ಶೇ.8ರಷ್ಟು ಸಂಬಳ ಹೆಚ್ಚಳಕ್ಕೆ ಸರ್ಕಾರ ಬದ್ಧ, ಮುಷ್ಕರ ಕೈಬಿಡದಿದ್ರೆ ಕಠಿಣ ಕ್ರಮ :ಸಿಎಂ

ಬೆಳಗಾವಿ : ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ಈಗಾಗಲೇ ಸ್ಪಷ್ಟ ಮಾಡಿದ್ದೇವೆ. ಹಠ ಮಾಡದೇ ಮುಷ್ಕರ ಕೈ ಬಿಡಬೇಕು. ಮುಷ್ಕರ ಕೈ ಬಿಟ್ಟರೆ ಮಾತುಕತೆ ನಡೆಸಲು ರಾಜ್ಯ ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು,
ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡುತ್ತೇನೆ. ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಹಠಕ್ಕೆ ಬಿದ್ದು ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸ್ವಾರ್ಥಕ್ಕಾಗಿ ಸಿಬ್ಬಂದಿಯಿಂದ ಮುಷ್ಕರ ನಡೆಯುತ್ತಿದೆ. ಈ ಮುಷ್ಕರ ಉದ್ದೇಶಪೂರ್ವಕವಾಗಿದೆ ಎಂದೆನಿಸುತ್ತಿದೆ. ಮುಷ್ಕರ ಕೈ ಬಿಡದಿದ್ದರೆ ಒಂದೆರಡು ದಿನ ನೋಡಿಕೊಂಡು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement