ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂ) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
96 ವರ್ಷದ ನಾಯಕನನ್ನು ದೆಹಲಿಯ ಏಮ್ಸ್‌ನ ಜೆರಿಯಾಟ್ರಿಕ್ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ.  ವಯೋಸಹಜ ಸಮಸ್ಯೆಯಿಂದಾಗಿ ಅವರನ್ನು ಬುಧವಾರ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ (ಏಮ್ಸ್) ದಾಖಲಿಸಲಾಗಿದೆ ಎಂದು ಹೇಳಲಾಗಿದೆ. “ಎಲ್‌ಕೆ ಅಡ್ವಾಣಿ ಅವರು ನವದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ. ಅವರು ಸ್ಥಿರವಾಗಿದ್ದಾರೆ ಮತ್ತು ವೀಕ್ಷಣೆಯಲ್ಲಿದ್ದಾರೆ” ಎಂದು ಏಮ್ಸ್ ಹೇಳಿಕೆ ತಿಳಿಸಿದೆ.
ಮಾಜಿ ಉಪಪ್ರಧಾನಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿದ ಮೂರು ತಿಂಗಳ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ನಿವಾಸದಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಎಲ್ ಕೆ ಅಡ್ವಾಣಿ ಬಗ್ಗೆ….
ನವೆಂಬರ್ 8, 1927 ರಂದು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ ಅಡ್ವಾಣಿ 1942 ರಲ್ಲಿ ಸ್ವಯಂಸೇವಕರಾಗಿ ಆರ್‌ಎಸ್‌ಎಸ್‌ಗೆ ಸೇರಿದರು. ಅವರು 1986 ರಿಂದ 1990 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, ನಂತರ 1993 ರಿಂದ 1998 ರವರೆಗೆ ಮತ್ತು 2004 ರಿಂದ 2005 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1980 ರಲ್ಲಿ ಬಿಜೆಪಿ ಸ್ಥಪಾನೆಯಾದಾಗಿನಿಂದ ಸುದೀರ್ಘ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅಡ್ವಾಣಿ ಅವರಿಗೆ ಸಲ್ಲುತ್ತದೆ.
ಸುಮಾರು ಐದು ದಶಕಗಳ ಸಂಸದೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಎಲ್.ಕೆ. ಅಡ್ವಾಣಿ ಅವರು ಮೊದಲು ಗೃಹ ಸಚಿವರಾಗಿದ್ದರು ಮತ್ತು ನಂತರ, ಅಟಲ್ ಬಿಹಾರಿ ವಾಜಪೇಯಿ (1999-2004) ಸಂಪುಟದಲ್ಲಿ ಉಪಪ್ರಧಾನಿಯಾಗಿದ್ದರು.
10 ಡಿಸೆಂಬರ್ 2007 ರಂದು, ಬಿಜೆಪಿಯ ಸಂಸದೀಯ ಮಂಡಳಿಯು 2009 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಅಡ್ವಾಣಿಯನ್ನು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಔಪಚಾರಿಕವಾಗಿ ಘೋಷಿಸಿತು. ಆದರೆ 2009 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಗೆದ್ದಾಗ, ಅಡ್ವಾಣಿಯವರು ಸುಷ್ಮಾ ಸ್ವರಾಜ್ ಅವರಿಗೆ 15ನೇ ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕಿಯಾಗಲು ದಾರಿ ಮಾಡಿಕೊಟ್ಟರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement