ವಿಡಿಯೊ | ಕಾಶಿ : ವಿದೇಶಿ ಪ್ರಜೆಯ ದಾಂಧಲೆ ; ಮನೆಗಳಿಗೆ ನುಗ್ಗಿ ಜನರನ್ನು ಕಚ್ಚಿದ ವ್ಯಕ್ತಿ….!

ವಾರಾಣಸಿ: ವಾರಾಣಸಿಯ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಪ್ತಸಾಗರ ಮೆಡಿಸಿನ್ ಮಾರ್ಕೆಟ್ ಪ್ರದೇಶದಲ್ಲಿ ಗುರುವಾರ ವಿದೇಶಿ ಪ್ರಜೆಯೊಬ್ಬ ಅರೆಬೆತ್ತಲೆ ಸ್ಥಿತಿಯಲ್ಲಿ ಹಲವು ಮನೆಗಳಿಗೆ ನುಗ್ಗಿ, ಮನೆಯಲ್ಲಿದ್ದ ವಸ್ತುಗಳನ್ನು ಎಸೆದು ನಿವಾಸಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಯಿತು. ಅಲ್ಲದೆ, ಸ್ಥಳೀಯ ನಿವಾಸಿಯೊಬ್ಬರ ಕೈಗೆ ಕಚ್ಚಿ ಗಾಯಗೊಳಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ಕೆಲವು ವರದಿಗಳಲ್ಲಿ ಆತ ಭಾಂಗ್ ಸೇವನೆಯ ಅಮಲಿನಲ್ಲಿದ್ದನೆಂದು ಹೇಳಲಾಗಿದ್ದರೂ, ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದೇಶಿ ಪ್ರಜೆ ನಿವಾಸವೊಂದರೊಳಗೆ ಗದ್ದಲ ಸೃಷ್ಟಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಹೊರಗೆ ಸ್ಥಳೀಯರು ಜಮಾಯಿಸಿದ್ದರೆ, ಆತ ಜೋರಾಗಿ ಕಿರುಚುವುದು, ಮೇಲಿಂದ ಕೆಳಗೆ ಜಿಗಿಯುವುದು ಹಾಗೂ ಸ್ಥಳೀಯರತ್ತ ಓಡುವುದು ವಿಡಿಯೊಗಳಲ್ಲಿ ಗೋಚರಿಸಿದೆ. ಕೊನೆಗೆ ಸ್ಥಳೀಯರು ಆತನನ್ನು ಹಿಡಿದು ಕೆಳ ಮಹಡಿಗೆ ಕರೆತಂದ ಬಳಿಕ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಆತ ಆಕ್ರಮಣಕಾರಿ ವರ್ತನೆ ಮುಂದುವರಿಸಿ, ಕಿರಿದಾದ ಬೀದಿಗಳಲ್ಲಿ ಜನರನ್ನು ಬೆನ್ನಟ್ಟಿದನೆಂದು ತಿಳಿದುಬಂದಿದೆ.

ವಸತಿ ಪ್ರದೇಶದಲ್ಲಿ ಭಾರೀ ಗೊಂದಲ
ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಆತ ಅಲ್ಲಿ ಓಡಾಡುತ್ತಾ ಗದ್ದಲ ಸೃಷ್ಟಿಸಿದ ಬಳಿಕ ವಸತಿ ಕಟ್ಟಡವೊಂದಕ್ಕೆ ನುಗ್ಗಿ ಮೇಲ್ಮಹಡಿಗಳಿಗೆ ಏರಿ ಮನೆಯಲ್ಲಿದ್ದ ಸಾಮಗ್ರಿಗಳನ್ನು ಕೆಳಗೆ ಎಸೆಯಲು ಆರಂಭಿಸಿದ. ಸ್ಥಳೀಯರು ಹಲವಾರು ಬಾರಿ ಸಮಾಧಾನಪಡಿಸಲು ಯತ್ನಿಸಿದರೂ ಆತ ಸಹಕರಿಸದೆ, ಗದ್ದಲದ ವೇಳೆ ನಿವಾಸಿಯೊಬ್ಬರ ಕೈಗೆ ಕಚ್ಚಿದನೆಂದು ಆರೋಪಿಸಲಾಗಿದೆ.
ಪರಿಸ್ಥಿತಿ ನಿಯಂತ್ರಣ ಮೀರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಕೋಟ್ವಾಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆತನನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸ್ಥಳೀಯರ ಆರೋಪದಂತೆ, ಆತ ಪೊಲೀಸರೊಂದಿಗೂ ಆಕ್ರಮಣಕಾರಿ ವರ್ತನೆ ತೋರಿದ್ದು, ಅವರ ಸೂಚನೆ ಪಾಲಿಸದೆ ಪದೇಪದೇ “ಗೋ ಬ್ಯಾಕ್” ಎಂದು ಕೂಗುತ್ತಿದ್ದ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ವೈದ್ಯಕೀಯ ಪರೀಕ್ಷೆಗೆ ರವಾನೆ
ಬಂಧನದ ಬಳಿಕ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಕಬೀರ್ಚೌರಾ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದರು. ಕೋತ್ವಾಲಿ ಠಾಣೆಯ ಇನ್ಸ್‌ಪೆಕ್ಟರ್ ದಯಾಶಂಕರ ಅವರು, ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಆತನ ವರ್ತನೆಗೆ ಮಾನಸಿಕ ಆರೋಗ್ಯ ಸಮಸ್ಯೆಯೇ ಕಾರಣವೋ ಅಥವಾ ಮಾದಕ ವಸ್ತು ಸೇವನೆಯ ಅತಿಮಾತ್ರೆಯ ಪರಿಣಾಮವೋ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದರ ಜೊತೆಗೆ, ಆತನ ಗುರುತು ಹಾಗೂ ರಾಷ್ಟ್ರೀಯತೆಯನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದ್ದು, ಘಟನೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆ ಮುಂದುವರಿದಿದೆ. ತನಿಖೆಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement