ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ‘ಕೈ’ ಕೋಟೆಯಲ್ಲಿ ಎಎಪಿ ಜಯಭೇರಿ; ಸ್ಥಾನ ಸುಧಾರಿಸಿಕೊಂಡ ಬಿಜೆಪಿ

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗಲೇ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಜಯಭೇರಿ ಬಾರಿಸಿದೆ. ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಎಎಪಿ ಸ್ಪಷ್ಟ ಬಹುಮತದೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಈ ಫಲಿತಾಂಶವನ್ನು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಗೆ ಸಿಕ್ಕ ಜನಬೆಂಬಲ ಎಂದು ಬಣ್ಣಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಪಂಜಾಬ್‌ನ ಪ್ರಜ್ಞಾವಂತ ಮತದಾರರು ವಿಪಕ್ಷಗಳ ದ್ವೇಷ ಹಾಗೂ ವಿಭಜಕ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಪಂಜಾಬ್ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಒಟ್ಟು 1,977 ವಾರ್ಡ್‌ಗಳ ಪೈಕಿ ಎಎಪಿ 958 ವಾರ್ಡ್‌ಗಳನ್ನು ಗೆದ್ದಿದೆ. ಕಾಂಗ್ರೆಸ್ 397 ವಾರ್ಡ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪಕ್ಷೇತರ ಅಭ್ಯರ್ಥಿಗಳು 251 ವಾರ್ಡ್‌ಗಳನ್ನು ಪಡೆಯುವ ಮೂಲಕ ಪ್ರಬಲ ಪ್ರದರ್ಶನ ನೀಡಿದ್ದಾರೆ. ಶಿರೋಮಣಿ ಅಕಾಲಿದಳ 191 ವಾರ್ಡ್‌ಗಳಲ್ಲಿ ಮತ್ತು ಬಿಜೆಪಿ 172 ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಹುಜನ ಸಮಾಜ ಪಾರ್ಟಿ ಕೇವಲ ಏಳು ವಾರ್ಡ್‌ಗಳನ್ನು ಗೆದ್ದಿದೆ.

ತಲಾ 50 ವಾರ್ಡ್‌ಗಳನ್ನು ಹೊಂದಿರುವ ರಾಜ್ಯದ ಪ್ರಮುಖ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಎಎಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಬರ್ನಾಲಾದಲ್ಲಿ 36, ಬಟಿಂಡಾದಲ್ಲಿ 31, ಮೋಗಾದಲ್ಲಿ 30 ಮತ್ತು ಬಟಾಲಾದಲ್ಲಿ 30 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಮೊಹಾಲಿಯಲ್ಲಿ 26 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಎಎಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮತ್ತೊಂದೆಡೆ, ಕಪುರ್ತಲಾ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ 31 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಲವಾದ ಪ್ರದರ್ಶನ ನೀಡಿದೆ. ಪಠಾಣಕೋಟ್ ಮತ್ತು ಅಬೋಹರ್‌ನಲ್ಲಿ ಕ್ರಮವಾಗಿ 22 ಮತ್ತು 28 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ, ಅಲ್ಲಿ ದೊಡ್ಡ ಪಕ್ಷವಾಗಿ ಮೂಡಿಬಂದಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ರಾಜ್ಯದ ಪ್ರಮುಖ ರಾಜಕೀಯ ನಾಯಕರ ಭದ್ರಕೋಟೆಗಳಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲೂ ಎಎಪಿ ಭಾರಿ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಭಗವಂತ ಮಾನ್ ಅವರ ಸ್ವಕ್ಷೇತ್ರವಾದ ಧುರಿ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಎಎಪಿ ಒಟ್ಟು 21 ವಾರ್ಡ್‌ಗಳ ಪೈಕಿ 19 ರಲ್ಲಿ ಜಯ ಗಳಿಸಿದ್ದರೆ, ಇನ್ನುಳಿದ 2 ಸ್ಥಾನಗಳನ್ನು ಪಕ್ಷೇತರರು ಪಡೆದಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ ಸಿಂಗ್ ರಾಜಾ ವಾರಿಂಗ್ ಅವರ ಪರಮ ಭದ್ರಕೋಟೆ ಎನಿಸಿದ ಗಿದ್ದರ್‌ಬಹಾದಲ್ಲಿ ಎಎಪಿ 19 ವಾರ್ಡ್‌ಗಳ ಪೈಕಿ 17 ರಲ್ಲಿ ಗೆದ್ದು ಬೀಗಿದ್ದು, ಕಾಂಗ್ರೆಸ್ ಕೇವಲ 2 ವಾರ್ಡ್‌ಗಳಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ, ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಈ ಹಿಂದೆ ಪ್ರತಿನಿಧಿಸಿದ್ದ ಚಮ್ಕೌರ್ ಸಾಹಿಬ್‌ನಲ್ಲಿ ಕಾಂಗ್ರೆಸ್ ಉತ್ತಮ ಪುನರಾಗಮನ ಮಾಡಿದ್ದು, 13 ವಾರ್ಡ್‌ಗಳ ಪೈಕಿ 7 ಸ್ಥಾನಗಳನ್ನು ಗೆದ್ದಿದೆ. ಇಲ್ಲಿ ಎಎಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ 3 ವಾರ್ಡ್‌ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಅಕಾಲಿ ದಳದ ಪ್ರಭಾವಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಗೆ ನಂಟಿರುವ ಮಜಿಥಾ ಕೌನ್ಸಿಲ್‌ನಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಎಎಪಿ 7 ವಾರ್ಡ್‌ಗಳನ್ನು ಗೆದ್ದರೆ, ಎಸ್‌ಎಡಿ 6 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ.
ಮೇ 26 ರಂದು 8 ಮುನ್ಸಿಪಲ್ ಕಾರ್ಪೊರೇಷನ್‌ಗಳು, 75 ಮುನ್ಸಿಪಲ್ ಕೌನ್ಸಿಲ್‌ಗಳು ಮತ್ತು 19 ನಗರ ಪಂಚಾಯತ್‌ಗಳು ಸೇರಿದಂತೆ ಒಟ್ಟು 102 ನಾಗರಿಕ ಸಂಸ್ಥೆಗಳಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆದಿತ್ತು. ಈ ಬಾರಿ ಒಟ್ಟು ಶೇಕಡಾ 63.94 ರಷ್ಟು ಮತದಾನ ದಾಖಲಾಗಿದೆ. ಚುನಾವಣೆಗೆ ಮುನ್ನವೇ ಒಟ್ಟು 1,977 ವಾರ್ಡ್‌ಗಳ ಪೈಕಿ 80 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು ಮತ್ತು ಒಟ್ಟಾರೆ 7,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಚುನಾವಣಾ ಫಲಿತಾಂಶದ ಬೆನ್ನಲ್ಲೇ ಆಡಳಿತಾರೂಢ ಎಎಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ವಿರೋಧ ಪಕ್ಷಗಳು, ಚುನಾವಣೆಯ ಉದ್ದಕ್ಕೂ ಆಡಳಿತ ಪಕ್ಷವು ಸರ್ಕಾರಿ ಯಂತ್ರೋಪಕರಣಗಳು ಮತ್ತು ಅಧಿಕೃತ ಪ್ರಭಾವವನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ತೀವ್ರವಾಗಿ ಆರೋಪಿಸಿವೆ.
ಮುಂದಿನ ವರ್ಷ ಪಂಜಾಬ್‌ನಲ್ಲಿ ಮಹತ್ವದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆದ ನಾಗರಿಕ ಸಂಸ್ಥೆಗಳ ಚುನಾವಣೆಗಳನ್ನು ಮಾನ್ ಸರ್ಕಾರಕ್ಕೆ ಅತ್ಯಂತ ನಿರ್ಣಾಯಕ ರಾಜಕೀಯ ಪರೀಕ್ಷೆ ಎಂದೇ ವಿಶ್ಲೇಷಿಸಲಾಗಿತ್ತು. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಚುನಾವಣೆಯಲ್ಲಿ ಬಿಜೆಪಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ತನ್ನ ಸ್ಥಾನವನ್ನು ಗಮನಾರ್ಹವಾಗಿ ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2021 ಚುನಾವಣೆ ವೇಳೆ ರೈತರ ಪ್ರತಿಭಟನಾ ಚಳವಳಿಯ ಹಿನ್ನೆಲೆಯಲ್ಲಿ ಪಕ್ಷವು ರಾಜ್ಯದಲ್ಲಿ ರಾಜಕೀಯ ಹಿನ್ನಡೆಯನ್ನು ಎದುರಿಸುತ್ತಿತ್ತು.2021 ರ ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯ ಮಾಹಿತಿಯ ಪ್ರಕಾರ, ರಾಜ್ಯದ ಎಂಟು ಪುರಸಭೆಗಳಲ್ಲಿ ಬಿಜೆಪಿ ಕೇವಲ 20 ಸ್ಥಾನಗಳನ್ನು ಗೆದ್ದಿತ್ತು. ಅಬೋಹರ್, ಬಟಿಂಡಾ ಮತ್ತು ಕಪುರ್ಥಾಲಾದಂತಹ ಹಲವಾರು ನಿಗಮಗಳಲ್ಲಿ, ಪಕ್ಷವು ಒಂದೇ ಒಂದು ವಾರ್ಡ್ ಅನ್ನು ಸಹ ಪಡೆಯುವಲ್ಲಿ ವಿಫಲವಾಗಿತ್ತು. ಈ ಬಾರಿ ಗಣನೀಯ ಪ್ರಗತಿ ಕಂಡಿದೆ.
ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಕೆಲವು ಪ್ರಮುಖ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆಯಾದರೂ, ತನ್ನ ಸಾಂಪ್ರದಾಯಿಕ ಭದ್ರಕೋಟೆಯಾಗಿದ್ದ ಗಿದ್ದರ್‌ಬಹಾದಂತಹ ಮಹತ್ವದ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿರುವುದು ಮುಂಬರುವ ಅಸೆಂಬ್ಲಿ ಚುನಾವಣೆಯ ದೃಷ್ಟಿಯಿಂದ ವಿರೋಧ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement