ಅನಧಿಕೃತ ಸ್ಫೋಟಕಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಬೀದರ್ ತಾಲೂಕಿನ ಸುಲ್ತಾನಪುರ ಶಿವಾರದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜಿ.ಕೆ.ಕನ್ಸ್ಟ್ರಕ್ಷನ್ ಕಂಪೆನಿಯ ಮಾಲೀಕ, ಟಿಪ್ಪರ್ ಮಾಲಿಕ ಯಾದಗಿರಿಯ ಭೈರಾಪುರ ತಾಂಡಾದ ಶಂಕರ ಗೋವಿಂದ ಚವ್ಹಾಣ್, ವಿಜಯಪುರದ ಸಿಂದಗಿಯ ಟಿಪ್ಪರ್ ಚಾಲಕ ಮಹಾದೇವ್ ಪಾಂಡು ರಾಠೋಡ್, ಕಂಪೆನಿಯ ಮ್ಯಾನೇಜರ್ ಸೂರ್ಯಕಾಂತ ಗಣಪತಿ ಹೆಡಗಾಪುರ ವಿರುದ್ಧ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಟಿಪ್ಪರ್ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಪರಿಶೀಲಿಸಿದಾಗ ಅನಧಿಕೃತ ಸ್ಫೋಟಕಗಳು ಇರುವುದು ಖಚಿತಪಟ್ಟಿದೆ.
ಸಿಕಿಂದರಾಬಾದ್ ಐಡಿಯಲ್ ಇಂಡಸ್ಟ್ರೀಯಲ್ ಲಿಮಿಟೆಡ್ ಕಂಪೆನಿಯ ತಲಾ 25 ಕೆಜಿ ತೂಕವುಳ್ಳ 67 ಜಿಲೆಟಿನ್ ಎಕ್ಸ್ಪ್ಲೋಸಿವ್ ಬಾಕ್ಸ್ಗಳಿದ್ದು, ಪ್ರತಿ ಬಾಕ್ಸ್ನಲ್ಲಿ 9 ಟೂಬುಗಳು ಸೇರಿ ಒಟ್ಟು 603 ಟೂಬುಗಳು ಪತ್ತೆಯಾಗಿವೆ. ನಾನ್ ಎಲೆಕ್ಟ್ರಿಕ್ ಡೆನೆನಾಟರ್ (ಎನ್ಇಡಿ) 500 ಮತ್ತು ಒಂದು ಟಿಪ್ಪರ್ನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ