ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾದ ಚಾಲಕನಿಗೆ ಕಲ್ಲಿನಿಂದ ಹೊಡೆದು ಪ್ರಾಣ ತೆಗೆದ ದುಷ್ಕರ್ಮಿಗಳು..!

ಬಾಗಲಕೋಟೆ: 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ವೇಳೆಯೂ ಕರ್ತವ್ಯಕ್ಕೆ ಹಾಜರಾಗಿ ಬಸ್‌ ಓಡಿಸುತ್ತಿದ್ದ ಸಾರಿಗೆ ಸಂಸ್ಥೆಯ ಚಾಲಕ ಕಿಡಿಗೇಡಿಗಳ ಕಲ್ಲೇಟಿಗೆ ಮೃತಪಟ್ಟಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ಚಾಲಕ ನಭಿರಸೂಲ ಅವಟಿ (59) ಶುಕ್ರವಾರ ದುಷ್ಕರ್ಮಿಗಳು ಬಸ್‌ಗೆ ಎಸೆದ ಕಲ್ಲೇಟಿಗೆ ಮೃತಪಟ್ಟಿದ್ದಾರೆ.
ಚಾಲಕ ನಭಿರಸೂಲ ಶುಕ್ರವಾರ ಬೆಳಗ್ಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿಯಿಂದ ಜಮಖಂಡಿಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಜಮಖಂಡಿ ತಾಲೂಕು ಕವಟಗಿ ಪುನರ್ವಸತಿ ಕೇಂದ್ರದ   ಬಳಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಕಲ್ಲು ಚಾಲಕನ ಕುತ್ತಿಗೆ ಭಾಗಕ್ಕೆ ಬಡಿದು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.   ತಕ್ಷಣವೇ ಚಾಲಕ ರಸೂಲ ಅವರನ್ನು ಜಮಖಂಡಿಯ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆಅವರು ಮೃತಪಟ್ಟಿದ್ದಾರೆ.
ಕಳೆದ ವರ್ಷ ಆಗಸ್ಟ 15ರಂದು ಅಪಘಾತರಹಿತ ಚಾಲನೆ ಮಾಡಿದ್ದಕ್ಕಾಗಿ ರಸೂಲ್ ಅವರಿಗೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಕೂಡ ಬಂದಿತ್ತು. 59 ವರ್ಷದ ಚಾಲಕ ರಸೂಲ್ ಅವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದು, ಇನ್ನೊಂದು ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಲಿದ್ದರು.
ಮುಷ್ಕರದ ಮಧ್ಯೆಯೂ ಘಟಕದ ಅಧಿಕಾರಿಗಳ ಮನವಿ ಮೇರೆಗೆ ಸೇವೆಗೆ ಬಂದಿದ್ದ ನಭಿರಸೂಲ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಸ್‌ಗೆ ಕಲ್ಲು ಎಸೆದವರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಸೂಚನೆ ನೀಡಿದ್ದು, ಈ ಕುರಿತು ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement