ಮೈಸೂರಿನ ಅರುಣ ಯೋಗಿರಾಜ ಕೆತ್ತಿದ ರಾಮಲಲ್ಲಾ ಮೂರ್ತಿಯೇ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆ

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದಲ್ಲಿ ನೂತನವಾಗಿ ಪ್ರತಿಷ್ಠಾಪನೆ ಮಾಡಲು ಮೈಸೂರು ಮೂಲದ ಅರುಣ ಯೋಗಿರಾಜ ಅವರು ಕೆತ್ತಿರುವ ರಾಮಲಲ್ಲಾನ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸೋಮವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಪೂಜಿಸಲ್ಪಡುತ್ತಿರುವ ರಾಮಲಲ್ಲಾನ ಪ್ರಸ್ತುತ ವಿಗ್ರಹವನ್ನು ಸಹ ಹೊಸ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು. ಜನವರಿ 22 ರಂದು ರಾಮ ಮಂದಿರ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗುತ್ತಿದೆ ಮತ್ತು ಇದು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ವಿಗ್ರಹವು ಐದು ವರ್ಷದ ಬಾಲಕ ನಿಂತಿರುವ ಭಂಗಿಯಲ್ಲಿ ದೇವರನ್ನು ಚಿತ್ರಿಸುತ್ತದೆ. ಜನವರಿ 18 ರಂದು ವಿಗ್ರಹವನ್ನು ಗರ್ಭಗೃಹದಲ್ಲಿ ಇರಿಸಲಾಗುವುದು” ಎಂದು ಹೇಳಿದರು.

ಸಮಾರಂಭದ ಮುಹೂರ್ತವನ್ನು ವಾರಣಾಸಿ ಮೂಲದ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ನಿರ್ಧರಿಸಿದ್ದಾರೆ. ಪವಿತ್ರ ಸಮಾರಂಭದ “ಕರ್ಮಕಾಂಡ ವಿಧಿ”ಯ ಸಂಪೂರ್ಣ ಪ್ರಕ್ರಿಯೆಯು ವಾರಣಾಸಿಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ನಡೆಯಲಿದೆ ಎಂದು ರೈ ಹೇಳಿದರು. ಜನವರಿ 20 ಮತ್ತು 21 ರಂದು ದೇವಾಲಯವನ್ನು ಮುಚ್ಚಲಾಗುವುದು ಮತ್ತು ಜನವರಿ 23 ರಿಂದ ಜನರು ಮತ್ತೆ ದೇವರಿಗೆ ಪೂಜೆ ಸಲ್ಲಿಸಬಹುದು ಎಂದು ಅವರು ಹೇಳಿದರು.
ಅರುಣ ಯೋಗಿರಾಜ ಅಲ್ಲದೇ, ಬೆಂಗಳೂರಿನ ಜಿ.ಎಲ್.ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಮೂರ್ತಿಗಳನ್ನು ಕೆತ್ತಿದ್ದರು. ಈ ಮೊದಲು ಅರುಣ ಯೋಗಿರಾಜ ಅವರು ಕೆತ್ತಿದ್ದ ಮೂರ್ತಿಯೇ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂದು ವರದಿಯಾಗಿತ್ತು. ಆದರೆ ಟ್ರಸ್ಟ್‌, ಈ ವಿಷಯವನ್ನು ಖಚಿತಪಡಿಸಿರಲಿಲ್ಲ. ಈಗ ಅದನ್ನು ಖಚಿತಪಡಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಮೂರ್ತಿ ಕೆತ್ತನೆ ಕುರಿತು ಪ್ರತಿಕ್ರಿಯಿಸಿದ್ದ ಅರುಣ ಅವರು, ‘ರಾಮ ಲಲ್ಲಾ ಮೂರ್ತಿ ಕೆತ್ತನೆಗೆ ಆರು ತಿಂಗಳು ಬೇಕಾಯಿತು. ಬಾಲ ರಾಮನ ವಿಗ್ರಹ ಇದಾಗಿದೆ. ಕೈಯಲ್ಲಿ ಬಿಲ್ಲು ಹಾಗೂ ಬಾಣ ಹಿಡಿದ ಮೂರ್ತಿ ಇದು. ಒಟ್ಟು ಮೂರು ವಿಗ್ರಹಗಳನ್ನು ಕೆತ್ತಲಾಗಿದೆ. ಅಂತಿಮವಾಗಿ ಇವುಗಳಲ್ಲಿ ಒಂದು ಪ್ರತಿಷ್ಠಾಪನೆಗೆ ಆಯ್ಕೆಯಾಗಲಿದೆ’ ಎಂದು ತಿಳಿಸಿದ್ದರು. ಈಗ ಅವರೇ ಕೆತ್ತಿರುವ ಮೂರ್ತಿ ಆಯ್ಕೆಯಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.
ಜನವರಿ 22 ಸೋಮವಾರದಂದು ರಾಮಮಂದಿರದಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿರುವ ದೇವಸ್ಥಾನದಲ್ಲಿ ನಡೆಯುವ ಅದ್ಧೂರಿ ಸಮಾರಂಭಕ್ಕೆ ನಗರ ಸಜ್ಜುಗೊಳ್ಳುತ್ತಿದೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement