ಮುಂಬೈ: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್ಡಿಎಫ್ಸಿ (HDFC) ಬ್ಯಾಂಕ್ನ ಅರೆಕಾಲಿಕ ಅಧ್ಯಕ್ಷರಾದ ಅತಾನು ಚಕ್ರವರ್ತಿ ಅವರು ಬುಧವಾರ ತಡರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್ನೊಂದಿಗಿನ ತಮ್ಮ “ಮೌಲ್ಯಗಳು ಮತ್ತು ನೈತಿಕತೆ”ಯ (Values and Ethics) ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಅವರು ರಾಜೀನಾಮೆಗೆ ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಚಕ್ರವರ್ತಿ ಅವರು, “ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕ್ನಲ್ಲಿ ನಾನು ಗಮನಿಸಿದ ಕೆಲವು ಘಟನೆಗಳು ಮತ್ತು ಪದ್ಧತಿಗಳು ನನ್ನ ವೈಯಕ್ತಿಕ ಮೌಲ್ಯಗಳು ಮತ್ತು ನೈತಿಕತೆಗೆ ಅನುಗುಣವಾಗಿಲ್ಲ,” ಎಂದು ತಿಳಿಸಿದ್ದಾರೆ.
ಕೆಕಿ ಮಿಸ್ತ್ರಿ ಮಧ್ಯಂತರ ಅಧ್ಯಕ್ಷರಾಗಿ ನೇಮಕ:
ಚಕ್ರವರ್ತಿ ಅವರ ರಾಜೀನಾಮೆಯ ಬೆನ್ನಲ್ಲೇ, ಕೆಕಿ ಮಿಸ್ತ್ರಿ ಅವರನ್ನು ಮೂರು ತಿಂಗಳ ಅವಧಿಗೆ ಮಧ್ಯಂತರ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆ ನೀಡಿದೆ. ಈ ನೇಮಕಾತಿಯು ಮಾರ್ಚ್ 19 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಅತಾನು ಚಕ್ರವರ್ತಿ ಅವರ ಹಿನ್ನೆಲೆ:
ಗುಜರಾತ್ ಕೆಡರ್ನ 1985ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದ ಅತನು ಚಕ್ರವರ್ತಿ ಅವರು ಏಪ್ರಿಲ್ 2020 ರಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ಅವರು ಹಣಕಾಸು ಸಚಿವಾಲಯದ ಅಡಿಯಲ್ಲಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (DIPAM) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಏಪ್ರಿಲ್ 2021 ರಲ್ಲಿ ಆರ್ಬಿಐ ಇವರನ್ನು ಮೂರು ವರ್ಷಗಳ ಅವಧಿಗೆ ಎಚ್ಡಿಎಫ್ಸಿ ಬ್ಯಾಂಕ್ನ ಅರೆಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿತ್ತು. ನಂತರ ಮೇ 2024 ರಲ್ಲಿ ಇವರ ಅವಧಿಯನ್ನು ಮೇ 4, 2027 ರವರೆಗೆ ವಿಸ್ತರಿಸಲಾಗಿತ್ತು.
ಷೇರು ಮಾರುಕಟ್ಟೆ ಕುಸಿತ:
ಚಕ್ರವರ್ತಿ ಅವರ ಅಧಿಕಾರಾವಧಿಯಲ್ಲಿಯೇ ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಲಿಮಿಟೆಡ್ ನಡುವೆ 40 ಬಿಲಿಯನ್ ಡಾಲರ್ ಮೌಲ್ಯದ ಬೃಹತ್ ವಿಲೀನ ಪ್ರಕ್ರಿಯೆ ನಡೆದಿತ್ತು.
ಈ ರಾಜೀನಾಮೆ ಸುದ್ದಿಯ ಬೆನ್ನಲ್ಲೇ, ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿರುವ ಎಚ್ಡಿಎಫ್ಸಿ ಬ್ಯಾಂಕ್ನ ಷೇರುಗಳು ಸುಮಾರು ಶೇ. 7 ರಷ್ಟು ಕುಸಿತ ಕಂಡಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಚಕ್ರವರ್ತಿ ಅವರ ರಾಜೀನಾಮೆಯ ಹಿಂದಿನ ನಿಖರವಾದ ಕಾರಣಗಳ ಬಗ್ಗೆ ಬ್ಯಾಂಕ್ ಹೆಚ್ಚಿನ ವಿವರಗಳನ್ನು ನೀಡಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ