ನವದೆಹಲಿ: ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 66 ವರ್ಷದ ಅಧ್ಯಾತ್ಮ ಗುರು ಜಗ್ಗಿ ವಾಸುದೇವ (ಸದ್ಗುರು) ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದಲ್ಲಿನ ಚೇತರಿಕೆಯ ಬಗ್ಗೆ ಈಶಾ ಫೌಂಡೇಶನ್ ಸಂಸ್ಥಾಪಕರಾದ ಸದ್ಗುರು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
‘ಸದ್ಗುರು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ’ ಎಂದು ವೀಡಿಯೊಕ್ಕೆ ಕ್ಯಾಪ್ಶನ್ ನೀಡಲಾಗಿದ್ದು, ಸದ್ಗುರು ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ದಿನಪತ್ರಿಕೆ ಓದುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಅನೇಕ ನೆಟ್ಟಿಗರರು ಇವರ ಪೋಸ್ಟ್ಗೆ ಕಾಮೆಂಟ್ ಕೂಡ ಮಾಡಿದ್ದು, ಅಧ್ಯಾತ್ಮಿಕ ನಾಯಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಬೇಗನೆ ಗುಣಮುಖರಾಗಿ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮಾರ್ಚ್ 15ರಂದು ಸದ್ಗುರು ಅವರು ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದರು ಮತ್ತು ಇದರಲ್ಲಿ ಮೆದುಳಿನ ತೀವ್ರ ರಕ್ತಸ್ರಾವ ಕಂಡುಬಂದಿತ್ತು. ಆದರೆ ಅವರು ತಾನು ಒಪ್ಪಿಕೊಂಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲು ನಿರಾಕರಿಸಿದರು.
ತೀವ್ರ ತಲೆನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಮೊದಲು ಸದ್ಗುರು ಮೆದುಳಿನಲ್ಲಿ ಬಹು ರಕ್ತಸ್ರಾವವನ್ನು ಅನುಭವಿಸಿದ್ದರು ಎಂದು ಹೇಳಿಕೆ ತಿಳಿಸಿದೆ. ನಂತರ, ಅವರು ಮಾರ್ಚ್ 17 ರಂದು ನವದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿರುವ ಡಾ ವಿನಿತ್ ಸೂರಿ, ಸದ್ಗುರು ಸ್ಥಿರವಾದ ಪ್ರಗತಿಯನ್ನು ತೋರಿಸಿದ್ದಾರೆ ಮತ್ತು ಅವರ ಮೆದುಳು, ದೇಹ ಮತ್ತು ಪ್ರಮುಖ ನಿಯತಾಂಕಗಳು ಸಾಮಾನ್ಯ ಮಟ್ಟಕ್ಕೆ ಸುಧಾರಿಸಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ