ಭಯವಿಲ್ಲದೆ ಕೋವಿಡ್‌ ಲಸಿಕೆ ಪಡೆಯಿರಿ: ಸಚಿವ ಸುಧಾಕರ

ಶಿರಸಿ: ಮೂರನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ವಿಶ್ವಾಸದಿಂದ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶಿರಸಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ೩ನೇ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದ ಕೋವಿಡ್ ಲಸಿಕೆ ಬೆಂಗಳೂರು, ಎರಡನೇ ಹಂತದ ಲಸಿಕೆ ಹೈದರಾಬಾದ್ ಕರ್ನಾಟಕ ಹಾಗೂ ಮೂರನೇ ಹಂತದ ಲಸಿಕೆಯನ್ನು ಶಿರಸಿಯಲ್ಲಿ ನೀಡಲಾಗಿದೆ.
60 ವರ್ಷ ಮೇಲ್ಪಟ್ಟವರು, ವೃದ್ಧರು, 45 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟಿ ಇರುವವರಿಗೆ ನೀಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು 50 ಲಕ್ಷ, ಕೋಮಾರ್ಬಿಡಿಟಿ ಹೊಂದಿರುವ 16 ಲಕ್ಷ ಜನರಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹವರಿಗೆ ಲಸಿಕೆ ನೀಡದೇ ಇದ್ದಲ್ಲಿ, ಅವರಿಗೆ ವ್ಯಾಧಿ ಹೆಚ್ಚಾಗಿ ಬಾಧಿಸುತ್ತದೆ ಎಂದರು.
ಎಲ್ಲರಿಗೂ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಏಮ್ಸ್ ಗೆ ಹೋಗಿ ಲಸಿಕೆ ಪಡೆದಿದ್ದಾರೆ. ಪ್ರಧಾನಿಗಳೇ ಲಸಿಕೆ ಪಡೆದ ಬಳಿಕ ಯಾರೂ ಅಂಜಬೇಕಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಪ್ರಕಟಿಸುವವರು ಇದ್ದಾರೆ. ಜನರು ಸರ್ಕಾರ ಪ್ರಕಟಿಸುವ ಮಾಹಿತಿಯನ್ನು ಮಾತ್ರ ನೋಡಿ ಅದನ್ನು ಪಾಲಿಸಬೇಕು. ಲಸಿಕೆ ಪಡೆದ ಬಳಿಕ ಕೋವಿಡ್ ಸೋಂಕು ಬಂದರೆ ಅಂತಹವರಿಗೆ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಶಿಸ್ತಿನ ಜೀವನ, ಉತ್ತಮ ಆಹಾರದಿಂದ ಆರೋಗ್ಯವಾಗಿರಬಹುದು ಎಂದರು.
ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಬೇಗನೆ ಬಡ್ತಿ ಮೊದಲಾದ ವಿಶೇಷ ಸೌಲಭ್ಯ ನೀಡುವ ಬಗ್ಗೆ ಚಿಂತನೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ 24 ಗಂಟೆ ಸೇವೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement