲಿ ಆರಂಭದಲ್ಲಿ ಮುಂಗಾರು ಅಲ್ಪ ಮಟ್ಟದ ಚುರುಕುತನ ತೋರಿಸಿ ಮುನ್ನಡೆದಿತ್ತಾದರೂ, ಬಂಗಾಳ ಕೊಲ್ಲಿಯಲ್ಲಿ ಅದು ಮುಂದೆ ಸಾಗಲು ಬೇಕಾದ ಸಪೋರ್ಟ್‌ ಸಿಗದೆ ಮತ್ತು ಒಣ ಹವೆಯ ಕಾರಣದಿಂದಾಗಿ ಅದು ಮತ್ತೆ ದಕ್ಷಿಣದತ್ತಲೇ ಮುಖಮಾಡಿ ದುರ್ಬಲಗೊಂಡಿತು.

ಜೂನ್ ಕೊನೆಯ ವಾರದಲ್ಲಿ ಮುಂಗಾರು ಪುನಶ್ಚೇತನದ ಭರವಸೆ !
ಪ್ರಸ್ತುತ ಪರಿಸ್ಥಿತಿ ಆತಂಕಕಾರಿಯಾಗಿದ್ದರೂ, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಮುನ್ಸೂಚಕರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಜೂನ್ ನಾಲ್ಕನೇ ವಾರದಲ್ಲಿ ‘ಮ್ಯಾಡೆನ್-ಜುಲಿಯನ್ ಆಸಿಲೇಷನ್’ (MJO) ಭಾರತದ ಕಡೆಗೆ ಪೂರಕ ಹಂತಕ್ಕೆ ಚಲಿಸುವ ನಿರೀಕ್ಷೆಯಿದೆ. ಇದರೊಂದಿಗೆ ಕೆಳಮಟ್ಟದ ಜೆಟ್ ಸ್ಟ್ರೀಮ್ (Low Level Jet) ಮತ್ತು ಸಮಭಾಜಕ ವೃತ್ತದ ಮಾರುತಗಳು ಬಲಗೊಳ್ಳಲಿವೆ. ಇದು ಒಣ ಹವೆಯ ಪ್ರಭಾವವನ್ನು ಮೆಟ್ಟಿ ನಿಂತು ಮುಂಗಾರು ಮರುಜೀವ ಪಡೆಯಲು ನೆರವಾಗಲಿದೆ.
ಪ್ರಮುಖವಾಗಿ ಜೂನ್ 24-25 ರ ಸುಮಾರಿಗೆ ಮಹಾರಾಷ್ಟ್ರದ ಕೊಂಕಣ ಕರಾವಳಿ ಭಾಗದಲ್ಲಿ ಮಳೆಯ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಲಿದ್ದು, ಇದು ಮುಂಗಾರಿನ ಎರಡನೇ ಇನ್ನಿಂಗ್ಸ್ ಆರಂಭಕ್ಕೆ ಮುನ್ನುಡಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಖಾರಿಫ್ (ಮುಂಗಾರು) ಹಂಗಾಮಿನ ಬಿತ್ತನೆಗೆ ಇದು ಅತ್ಯಂತ ನಿರ್ಣಾಯಕ ಸಮಯವಾಗಿದ್ದು, ಮುಂಬರುವ ಜೂನ್ ಅಂತ್ಯದ ಮಳೆಯು ದೇಶದ ಕೃಷಿ ವಲಯದ ಭವಿಷ್ಯವನ್ನು ನಿರ್ಧರಿಸಲಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಮೆಚ್ಚಿದ ಇಬ್ಬರು ಜಾಗತಿಕ ನಾಯಕರು ಯಾರು ? : ಒಬ್ಬರು ಪ್ರಧಾನಿ ಮೋದಿ, ಮತ್ತೊಬ್ಬರು....?

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement