ಪ್ರಧಾನಿ ಮೋದಿ ಮುಂಬೈ ಕಾರ್ಯಕ್ರಮಕ್ಕೂ ಮುನ್ನ ಬಂದೂಕು, ಪ್ರಧಾನಿ ಕಚೇರಿ ನಕಲಿ ಐಡಿ ಹೊಂದಿದ್ದ ಇಬ್ಬರ ಬಂಧನ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೆ ಒಂದು ದಿನ ಮೊದಲು ಮಂಗಳವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ (ಬಿಕೆಸಿ)‌ನಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾಕ್ಕೆ ನಕಲಿ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 7ರಂದು ನಡೆದ ಈ ಘಟನೆ ಆರಂಭದಲ್ಲಿ ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಏಕೆಂದರೆ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 8ರಂದು ಮುಂಬೈಗೆ ಭೇಟಿ ನೀಡಲಿದ್ದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಆದರೆ ಈ ಘಟನೆಗೆ ಪ್ರಧಾನಿ ಭೇಟಿಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಮೂವರು ವ್ಯಕ್ತಿಗಳು ಅನುಮಾನಾಸ್ಪದ ಸರ್ಕಾರಿ ಗುರುತಿನ ಚೀಟಿಯನ್ನು ಬಳಸಿ ಜಿಯೋ ವರ್ಲ್ಡ್ ಪ್ಲಾಜಾದ ಭದ್ರತಾ ತಪಾಸಣೆಯನ್ನು ದಾಟಿ ಒಳನುಗ್ಗಲು ಯತ್ನಿಸಿದ್ದರು. ಅವರಲ್ಲಿ ಒಬ್ಬನ ಬಳಿ ಬಂದೂಕು ಕೂಡ ಇತ್ತು.

ಅನುಮಾನಾಸ್ಪದ ಚಲನವಲನ ಗಮನಿಸಿದ ಪೊಲೀಸರು 24 ವರ್ಷದ ರೋಹನ್ ಪಾರೇಖ್ ಹಾಗೂ ಆತನ ಅಂಗರಕ್ಷಕ ಸುಮಾರು 45 ವರ್ಷದ ದಿಲೀ ಕುಂದೆ ಎಂಬವರನ್ನು ಬಂಧಿಸಿದ್ದಾರೆ. ರೋಹನ್ ಪಾರೇಖ್ ತಾನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಆದರೆ ಆತನ ಬಳಿ ಪತ್ತೆಯಾದ ಪಿಎಂಒ ಗುರುತಿನ ಚೀಟಿ ನಕಲಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಸಂಬಂಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಸೇವಕರ ಸೋಗು ಹಾಕುವುದು ಹಾಗೂ ಶಸ್ತ್ರಾಸ್ತ್ರದೊಂದಿಗೆ ಅನಧಿಕೃತ ಪ್ರವೇಶಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ರೋಹನ್ ಪಾರೇಖ್ ಬಳಿಯಿದ್ದ ಬಂದೂಕು ಪರವಾನಗಿ ಹೊಂದಿದ್ದು ಎಂದು ದೃಢಪಟ್ಟಿದೆ. ಆದಾಗ್ಯೂ ನಕಲಿ ಗುರುತಿನ ಚೀಟಿ ಬಳಸಿರುವುದು ಮತ್ತು ಅದರ ಉದ್ದೇಶವೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಕಾಸರಗೋಡು : ಕೇವಲ 3 ತಾಸುಗಳ ಅಂತರದಲ್ಲಿ ಅಣ್ಣ-ತಮ್ಮ ಹೃದಯಾಘಾತದಿಂದ ಸಾವು

ಈ ಪ್ರಕರಣದ ಮೂರನೇ ಆರೋಪಿಯಾಗಿರುವ ಪ್ರಥಮೇಶ ಬಾಗೂರ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆತ ರೋಹನ್ ಪಾರೇಖ್‌ನ ಸ್ನೇಹಿತ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳ ಮೊಬೈಲ್‌ ಫೋನ್‌ಗಳು, ಗುರುತಿನ ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಜಿಯೋ ವರ್ಲ್ಡ್ ಪ್ಲಾಜಾಕ್ಕೆ ಪ್ರವೇಶಿಸಲು ಅವರು ಏಕೆ ಯತ್ನಿಸಿದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ನ್ಯಾಯಾಲಯದ ವಿಚಾರಣೆಯ ವೇಳೆ ರೋಹನ್ ಪಾರೇಖ್ ಪರ ವಕೀಲರು, ತಮ್ಮ ಕಕ್ಷಿದಾರನಿಗೆ ಪಿಎಂಒ ಹೆಚ್ಚುವರಿ ಕಾರ್ಯದರ್ಶಿಯ ಹೆಸರಿನಲ್ಲಿ ಇ-ಮೇಲ್ ಬಂದಿತ್ತು ಎಂದು ವಾದಿಸಿದರು. ಆದರೆ ಆ ಇ-ಮೇಲ್‌ನ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಅಲ್ಲದೆ ‘ತರುಣ್’ ಎಂಬ ವ್ಯಕ್ತಿಯೊಬ್ಬ ಪಿಎಂಒ ಹೆಸರಿನಲ್ಲಿ ನಕಲಿ ಇ-ಮೇಲ್ ಕಳುಹಿಸಿದ್ದಾನೆ ಎಂದು ಪಾರೇಖ್ ಹೇಳಿಕೊಂಡಿದ್ದಾನೆ.
ತಾನು ಘಟನೆ ನಡೆದ ಸ್ಥಳದ ಸುತ್ತಮುತ್ತ ಒಂದು ದಿನ ಮುಂಚೆಯೇ ಭೇಟಿ ನೀಡಿದ್ದೆ ಹಾಗೂ ಮಾಲ್‌ನಿಂದ ಸುಗಂಧ ದ್ರವ್ಯ ಖರೀದಿಸಿದ್ದೆ ಎಂದು ಪಾರೇಖ್ ಹೇಳಿದ್ದಾನೆ. ಪ್ರಕರಣದ ವಿಚಾರಣೆ ವೇಳೆ ಪ್ರಧಾನ ಮಂತ್ರಿ ಕಚೇರಿಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಭದ್ರತಾ ನಿಯಮಾವಳಿಗಳ ಬಗ್ಗೆ ಆರೋಪಿಗೆ ಅರಿವು ಇದೆಯೇ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಕೇಳಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಮೋದಿ ವಿರುದ್ಧದ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ರದ್ದತಿಗೆ ಬಾಂಬೆ ಹೈಕೋರ್ಟ್ ನಕಾರ

ಪ್ರಾಥಮಿಕ ತನಿಖೆಯಲ್ಲಿ ರೋಹನ್ ಪಾರೇಖ್ ಹಿಂದಿನ ರಾತ್ರಿ ಸ್ಥಳಕ್ಕೆ ಬಂದಿದ್ದಾನೆ ಎಂಬುದು ಗೊತ್ತಾಗಿದೆ. ಆತ ನಕಲಿ ಪಿಎಂಒ ಗುರುತಿನ ಚೀಟಿಯನ್ನು ಏಕೆ ಸಿದ್ಧಪಡಿಸಿಕೊಂಡಿದ್ದ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇಬ್ಬರು ಬಂಧಿತ ಆರೋಪಿಗಳನ್ನು ಸೆಪ್ಟೆಂಬರ್ 11ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ಎನ್‌ಎಂಎಸಿಸಿ (NMACC) ಕೇಂದ್ರದಲ್ಲಿ ನಡೆಯಲಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026 ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸುತ್ತಿದ್ದಾರೆ. ನಾಲ್ಕು ದಿನಗಳ ಈ ಸಮ್ಮೇಳನವು ವಿಶ್ವದ ಅತಿದೊಡ್ಡ ಫಿನ್‌ಟೆಕ್ ಸಮಾವೇಶಗಳಲ್ಲಿ ಒಂದಾಗಿದೆ.
ಆದರೆ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ನಡೆದ ಘಟನೆಗೂ ಪ್ರಧಾನಿ ಮೋದಿ ಅವರ ಮುಂಬೈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement