ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣನವರ ಹೆಸರು ಘೋಷಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಜಾತಿ ರಹಿತ ಸಮಾಜ ನಿರ್ಮಾಣದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರಲು ಅವರ ತತ್ವಗಳು ಹೆಚ್ಚು ಪ್ರಸಾರ ಆಗಬೇಕು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2025 ರಲ್ಲಿ ಅನುಭವ ಮಂಟಪ ಪೂರ್ಣಗೊಳ್ಳಬೇಕು. ಮುಂದಿನ ವರ್ಷ ಅನುಭವ ಮಂಟಪದ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
ಬಸವಣ್ಣ ಅವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಸರ್ಕಾರದ ಪರವಾಗಿ ಘೋಷಿಸುವಂತೆ ಕೆಲ ದಿನಗಳ ಹಿಂದೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತ್ತು. ಈ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು.
ಫೆ. 16 ಕ್ಕೆ ಬಜೆಟ್ ಮಂಡನೆ
ಫೆಬ್ರವರಿ 12 ರಂದು ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಫೆ. 16 ರಂದು ಬಜೆಟ್ ಮಂಡನೆ ಆಗಲಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ ತಿಳಿಸಿದರು. ಆ ತಿಂಗಳು 23 ರ ವರೆಗೂ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಪುಟ ಸಭೆಯ ತೀರ್ಮಾನಗಳು
ವಿದ್ಯುತ್ ನಿಗಮದ 4,430 ಕೋಟಿ ರೂ. ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಣಯ.
ಶಿವಮೊಗ್ಗದ 46.32 ಎಕರೆ ಇರುವ ಜೈಲು ಆವರಣದ ಉದ್ಯಾನವನಕ್ಕೆ ಅಲ್ಲಮಪ್ರಭು ಹೆಸರು ನಾಮಕರಣಕ್ಕೆ ನಿರ್ಧಾರ.
ಚಿಕ್ಕಮಗಳೂರಿನ ಬಾಬಾ ಬುಡನಗಿರಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ರಚನೆ.ಬೆಳಗಾವಿಯ ಕಿತ್ತೂರು ತಾಲೂಕಿನ ಹೆಸರನ್ನು ಚನ್ನಮ್ಮನ ಕಿತ್ತೂರು ಎಂದು ನಾಮಕರಣಕ್ಕೆ ನಿರ್ಧಾರ.
ಗೃಹ ಜ್ಯೋತಿ ಯೋಜನೆ ಅನುಷ್ಠಾನ ಆದೇಶದಲ್ಲಿ ಮಾರ್ಪಾಡು, ಮಾಸಿಕ 48 ಯೂನಿಟ್ಗಿಂತ ಕಡಿಮೆ ಬಳಸುವ ಎಲ್ಟಿ2 ಗ್ರಾಹಕರಿಗೆ ಶೇ.10 ಬದಲು ಹೆಚ್ಚುವರಿ 10 ಯೂನಿಟ್ ಒದಗಿಸಲು ಸಂಪುಟ ಒಪ್ಪಿಗೆ.
ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಸುಂಕ ವಿಧೇಯಕ 2024ಕ್ಕೆ ಒಪ್ಪಿಗೆ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಷೇರು ಅಧಿಕೃತ ಬಂಡವಾಳ 600 ಕೋಟಿ ರೂ.ಗಳಿಂದ 1200 ಕೋಟಿ ರೂ.ಗಳಿಗೆ ಹೆಚ್ಚಳಕ್ಕೆ ನಿರ್ಧಾರ.
ಡಿಜಿಟಲ್ ಲ್ಯಾಂಡ್ ರೆಕಾಡ್ಸ್ ಯೋಜನೆಗೆ 3455 ಕಂಪ್ಯೂಟರ್, ಸ್ಕ್ಯಾನರ್, ರೋವರ್, ಪ್ರಿಂಟರ್ಗಳನ್ನು 30.45 ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆಗೆ ನಿರ್ಧಾರ
15.13 ಕೋಟಿ ರೂ. ವೆಚ್ಚದಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ತಂತ್ರಾಂಶ ಸಿದ್ಧಪಡಿಸಿ ಅನುಷ್ಠಾನ ಮಾಡಲು ಒಪ್ಪಿಗೆ. 30 ಸೀಟರ್ ಕಾಲ್ ಸೆಂಟರ್ ಸ್ಥಾಪನೆಗೆ ಸಚಿವ ಸಂಪುಟ ನಿರ್ಧರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ