ಟ್ರೈನಿ ವೈದ್ಯರ ಮೇಲೆ ಅತ್ಯಾಚಾರ-ಕೊಲೆ ನಡೆದ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಪ್ರತಿಭಟನೆ ವೇಳೆ ಗುಂಪಿನಿಂದ ದಾಂಧಲೆ, ಹಿಂಸಾಚಾರ; 9 ಜನರ ಬಂಧನ

ಕೋಲ್ಕತ್ತಾ : ಕಳೆದ ವಾರ ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿಯ ಶವ ಪತ್ತೆಯಾದ ನಂತರ ಭುಗಿಲೆದ್ದ ಪ್ರತಿಭಟನೆ ವೇಳೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕನಿಷ್ಠ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಗುರುವಾರ ಮಧ್ಯರಾತ್ರಿಯ ನಂತರ ಅಪರಿಚಿತ ದುಷ್ಕರ್ಮಿಗಳು ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಪ್ರವೇಶಿಸಿ ವೈದ್ಯಕೀಯ ಸೌಲಭ್ಯದ ಭಾಗಗಳನ್ನು ಧ್ವಂಸಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ-ಕೊಲೆಯನ್ನು ವಿರೋಧಿಸಿ ಮಹಿಳೆಯರು ಮಧ್ಯರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.
ಕೋಲ್ಕತ್ತಾ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ಮಹಿಳೆಯರು ಬುಧವಾರ ರಾತ್ರಿ ಪ್ರತಿಭಟನೆ ಆಯೋಜಿಸಿದ್ದರು. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಆರಂಭವಾದ ಪ್ರತಿಭಟನೆ ವೇಳೆ ಕೆಲವರು ಆಸ್ಪತ್ರೆ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದರು. ವಾಹನಗಳ ಮೇಲೆ ದಾಳಿ ನಡೆಸಲಾಯಿತು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಯಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಶೆಲ್ಗಳನ್ನು ಹಾರಿಸಬೇಕಾಯಿತು. 15 ಪೊಲೀಸರು ಗಾಯಗೊಂಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸುಮಾರು 40 ಜನರ ಗುಂಪು ಪ್ರತಿಭಟನಾಕಾರರಂತೆ ವೇಷ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಆಸ್ಪತ್ರೆಗೆ ಹಾನಿ ಮಾಡಿದೆ. ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿತು ಮತ್ತು ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು.
ಗುರುವಾರ ಮುಂಜಾನೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿ, ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ ನಂತರ ಪರಿಸ್ಥಿತಿಯನ್ನು ಅವಲೋಕಿಸಿದರು. ಕಳೆದ ವಾರ ಸ್ನಾತಕೋತ್ತರ ತರಬೇತಿ ವೈದ್ಯರ ಶವ ಪತ್ತೆಯಾದ ವೈದ್ಯಕೀಯ ಸಂಸ್ಥೆಯಲ್ಲಿ ಧರಣಿ ನಿರತ ವೈದ್ಯರೊಂದಿಗೆ ಬೋಸ್ ಮಾತನಾಡಿದರು.

ಪ್ರಮುಖ ಸುದ್ದಿ :-   254 ಕೆಜಿ ತೂಕದ ಭಾರಿ ಬೊಜ್ಜಿನ ವ್ಯಕ್ತಿಗೆ ತೂಕ ಕಡಿಮೆ ಮಾಡಲು ಹೈ ರಿಸ್ಕ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರು...! ಏನಿದು ಸರ್ಜರಿ..?

“ನಾನು ನಿಮ್ಮೊಂದಿಗಿದ್ದೇನೆ ಮತ್ತು ಇದನ್ನು ಪರಿಹರಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. ನಾನು ನಿಮಗೆ ನ್ಯಾಯದ ಭರವಸೆ ನೀಡುತ್ತೇನೆ. ನನ್ನ ಕಿವಿ ಮತ್ತು ಕಣ್ಣುಗಳು ತೆರೆದಿವೆ” ಎಂದು ಬೋಸ್ ವಿದ್ಯಾರ್ಥಿಗಳಿಗೆ ಹೇಳಿದರು. ಹಿಂದಿನ ರಾತ್ರಿ ವಿಧ್ವಂಸಕ ಕೃತ್ಯ ನಡೆದ ಆಸ್ಪತ್ರೆಯ ತುರ್ತು ವಿಭಾಗವನ್ನೂ ರಾಜ್ಯಪಾಲರು ಪರಿಶೀಲಿಸಿದರು.
ಟ್ರೈನಿ ವೈದ್ಯೆಯ ಅತ್ಯಾಚಾರ- ಕೊಲೆ
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ವಾರ ಕರ್ತವ್ಯದಲ್ಲಿದ್ದಾಗ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ೩೧ ವರ್ಷದ ವೈದ್ಯೆಯ ಅರೆಬೆತ್ತಲೆ ಶವ ಆಗಸ್ಟ್ 9 ರಂದು ಬೆಳಿಗ್ಗೆ ಪತ್ತೆಯಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನೊಬ್ಬನನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement