ಬಿಎಸ್ ವೈ ಸಿಂಹ ಘರ್ಜನೆ ಎಲ್ಲಿ ಅಡಗಿಹೋಯಿತು?

  ಅರುಣಕುಮಾರಹಬ್ಬು

ಕರ್ನಾಟಕದ ರಾಜಕೀಯದಲ್ಲಿ ನಿರಂತರ ಸಿಂಹ ಘರ್ಜನೆ ಮಾಡುತ್ತಾ ಮೆರೆಯುತ್ತಿದ್ದ ಸಿಂಹದ ಧ್ವನಿ ಅಡಗಿ ಹೋಯಿತೇ? ಏನಾಯಿತು ಈ ಸಿಂಹಕ್ಕೆ? ಉತ್ಸಾಹ ಕುಸಿಯಿತೇ? ಇಲ್ಲವೇ ರಾಜಕೀಯದ ಒಳಸುಳಿಗಳಿಗೆ ಸಿಕ್ಕು ದುರ್ಬಲಗೊಂಡಿತೇ? ರಾಜಕೀಯದ ಓಘ ಹೀಗೇ ಎಂದು ಹೇಳುವಂತಿಲ್ಲ. ಅದು ಎಂದಿಗಾದರೂ ಯಾವುದಾದರೂ ತಿರುವು ಪಡೆಯಬಹುದು ಎನ್ನುವುದಕ್ಕೆಈಗಿನ ರಾಜಕೀಯ ಬೆಳವಣಿಗೆಗಳುಉದಾಹರಣೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ಪಕ್ಷಕ್ಕೇ ಹೆಬ್ಬಾಗಿಲೇ ತೆರೆದಂತಾಗಿದೆ ಎಂದು ವರ್ಣಿಸಲಾಗಿತ್ತು. ಅದಕ್ಕೆಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವವೇ ಕಾರಣ ಎಂದೂ ವಿಶ್ಲೇಷಿಸಲಾಗಿತ್ತು. ಅಂಥ ಅನಭಿಷಿಕ್ತ ನಾಯಕ ಇಂದು ಮತ್ತೆ ಬಿಜೆಪಿಗೆ ಬಹುಮತ ಕೊಡಿಸುವುದರ ಜತೆಗೆ ಮುಖ್ಯಮಂತ್ರಿಯಾಗಿ ಪ್ರಮುಖ ಸ್ಥಾನ ಪಡೆಯುವುದರಲ್ಲಿಯೂ ಅವರ ಪಾತ್ರ ಬಹುಮುಖ್ಯ. ಕಳೆದ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ ಏಕೈಕ ದೊಡ್ಡಪಕ್ಷವಾಗಿ ಗೆದ್ದು ಬಂದಿದ್ದರೂ ಅಧಿಕಾರದ ಗದ್ದುಗೆ ಏರುವಲ್ಲಿ ಸ್ವಲ್ಪ ಅಡ್ಡಿ ಆತಂಕಗಳು ಎದುರಾಗಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿನಿರ್ಮಾಣವಾಗಿದ್ದು ನಂತರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಆಶ್ಚರ್ಯಕರರೀತಿಯಲ್ಲಿ ಮತ್ತೆಅಧಿಕಾರಕ್ಕೆ ಬಂದು ಹೊಸ ಹುಮ್ಮಸಿನಿಂದ ಯಡಿಯೂರಪ್ಪನವರೇ ಮುಖ್ಯಮಂತ್ರಿಗಾದಿಗೆ ಏರಿದ್ದುಬಿ ಜೆಪಿಯ ರಾಜಕೀಯ ಇತಿಹಾಸದಲ್ಲಿಒಂದು ಮಹತ್ವದ ಬೆಳವಣಿಗೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಉಂಟಾದ ಬಿರುಕು, ಬಂಡಾಯಗಳಿಂದಾಗಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತಲ್ಲದೆ,  ಆ ಸರಕಾರ ಪತನಗೊಂಡಿದ್ದು ಮತ್ತು ಬಿಜೆಪಿ ಅಧಿಕಾರ ಸ್ಥಾಪನೆ ಮಾಡಿರುವುದರಲ್ಲಿ ಯಡಿಯೂರಪ್ಪನವರ ಪಾತ್ರಮರೆಯಲಾಗದು. ಹಾಗೂಹೀಗೂ ಒಂದೂವರೆ ವರ್ಷಗಳ ಅನಿಶ್ಚಿತೆಯಿಂದ ಹೊರಬಂದ ಕರ್ನಾಟಕದ ರಾಜಕೀಯ ಬಿಜೆಪಿಅಧಿಕಾರದ ಗದ್ದುಗೆ ಏರುವುದರ ಮೂಲಕ ಹೊಸಮನ್ವಂತರ ಆರಂಭಗೊಂಡಿತು. ಅಷ್ಟೇ ಕ್ಷಿಪ್ರಗತಿಯಲ್ಲಿ ಬಿಜೆಪಿಯ ಒಳಾಡಳಿತದಲ್ಲಿಯೂ ಹೊಸಗಾಳಿ ಬೀಸತೊಡಗಿದ್ದು ಬಿಎಸ್‌ ವೈ ಪುತ್ರ ವಿಜಯೇಂದ್ರರವರಂಥ ಬಿಸಿರಕ್ತದ ಯುವಕರ ಪ್ರವೇಶವಾಯಿತು.

ಇಲ್ಲಿಯವರೆಗೆ ಎಲ್ಲವೂ ಬಿಎಸ್‌ ವೈ ಆಣತಿಯಂತೆ ನಡೆಯುತ್ತಿದ್ದ ಅಧಿಕಾರದ ಸೂತ್ರ ಏಕೋ ಸಡಿಲಾದಂತೆ ಅನಿಸಿತು. ಅದಕ್ಕೆತಕ್ಕಂತೆ ಪ್ರತಿಪಕ್ಷಗಳೂ ತಮ್ಮ ಟೀಕೆಯ ದಾಳವನ್ನುಉರುಳಿಬಿಟ್ಟು ಬಿಜೆಪಿ ರಾಜಕೀಯದಲ್ಲಿ ಆಗಿರುವ ಬದಲಾವಣೆಯನ್ನು ಎತ್ತಿ ತೋರಿಸಿದವು. ವಿಜಯೇಂದ್ರರೂ ಕೂಡ ಉಪಚುನಾವಣೆಗಳಲ್ಲಿ ಸಕ್ರಿಯ ಪಾತ್ರವಹಿಸಿ ಪಕ್ಷದಅಭ್ಯರ್ಥಿಗಳ ಗೆಲುವಿಗೆ ಕಾರಣರಾದರೆಂಬ ಭಾವನೆ ಮೂಡಿ ಅವರೇ ಕರ್ನಾಟಕದ ಬಿಜೆಪಿ ರಾಜಕೀಯದ ಮುಂಚೂಣಿ ನಾಯಕರೆಂಬ ಪ್ರಚಾರ ಬೇರೂರ ತೊಡಗಿದ್ದು, ಪಕ್ದದ ಆಂತರಿಕ ನಿರ್ಣಯಗಳಲ್ಲಿ ಅವರು ಪ್ರಮುಖಪಾತ್ರವಹಿಸುತ್ತಾರೆ ಎನ್ನುವ ಪ್ರಚಾರವೂ ಮಾಧ್ಯಮಗಳಲ್ಲಿ ವಿಜೃಂಭಿಸ ತೊಡಗಿದ್ದುದು ಆಂತರಿಕ ತಳಮಳಕ್ಕೂ ಕಾರಣವಾಯಿತು.

ಇದೇಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್‌ ಕೂಡ ತನ್ನ ಪ್ರಭಾವಿ ಅಸ್ತಿತ್ವವನ್ನೂ ವ್ಯಕ್ತಪಡಿಸ ತೊಡಗಿದ್ದುದು ಬಿಜೆಯಪಿಯ ರಾಜಕೀಯದಲ್ಲಿ ಹೊಸತನ ಮತ್ತು ನಾಯಕತ್ವದ ವಿಷಯದಲ್ಲಿ ಅನೇಕ ಊಹಾಪೋಹಗಳು ಹರಡತೊಡಗಿದವು. ಬಿಎಸ್‌ ವೈ  ನಾಯಕತ್ವದಲ್ಲಿ ಬದಲಾವಣೆಯಾಗಲಿದೆ,ಯಾಕೆಂದರೆ ಅವರು  ತಮ್ಮಪುತ್ರನ ಸಲಹೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅಪಸ್ವರಗಳೂ ಕೇಳಿಬಂದವು. ಅದನ್ನುವಿಜಯೇಂದ್ರ ಸ್ವತಃ ನಿರಾಕರಿಸಿದರೂ ಈ ಭಾವನೆ ಮಾತ್ರ ಆಳವಾಗಿ ಬೇರೂರಿ ಹತ್ತು ಹಲವಾರು ರೀತಿಯ ಹೇಳಿಕೆಗಳು-ಪ್ರತಿಹೇಳಿಕೆಗಳು ಸಾರ್ವಜನಿಕರ ಎದುರು ತೆರೆದಿಡಲ್ಪಟ್ಟಿತು.

ಈ ಅವಧಿಯಲ್ಲಿ ಬಿಎಸ್‌ ವೈ ಅವರ ಧ್ವನಿ ಕ್ರಮೇಣ ಉಡುಗುತ್ತಿರುವುದೂ ಆಗಾಗ ಕಂಡು ಬರತೊಡಗಿತು. ಪಕ್ಷದ ರಾಷ್ಟ್ರೀಯ ನಾಯಕರ ಸಲಹೆ-ಸೂಚನೆಗಳಿಗೆ ಅವರು ಮೌನವಾಗಿ ತಲೆಬಾಗಬೇಕಾದ ಸ್ಥಿತಿ ಒದಗಿದಂತೆ ತೋರತೊಡಗಿತು. ಈ ಬೆಳವಣಿಗೆ ಸಂಪುಟ ಪುನರ್ರಚನೆಯ ಸಂದರ್ಭದಲ್ಲಿ ಮತ್ತುಷ್ಟು ತೀವ್ರಗೊಂಡು ಅನಿಶ್ಚಿತತೆ ಗೊಂದಲಗಳ ಮಧ್ಯೆಯೇ ಯಡಿಯೂರಪ್ಪನವರು ಪ್ರತಿಬಾರಿಯೂ ಹೈಕಮಾಂಡನತ್ತ  ನೋಡುವಂತಾಯಿತು. ಸಂಪುಟ ಪುನರ್ರಚನೆ ಯಾವಾಗ? ಅದರಲ್ಲಿ ಕಾಂಗ್ರೆಸ್‌ -ಜೆಡಿಎಸ್‌ಗಳಿಂದ ಆಮದಾಗಿರುವ 17 ಮಂದಿಯ ಪಾಲೆಷ್ಟು ಎನ್ನುವಲೆಕ್ಕಾಚಾರದ ಜತೆಗೆ ಒತ್ತಡ, ರಾಜಕೀಯತಂತ್ರಗಳು  ಜೊತೆಗೂಡಿದವು. ಆಗ ಮಂತ್ರಿಗಿರಿಯ ಮೇಲೆಕ ಣ್ಣಿಟ್ಟಿದ್ದ ಅನೇಕರ ಮನದಲ್ಲಿ ತಳಮಳ-ತಲ್ಲಣಗಳು ಎದ್ದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಆಹಾರ ಒದಗಿಸಿತು. ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಮುಕ್ತ ಮಾತುಗಾರ ಬಸನಗೌಡಾಪಾಟೀಲ ಯತ್ನಾಳ್‌ ಅವರು ಬಹಿರಂಗವಾಗಿಯೇ ಪಕ್ಷದ ಟೀಕೆಗೆ ಉಧ್ಯುಕ್ತರಾದರು. ಅಂತೂ ತೆರೆಮರೆ ರಾಜಕೀಯದ ಮಧ್ಯೆ ಮೊದಲ ಹಂತದಲ್ಲಿ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿ ಗೆದ್ದ ಬಿಎಸ್‌ವೈ ಮತ್ತೆ ಕೆಲವೇ ತಿಂಗಳುಗಳಲ್ಲಿ ಸಂಪುಟ ವಿಸ್ತರಣೆ ಮತ್ತು ಪುನರ್ರಚನೆ ಮಾಡುವ ಒತ್ತಡಕ್ಕೆಸಿಲುಕಿದರು. ಸಂಪುಟದಲ್ಲಿ ಲೆಕ್ಕದಂತೆ ಬಾಕಿಉಳಿದ ಏಳುಸ್ಥಾನಗಳನ್ನು ತುಂಬಲೇ ಬೇಕಾದ ಅತಿಯಾದ ಒತ್ತಡಕ್ಕೆ ಸಿಲುಕಿದ ಅವರು ಪದೇಪದೇ ಹೈಕಮಾಂಡ್‌ ಬಾಗಿಲು ತಟ್ಟಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣವಾಯಿತು. ಇಲ್ಲಿಯೇ ಬಿಎಸ್ವೈ ಧ್ವನಿಸ್ವಲ್ಪಕುಗ್ಗತೊಡಗಿತ್ತಲ್ಲವೇ?

ಅಂತೂ ಇಂತೂ ಹಗ್ಗಜಗ್ಗಾಟದ ಮಧ್ಯೆಗೃಹ ಸಚಿವ ಅಮಿತ್‌: ಶಾ ಅವರ ನಿರ್ದೇಶನದಂತೆ ಹೊಸ ಏಳುಮಂದಿಯ ಸೇರ್ಪಡೆಯೇನೋ ಆಯಿತು. ಅತ್ಯಂತ ಸರಳವಾಗಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಯಾರ ಮುಖದಲ್ಲಿಯೂ ಕಳೆಯಿರಲಿಲ್ಲ. ಹೊಸ ಸಚಿವರ ನೇಮಕದಲ್ಲಿ ಅನೇಕ ಅಸಮಾಧಾನಗಳು, ಅಡ್ಡಿ ಆತಂಕಗಳು ನಿರ್ಮಾಣವಾದವು. ಪಕ್ಷದ ಆಂತರಿಕ ಬೆಳವಣಿಗೆ ಮತ್ತು ತಳಮಳಗಳನ್ನು ಬಿಎಸ್‌ವೈ ಮೌನವಾಗಿ ಸಹಿಸಬೇಕಾದ ಪ್ರಸಂಗ ಬಂದಿತು. ನೇಮಕವಾದ ಏಳು ಮಂದಿ ಸಚಿವರಲ್ಲಿ ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೀಶ್ವರ ಆಯ್ಕೆ ಪ್ರತಿಪಕ್ಷಗಳಿಂದ ಅತ್ಯಂತ ಟೀಕೆಗೆ ಒಳಗಾಯಿತು.ಅತ್ಯಂತ ಕಷ್ಟಪಟ್ಟು ವಲಸೆ ಬಂದಿದ್ದ ಎಂಟಿಬಿ ನಾಗರಾಜ ಅವರು ಅತಿಪ್ರಯಾಸದಿಂದ ಸಂಪುಟದಲ್ಲಿ ಸ್ಥಾನ ಪಡೆದರು.

ಮಂತ್ರಿಗಿರಿ ದೊರಕದ ಸದಸ್ಯ ಯತ್ನಾಳ ಅವರು ಬಹಿರಂಗ ಹೇಳಿಕೆ ನೀಡತೊಡಗಿದರಲ್ಲದೆ ಮುಖ್ಯಮಂತ್ರಿಯವರ ಮೇಲೆಯೇ ನೇರ ಆರೋಪಗಳನ್ನು ಹೊರಿಸತೊಡಗಿದ್ದುದರಿಂದ ಬಿಜೆಪಿಯ ಆಂತರಿಕ ವಿಷಯ ಹಾದಿಬೀದಿ ರಂಪವಾಯಿತು. ಬಿಜೆಪಿಯ ಆಂತರಿಕ ವಿಷಯದಲ್ಲಿ ಉದ್ಭವಿಸಿದ ಬಂಡಾಯದ ಕಿಡಿ ಬಿಎಸ್‌ ವೈಅವರನ್ನುಸಾಕಷ್ಟುಹೈರಾಣ ಮಾಡಿತು. ಅದಾಗಲೇ ಅವರ ಘರ್ಜನೆ ನಿಂತುಬಹುದಿನಗಳೇ ಆಗಿದ್ದವು.ಈಗಾಗಲೇಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ವತಃ ಬಿಎಸ್‌ ವೈ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

ಈ ಗೊಂದಲ, ಪ್ರಹಸನಗಳುಇಷ್ಟಕ್ಕೇನಿಲ್ಲಲಿಲ್ಲ. ಹೊಸಬರಿಗೆ ಖಾತೆಗಳ ಹಂಚಿಕೆ ಮತ್ತು ಖಾತೆಗಳ ಮರು ಹೊಂದಾಣಿಕೆಯಲ್ಲಿ ವಲಸಿಗರು ಮತ್ತುಹಳೆಯ ಹಿರಿಹುಲಿಗಳ ಆಕ್ಷೇಪ ಪುಂಖಾನುಪುಂಖವಾಗಿ ಹೊರಬೀಳವುಂತಾದಾಗ ಮುಖ್ಯಮಂತ್ರಿಗಳು ಇನ್ನಷ್ಟು ಹತಾಶರಂತಾದರು. ಕಟ್ಟುನಿಟ್ಟಿನ ಹೇಳಿಕೆಗಳ ಮೂಲಕ ಆಂತರಿಕ ಬಂಡಾಯ ಶಮನಗೊಳಿಸಲು ಹರಸಾಹಸ  ಪಡುವಂತಾಯಿತು.

ಹಳೆಯ ಹುಲಿಗಳಾದ ಮಾಧುಸ್ವಾಮಿಯವರ ಖಾತೆ ಬದಲಾವಣೆ ಇನ್ನಷ್ಟು ತಲ್ಲಣಗಳನ್ನುತಂದೊಡ್ಡಿತು. ಅವರು ರಾಜಿನಾಮೆ ಸಲ್ಲಿಸುವ ಮಾತುಗಳು ಕೇಳಿಬಂದವು. ಅದೇ ಸಚಿವ ಆನಂದಸಿಂಗ್‌ ಅವರ ಅರಣ್ಯಖಾತೆ ಹಿಂಪಡೆದು ಬೇರೆ ಖಾತೆ ನೀಡಿದ್ದು, ಗೋಪಾಲಯ್ಯನವರ ಖಾತೆ ಬದಲಾವಣೆ ಹೀಗೆ ಒಂದೇ ಎರಡೇ ಹತ್ತು ಹಲವಾರು ಸಮಸ್ಯೆಗಳನ್ನು ಶಮನಗೊಳಿಸುವುದರಲ್ಲಿಯೇ ಸಮಯ ಕಳೆಯ ತೊಡಗಿದ್ದರೂ ಬಿಎಸ್‌ವೈ ಗುಡುಗಲಿಲ್ಲ. ತಣ್ಣಗೆ ಎಲ್ಲವನ್ನೂ ಸಾಂತ್ವನಗೊಳಿಸುವ ಪ್ರಯತ್ನ ಮಾಡುತ್ತಲೇ ಅಶಾಂತರಾದ ಸಚಿವ ಮಿತ್ರರ ಖಾತೆಗಳನ್ನು ಮತ್ತೆಮತ್ತೆ ಬದಲಿಸಬೇಕಾದ ಅನಿವಾರ್ಯತೆ ಉದ್ಭವಿಸಿತು. ಈ ಖಾತೆ ಹಂಚಿಕೆಯಲ್ಲಿ ಇಷ್ಟೊಂದು ಬದಲಾವಣೆಗಳ ಹಿಂದೆ ಯಾರ ಕೈವಾಡವಿದೆ ಎನ್ನುವುದರ ಕುರಿತೂ ಪ್ರತಿಪಕ್ಷಗಳ ಮೊಗಸಾಲೆಯಲ್ಲಿ ಚರ್ಚೆ-ವಿಚರ್ಚೆಗಳು ನಡೆದವು. ಲೋಕಾಭಿರಾಮವಾಗಿ ಮಾತನಾಡುವವರೂ ಸಂಪುಟ ಪುನರ್ರಚನೆಯ ಕುರಿತೇ  ಲೇವಡಿ ಮಾಡುವ ಸ್ಥಿತಿಗೆ ಬಂದಿತು. ಹೊಸಖಾತೆ ಪಡೆದ ಸಚಿವರೂ ತಮ್ಮತಮ್ಮ ಖಾತೆಗಳ ಕುರಿತು ಬಹಿರಂಗ ಹೇಳಿಕೆ ನೀಡಿದರು.

ಅಬಕಾರಿ ಖಾತೆ ಪಡೆದ  ಎಂಟಿಬಿ ನಾಗರಾಜ ಅವರು ತಮ್ಮ ಖಾತೆಯ ಕುರಿತು ತಾನು ಜನರಿಗೆ ಎಣ್ಣೆ ಕುಡಿಸಲು ಸಚಿವನಾಗಬೇಕೇ ಎನ್ನುವ ಕಟು ಮತ್ತು ವ್ಯಂಗ್ಯದ ಮಾತುಗಳನ್ನಾಡಿದರು. ಆಗ ಒತ್ತಡಕ್ಕೆಸಿಲುಕಿದ ಮುಖ್ಯಮಂತ್ರಿ ಅವರು ಖಾತೆ ಬದಲಾಯಿಸಲೇ ಬೇಕಾಯಿತು. ಸಚಿವ ಮಾಧು ಸ್ವಾಮಿ ಅವರಿಗೆ ನೀಡಿದ ಹೊಸ ಖಾತೆಯನ್ನು ಮತ್ತೆ ಮರುಹಂಚಿಕೆ ಮಾಡಿ ಹಳೆಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಬೇಕಾಯಿತು. ಜತೆಗೆ ವಲಸೆ ಬಂದಿದ್ದ ಡಾ.ಸುಧಾಕರ ಅವರಿಂದ ಹಿಂಪಡೆದ ವೈದ್ಯಕೀಯ ಶಿಕ್ಷಣಖಾತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಜತೆಯಲ್ಲಿಯೇ ನೀಡಬೇಕಾಯಿತು.

ಬಹುಶಃ ಇಷ್ಟೊಂದು ಖಾತೆಗಳ ಬದಲಾವಣೆ ಇತ್ತೀಚಿನ ವರ್ಷಗಳ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿ ಎನ್ನಬೇಕು. ಎಂಥ ಒತ್ತಡವಿದು. ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಿದ ಒತ್ತಡವಿದು. ಇದರ ಜತೆಗೆ ಸಾಮಾನ್ಯ ಚುನಾವಣೆಯಲ್ಲಿ ಸೋತು ಹಿಂಬಾಗಿಲಿಂದ ವಿಧಾನಪರಿಷತ್ತಿಗೆ ನಾಮಕರಣ ಸದಸದ್ಯರಾಗಿ ನೇಮಕಗೊಂಡಿದ್ದ ಎಚ್‌ ವಿಶ್ವನಾಥರ ಘಟನೆ ಬಿಜೆಪಿ ರಾಜಕೀಯದ ತಲ್ಲಣದ ಒಂದು ಭಾಗವಾಗಿ ಪರಿಣಮಿಸಿತು. ಅವರು ನೇರ ಚುನಾವಣೆಯಲ್ಲಿ ಗೆಲ್ಲದ ಕಾರಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದರೂ ನೀಡದಂಥ ಪರಿಸ್ಥಿತಿ. ಅವರಿಗೆ ಸಚಿವ ಸ್ಥಾನ ನೀಡದಂತೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತೀರ್ಪು ವಿಶ್ವನಾಥರ ವಿರುದ್ಧ ಬಂದಿತು. ಅದರ ವಿರುದ್ಧ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟದಲ್ಲಿಯೂ ವಿಶ್ವನಾಥ ತೀವ್ರ ಹಿನ್ನೆಡೆ ಅನುಭವಿಸಿ ಈ ವೈಫಲ್ಯವನ್ನು ಮುಖ್ಯಮಂತ್ರಿ ಹಾಗೂ ಇತರ ನಾಯಕರ ಮೇಲೆ ಹೊರಿಸುವ ಪ್ರಯತ್ನಮಾಡಿದ್ದಾರೆ.

ಈ ಎಲ್ಲ ಆಂತರಿಕ ತಳಮಳ ಮತ್ತು ಹಿಂಸೆಯನ್ನು ಬಿಎಸ್‌ವೈ ಮೌನದಿಂದ ಹಾಗೂ ಅತ್ಯಂತ ತಾಳ್ಮೆಯಿಂದ ನಿರ್ವಹಿಸಿದ್ದುದು ಆಶ್ಚರ್ಯದ ಸಂಗತಿ. ಘರ್ಜಿಸುವ ಸಿಂಹ ಮೆತ್ತಗಾದಂತಿದೆ. ಬಿಜೆಪಿ ಹೈಕಮಾಂಡ್‌ ಮತ್ತು ರಾಜ್ಯದ ಇತರ ಹೊಸ ನೀರಿನ ಸಲಹೆಯನ್ನೂ ಪಡೆದು ತಮ್ಮ ತಂತ್ರಗಾರಿಕೆಯ ದಾಳವನ್ನು ಅವರು ಉರುಳಿಸುತ್ತಿದ್ದಾರೆ.

ಸದ್ಯ ರಾಜಕೀಯ ತಳಮಳ ಕುಸಿದಂತೆ ಕಂಡರೂ ಬೂದಿಮುಚ್ಚಿದ ಕೆಂಡವಾಗಿದೆಯೇ ಎಂಬ ಶಂಕೆ ಅನೇಕರಲ್ಲಿದೆ. ಇಷ್ಟಾದರೂ ಕೊರೋನಾ  ನಿರ್ವಹಣೆ, ಹಾಗೂ ಇತರ ಆಡಳಿತ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದ ಬಿಎಸ್‌ವೈಯವರಿಗೆ ನೂರಕ್ಕೆ ನೂರು ಅಂಕ ದೊರೆತಿದೆ. ಅವರು ಮುಂದಿನ ಪೂರ್ಣಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದುಹೈಕಮಾಂಡ್‌ ಫರ್ಮಾನು ಹೊರಡಿಸಿದೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement