ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಸೋಮವಾರದ ಕಲಾಪದಲ್ಲಿ ‘ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಹಾನರ್ (ತಿದ್ದುಪಡಿ) ಮಸೂದೆ, 2026’ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಸೂದೆಯ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ನೀಡುವ ಉದ್ದೇಶ ಹೊಂದಿದೆ.
ಕೇಂದ್ರ ಸಚಿವ ಸಂಪುಟ ಈಗಾಗಲೇ ಈ ಮಸೂದೆಗೆ ಅನುಮೋದನೆ ನೀಡಿದ್ದು, ಲೋಕಸಭೆಯಲ್ಲಿ ಮಂಡನೆ, ಚರ್ಚೆ ಹಾಗೂ ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ‘ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಹಾನರ್ ಆಕ್ಟ್, 1971’ ಅಡಿಯಲ್ಲಿ ರಾಷ್ಟ್ರಧ್ವಜ, ಭಾರತದ ಸಂವಿಧಾನ ಹಾಗೂ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಮಾತ್ರ ಕಾನೂನು ರಕ್ಷಣೆ ಇದೆ. ಈ ಹೊಸ ತಿದ್ದುಪಡಿ ಮಸೂದೆ ಅಂಗೀಕಾರವಾದರೆ, ‘ವಂದೇ ಮಾತರಂ’ ಕೂಡ ಇದೇ ಕಾಯ್ದೆಯ ವ್ಯಾಪ್ತಿಗೆ ಬರಲಿದೆ. ಇದರಿಂದ ರಾಷ್ಟ್ರಗೀತೆಯಷ್ಟೇ ಗೌರವ ಮತ್ತು ಕಾನೂನು ರಕ್ಷಣೆ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೂ ದೊರೆಯಲಿದೆ.
ಯಾವುದು ಅಪರಾಧವಾಗಲಿದೆ?
ಮಸೂದೆ ಜಾರಿಯಾದ ಬಳಿಕ, ಉದ್ದೇಶಪೂರ್ವಕವಾಗಿ ‘ವಂದೇ ಮಾತರಂ’ಗೆ ಅವಮಾನ ಮಾಡುವುದು, ಅಪಮಾನಕಾರಿ ವರ್ತನೆ ತೋರುವುದು ಅಥವಾ ಅದರ ಗಾಯನಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಇಂತಹ ಕೃತ್ಯ ಎಸಗಿದವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಇರಲಿದೆ. ರಾಷ್ಟ್ರಗೀತೆಗೆ ಸಂಬಂಧಿಸಿದ ಅಪರಾಧಗಳಿಗೆ ಈಗಿರುವ ಶಿಕ್ಷೆಯನ್ನೇ ಇದಕ್ಕೂ ಅನ್ವಯಿಸುವ ಪ್ರಸ್ತಾಪವಿದೆ.
ಕೇಂದ್ರ ಸರ್ಕಾರದ ಪ್ರಕಾರ, ‘ವಂದೇ ಮಾತರಂ’ಗೆ ರಾಷ್ಟ್ರದ ಇತರ ರಾಷ್ಟ್ರೀಯ ಚಿಹ್ನೆಗಳಷ್ಟೇ ಗೌರವ ಮತ್ತು ಕಾನೂನುಬದ್ಧ ರಕ್ಷಣೆ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ಈ ಹಿಂದೆ ಗೃಹ ಸಚಿವಾಲಯವು, ರಾಷ್ಟ್ರಗೀತೆ ಹಾಡುವ ಅಧಿಕೃತ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಕೂಡ ಹಾಡಬೇಕು ಅಥವಾ ನುಡಿಸಬೇಕು ಎಂಬ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದೀಗ ಅದಕ್ಕೆ ಕಾನೂನುಬದ್ಧ ಬೆಂಬಲ ನೀಡಲು ಸರ್ಕಾರ ಮುಂದಾಗಿದೆ.
ಈ ತಿದ್ದುಪಡಿ ಮಸೂದೆ ಕಾನೂನು ಆಗಲು ಮೊದಲು ಇದು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅಂಗೀಕಾರ ಪಡೆಯಬೇಕು. ನಂತರ ರಾಷ್ಟ್ರಪತಿಯವರ ಅನುಮೋದನೆ ದೊರೆತ ಬಳಿಕವೇ ಇದು ಕಾನೂನಾಗಿ ಜಾರಿಗೆ ಬರಲಿದೆ. ಮಸೂದೆ ಜಾರಿಯಾದರೆ, 1971ರ ಕಾಯ್ದೆಯಡಿ ‘ವಂದೇ ಮಾತರಂ’ಗೆ ಮೊದಲ ಬಾರಿಗೆ ಸ್ಪಷ್ಟ ಕಾನೂನು ರಕ್ಷಣೆ ದೊರೆಯಲಿದ್ದು, ರಾಷ್ಟ್ರಗೀತೆಯ ಸಮಾನ ಸ್ಥಾನಮಾನ ಸಿಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ