ಬೆಂಗಳೂರು:ಕೊರೊನಾ ಉಲ್ಬಣಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು,
ಈಗ ಬೆಂಗಲೂರಲ್ಲಿ ಮದುವೆ ಮನೆಗಳು ಅಥವಾ ಮದುವೆ ನಡಯುವ ಹಾಲ್ಗಳಿಗೆ ಮಾರ್ಷಲ್ಗಳು ಬರಲಿದ್ದಾರೆ ಅಲ್ಲ, ಬಂದಿದ್ದಾರೆ.
ಬೆಂಗಳೂರಿನಲ್ಲಿ ಎರಡು ಕಡೆ ಮದುವೆ ಸಮಾರಂಭಕ್ಕೆ ಮಾರ್ಷಲ್ಗಳು ಬಂದ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಒಂದು ಕ್ಲಯಾಣ ಮಂಟಪ ಹಾಗೂ ಬಾಣಸವಾಡಿ ರಸ್ತೆಯಲ್ಲಿರುವ ಒಂದು ಕಲ್ಯಾಣ ಮಂಟಪಕ್ಕೆ ಮಾರ್ಷಲ್ಗಳು ದಿಢೀರ್ ಭೇಟಿ ನೀಡಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ.
ಮೂರು ದಿನಗಳ ಹಿಂದೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ಸಹಜ ಸ್ಥಿತಿಗೆ ಮರಳುತ್ತಿರುವ ಬೆಂಗಳೂರಲ್ಲಿ ಮತ್ತೆ ಕೊರೊನಾ ಉಲ್ಬಣಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಇದೀಗ ಮದುವೆ ಮನೆಗಳಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣಿಡಲು ಮಾರ್ಷಲ್ಗಳನ್ನು ನಿಯೋಜಿಸಿದೆ.
ಇತ್ತೀಚೆಗೆ ನಗರದಲ್ಲಿ ಮದುವೆ ಸಮಾರಂಭಗಳು ಹೆಚ್ಚುತ್ತಿದ್ದು, ವಿವಾಹ ನಡೆಯುವ ಛತ್ರಗಳಿಗೆ ಮಾರ್ಷಲ್ಗಳು ಬುಧವಾರದಿಂದ (ಫೆ.೨೪) ದಿಢೀರ್ ಭೇಟಿ ನೀಡಲಿದ್ದಾರೆ.
ಮದುವೆ ಮನೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು, ಮಾಸ್ಕ್ ಧರಿಸದಿರುವುದು, ಇಲ್ಲವೆ ನಿಗದಿಗಿಂತ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂದರೆ ಸ್ಥಳದಲ್ಲೇ ದಂಡ ಹಾಕಲು ಮಾರ್ಷಲ್ಗಳಿಗೆ ಸೂಚಿಸಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜೆಪಿ ಪಾರ್ಕ್ ವಾರ್ಡ್ನಲ್ಲಿರುವ ಎಂಎಸ್ ರಾಮಯ್ಯ ಮದುವೆ ಮಂಟಪಕ್ಕೆ ಬುಧವಾರ ಮಾರ್ಷಲ್ಗಳು ದಿಢೀರ್ ಭೇಟಿ ನೀಡಿದ್ದಾರೆ. ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ರೇಣುಕಾ ಕಲ್ಯಾಣ ಮಂಟಪಕ್ಕೂ ಮಾರ್ಷಲ್ಗಳು ಭೇಟಿ ನೀಡಿ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.
ಅಪಾರ್ಟ್ಮೆಂಟ್ಗಳಲ್ಲಿ ಸಭೆ-ಸಮಾರಂಭಕ್ಕೆ ಬ್ರೇಕ್:
ಬೆಳ್ಳಂದೂರು ಎಸ್ಜೆಆರ್ ವಾಟರ್ಮಾರ್ಕ್ ವಸತಿ ಸಮುಚ್ಚಯದ 500 ಮಂದಿಗೆ ನಡೆಸಲಾದ ಕೊರೊನಾ ತಪಾಸಣೆಯಲ್ಲಿ 10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟ ಕಾರಣ ಅಪಾರ್ಟ್ಮೆಂಟ್ಗಳಲ್ಲಿ ಸಭೆ-ಸಮಾರಂಭ ನಡೆಸದಂತೆ ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪಕ್ಕದ ರಾಜ್ಯಗಳಲ್ಲಿ ಕೊರೊನಾ ಮತ್ತೆ ಹರಡುತ್ತಿರುವುದರಿಂದ ಇಲ್ಲಿಯೂ ಹರಡದಂತೆ ಮುಂಜಾಗ್ರತೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ 544 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದ್ದು, ಯಾವುದೇ ಅಪಾರ್ಟ್ಮೆಂಟ್ನಲ್ಲಿ 4ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ ಅಪಾರ್ಟ್ಮೆಂಟ್ನಲ್ಲಿರುವ ಎಲ್ಲ ನಿವಾಸಿಗಳನ್ನೂ ಕೊರೊನಾ ತಪಾಸಣೆಗೊಳಪಡಿಸಲು ನಿರ್ಧರಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ