ಬೆಂಗಳೂರು: ಶನಿವಾರ ಬೆಳ್ಳಂಬೆಳಿಗ್ಗೆಯೇ ನೂರಕ್ಕೂ ಅಧಿಕ ಸಂಖ್ಯೆಯ ಪೊಲೀಸರು, ಶ್ವಾನದಳ ಜೊತೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅಲ್ಲಿನ ಖೈದಿಗಳಿಂದ ಗಾಂಜಾ, ಮೊಬೈಲ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರದಲ್ಲಿ ಸಿಸಿಬಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಜೈಲಿನಲ್ಲಿ ಮಾದಕ ಜಾಲ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಜೈಲಿನಲ್ಲಿ ಮಾದಕ ವಸ್ತುವಾದ ಗಾಂಜಾ ಮತ್ತು ಮೊಬೈಲ್ ಬಳಕೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದವು, ಅಲ್ಲದೆ, ಖೈದಿಗಳು ಮಾರಕ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ ಎಂಬ ದೂರು ಇತ್ತು. ಹೀಗಾಗಿ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಇಂದು ( ಶನಿವಾರ) ಬೆಳಗ್ಗೆ ೫ ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದಾರೆ. ಗಾಂಜಾ, ಮೊಬೈಲ್ ಸೇರಿದಂತೆ ಖೈದಿಗಳ ಬಳಿಯಿದ್ದ ಕೆಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ