ದಾವಣಗೆರೆ: ತಂದೆಯೇ ತನ್ನ ಅವಳಿ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದ ಅವರ ಮುಖಕ್ಕೆ ಟೆಕ್ಸೋ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಗೇಟ್ ಬಳಿ ನಡೆದ ವರದಿಯಾಗಿದೆ.
ಮೃತ ಮಕ್ಕಳನ್ನು ಅದ್ವೈತ್ (4), ಅನ್ವಿತ್ (4 ಎಂದು ಗುರುತಿಸಲಾಗಿದೆ. ತಂದೆ ಅಮರ ಕಿತ್ತೂರು ಎಂಬವರು ಪತ್ನಿ ತವರಿಗೆ ವಿಜಯಪುರಕ್ಕೆ ಹೊರ ವೇಳೆ ವೇಳೆ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ ಮೂಲದ ಅಮರ ಸದ್ಯ ದಾವಣಗೆರೆಯ ಆಂಜನೇಯ ಮಿಲ್ ಬಡಾವಣೆಯಲ್ಲಿ ವಾಸವಿದ್ದ. ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಇರುವ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿದ್ದಾನೆ. ಪತ್ನಿ ತವರಿಗೆ ಹೋಗುವುದಕ್ಕೂ ಮುನ್ನ ಈತ ತನ್ನಿಬ್ಬರು ಮಕ್ಕಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಗಳನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಂತರ ಇಬ್ಬರೂ ಮಕ್ಕಳ ಬಾಯಿಗೆ ಟಿಕ್ಸೋ ಟೇಪ್ ಹಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಅಮರ ತನ್ನ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾಗ ಪತ್ನಿ ದೂರವಾಣಿ ಕರೆ ಮಾಡಿದ್ದಳು. ಅದಕ್ಕೆ ಉತ್ತರಿಸಿದ್ದ ಅಮರ, ಮಕ್ಕಳ ಕಥೆ ಮುಗಿಸಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಗಾಬರಿಗೊಂಡ ಪತ್ನಿ ತಕ್ಷಣವೇ ದಾವಣಗೆರೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಅಷ್ಟರಲ್ಲಾಗಲೇ ಅಮರ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಸಿಮ್ ಕಾರ್ಡ್ ಟ್ರೇಸ್ ಮಾಡಿದ ಪೊಲೀಸರಿಗೆ ಈತ ಚಳಗೇರಿ ಟೋಲ್ ಬಳಿ ಇದ್ದ ಮಾಹಿತಿ ಲಭ್ಯವಾಗಿದೆ. ಅಲ್ಲಿಗೆ ತೆರಳಿದಾಗ ಆರೋಪಿಯು ದಾವಣಗೆರೆಗೆ ವಾಪಸಾಗಿರುವುದು ತಿಳಿದಿದೆ. ನಂತರ ದಾವಣಗೆರೆಗೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆ ಮಾಡಿದ ನಂತರ ಮಕ್ಕಳ ಶವಗಳನ್ನು ಅಮರ್ ಕಾರಿನಲ್ಲಿಯೇ ತಂದಿದ್ದ ಎನ್ನಲಾಗಿದೆ. ಪೊಲೀಸರ ತನಿಖೆ ವೇಳೆ, ತಾನೇ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಘಟನೆ ಸಂಬಂಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಕೊಲೆಗೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿವರ ತನಿಖೆಯ ನಂತರ ತಿಳಿಯಬೇಕಿದೆ.


ನಿಮ್ಮ ಕಾಮೆಂಟ್ ಬರೆಯಿರಿ