ಮೂರೂರು ಪ್ರಗತಿ ವಿದ್ಯಾಲಯದಲ್ಲಿ ‘ಸಾಗರಸೇತು’ ರಾಮಕಥೆ ಮಂಗಲ-ಸಜ್ಜನರ ಸಿಟ್ಟು ಲೋಕಕ್ಕೆ ಅಪಾಯಕಾರಿ; ರಾಘವೇಶ್ವರ ಶ್ರೀ

ಕುಮಟಾ: ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮರ್ಥ್ಯ ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರ ಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, ಸಿಟ್ಟು ನಮ್ಮ ವಿವೇಕವನ್ನು ಹಾಳು ಮಾಡುತ್ತದೆ. ಸಿಟ್ಟು ಶಿವನ ಸೃಷ್ಟಿ. ಅದು ನಮ್ಮ ಕೈಯಲ್ಲಿದ್ದರೆ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಾವಿದ್ದರೆ ಅದು ದೋಷವಾಗುತ್ತದೆ. ರಾಮ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾದಾಗ ಒಂದು ಯೋಜನದಷ್ಟು ಹಿಂದೆ ಸರಿದು ಸಮುದ್ರರಾಜ ಎದ್ದು ಬಂದಾಗ, ರಾಮನ ಸಿಟ್ಟಿನ ನಡುವೆಯೂ ವಿವೇಕ, ದಯೆ, ಕಾರುಣ್ಯ ಪ್ರಕಟವಾಯಿತು ಎಂದು ಬಣ್ಣಿಸಿದರು.
ರಾಮನ ಮಹತ್ಕಾರ್ಯಕ್ಕಾಗಿ ಸಮುದ್ರ ತನ್ನ ಸಹಜ ಸ್ವಭಾವವಾದ ಅಗಾಧತೆಯನ್ನೂ ಕೈಬಿಡುವಂತಾಗುತ್ತದೆ. ಶರಣಾಗತರ ಪರಿಪಾಲನೆ ರಾಮನ ಧರ್ಮ. ಇದರಿಂದ ಗುರಿ ಇಟ್ಟ ಬ್ರಹ್ಮಾಸ್ತ್ರವನ್ನೂ ಸಮುದ್ರನ ಮೇಲೆ ಪ್ರಯೋಗಿಸದೇ ಸಮುದ್ರರಾಜನ ಮನವಿಯಂತೆ ದಸ್ವಿಗಳ ಮೇಲೆ ಪ್ರಯೋಗಿಸಿದ್ದು, ರಾಮನ ಕ್ಷಮಾಗುಣಕ್ಕೆ ಸಾಕ್ಷಿ ಎಂದು ಹೇಳಿದರು.

ಸಜ್ಜನರ ಸಮಾಧಾನ, ಕ್ಷಮೆ, ಸರಳತೆ, ಹಿತವಚನ ದುಷ್ಟರ ಮುಂದೆ ಅಸಾಮರ್ಥ್ಯ ದೌರ್ಲಬ್ಯ ಎನಿಸಿಕೊಳ್ಳುತ್ತದೆ. ಒಳ್ಳೆಯತನಕ್ಕೆ ಲೋಕ ಬೆಲೆ ಕೊಡುವುದಿಲ್ಲ. ಸಾಮ, ದಾನ, ಬೇಧ, ದಂಡದಲ್ಲಿ ದಂಡವೇ ಒಳ್ಳೆಯದು ಎಂದು ಕೆಲವೊಮ್ಮೆ ದೇವರಿಗೂ ಅನಿಸುತ್ತದೆ ಎಂದು ಸಮುದ್ರರಾಜನ ಮೇಲೆ ರಾಮನಿಗೆ ಕೋಪ ಪ್ರಕಟವಾದ ಸಂದರ್ಭವನ್ನು ಉದಾಹರಿಸಿದರು.
ಸಾಗರದ ಉಪಾಸನೆ ಮಾಡಿ ಸಾಮದಿಂದ ಲಂಕೆಗೆ ದಾರಿ ಕೊಡುವಂತೆ ಮನವಿ ಮಾಡೋಣ ಎನ್ನುವುದು ವಿಭೀಷಣನ ಸಲಹೆ. ಅದರಂತೆ ದರ್ಬೆಯಲ್ಲಿ ಪವಡಿಸಿದ ಪ್ರಭು ರಾಮಚಂದ್ರ ಉಪಾಸನೆ ಮಾಡುವ ಜಾಗೃತ ಸ್ಥಿತಿಯಲ್ಲಿದ್ದಾನೆ. ಸಾಗರ ತರಣ ಅಥವಾ ಇಲ್ಲಿಯೇ ಮರಣ ಎಂಬ ದೃಢಸಂಕಲ್ಪದಿಂದ ಶ್ರೀರಾಮ ಪವಡಿಸಿದ್ದ. ಒಂದೇ ಗುರಿ, ಒಂದೇ ಸಂಕಲ್ಪ ಎನ್ನುವುದು ರಾಮನ ವಿಶೇಷ. ಸಂಪೂರ್ಣ ಮನಸ್ಸು ಶರೀರವನ್ನು ಸಂಯಮದಿಂದ ಇರಿಸಿ ಪವಡಿಸಿದ. ಮೂರು ರಾತ್ರಿ ಹೀಗೆಯೇ ಕಳೆಯಿತು. ಆದರೂ ಸಮುದ್ರ ಮಂದ ಬುದ್ಧಿಯಿಂದಾಗಿ ದರ್ಶನ ನೀಡಲಿಲ್ಲ ಎಂದು ಕಥಾ ಸಾರ ವಿವರಿಸಿದರು.
ಆತ್ಮಪ್ರಶಂಸೆ ಮಾಡಿಕೊಳ್ಳುವುದು ಲೋಕದಲ್ಲಿ ಕೆಲವರ ಚಪಲತೆ. ದುಷ್ಟರು, ದೃಷ್ಟರಿಗೆ ಲೋಕ ಮರ್ಯಾದೆ ನೀಡುತ್ತದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಸಾಮ ಮಾರ್ಗದಲ್ಲಿ ಕೀರ್ತಿ, ಯಶಸ್ಸು, ಜಯ ಇಲ್ಲ ಎಂದು ಲಕ್ಷ್ಮಣನಿಗೆ ಹೇಳುತ್ತಾ, ತನ್ನ ಬಾಹುಬಲದಿಂದ ಸಮುದ್ರವನ್ನೇ ಒಣಗಿಸುತ್ತೇನೆ ಎಂಬ ನಿರ್ಧಾರಕ್ಕೆ ಬರುತ್ತಾನೆ. ಅಕ್ಷೋಭ್ಯ ಎನಿಸಿದ ಸಮುದ್ರ ಇಂದು ಕ್ಷೋಭೆಗೆ ಒಳಗಾಗುತ್ತದೆ ಎಂದು ಹೇಳಿ ಕೋದಂಡವನ್ನು ಹಿಡಿದು ರಾಮ ಯಮರೂಪ ತಳೆದು ಪ್ರಳಯ ಕಾಲದ ಅಗ್ನಿಯಂತೆ ಕಂಗೊಳಿಸಿದ. ಕ್ರೋಧದಿಂದ ಜಗತ್ತನ್ನೇ ನಡುಗಿಸಿ ಉಗ್ರ ಬಾಣಗಳನ್ನು ಪ್ರಯೋಗಿಸುತ್ತಾನೆ. ಕೊನೆಗೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗುತ್ತಾನೆ ಎಂದು ಹೇಳಿದರು.
ಲೋಕದಲ್ಲಿ ಏಕೈಕ ಸಾಗರಸೇತು ನಿರ್ಮಿಸಿದ ಶ್ರೀರಾಮ ಸೇತು ನಿರ್ಮಾಣ ಚತುರ. ಪ್ರಭು ರಾಮಚಂದ್ರ ನಮ್ಮ ನಿಮ್ಮ ನಡುವೆ ಧರ್ಮಸೇತುವೆ ನಿರ್ಮಿಸುವಂತಾಗಲಿ ಎಂದು ಆಶಿಸಿದರು.

ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತ ರಚನೆಕಾರರಾದ ಕಥಾಸಿದ್ಧತೆಯ ಸತ್ಯನಾರಾಯಣ ಶರ್ಮಾ ಮತ್ತು ಸುರೇಶ್ ಅಡಗೋಡಿ ಉಪಸ್ಥಿತರಿದ್ದರು. ಗಾಯನದಲ್ಲಿ ಶ್ರೀಪಾದ ಭಟ್ ಕಡತೋಕ, ಶಂಕರಿಮೂರ್ತಿ ಬಾಳಿಲ, ರಘುನಂದನ ಬೇರ್ಕಡವು, ಸಾಕೇತ್ ಶರ್ಮಾ, ದೀಪಿಕಾ ಭಟ್, ಪೂಜಾ ಭಟ್, ಮೃದಂಗದಲ್ಲಿ ಗಣೇಶ್ ಭಾಗ್ವತ್ ಗುಂಡ್ಕಲ್, ಸಿತಾರದಲ್ಲಿ ಸುಬ್ರಹ್ಮಣ್ಯ ಹೆಗಡೆ, ಕೊಳಲಿನಲ್ಲಿ ನಿರಂಜನ ಹೆಗಡೆ, ಹಾರ್ಮೋನಿಯಂನಲ್ಲಿ ಪ್ರಜ್ಞಾಲೀಲಾ, ಚಿತ್ರಕಲೆಯಲ್ಲಿ ನೀರ್ನಳ್ಳಿ ಗಣಪತಿ, ಶ್ರೀಲಕ್ಷ್ಮಿ ಸಹಕರಿಸಿದರು. ರೂಪಕವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶಿಸಿದರು.
ರಾಮಕಥಾ ಸಮಿತಿ ಕಾರ್ಯಾಧ್ಯಕ್ಷ ಆರ್.ಜಿ.ಭಟ್, ಸಂಚಾಲಕ ಸುಬ್ರಾಯ ವಿ.ಭಟ್ ಕೊಣಾರೆ, ಪ್ರಧಾನ ಕಾರ್ಯದರ್ಶಿ ಎಸ್.ವಿ.ಹೆಗಡೆ, ಕಾರ್ಯದರ್ಶಿ ಟಿ.ಎಸ್.ಭಟ್, ಕುಮಟಾ ಹವ್ಯಕ ಮಂಡಲ ಅಧ್ಯಕ್ಷ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್.ಜಿ.ಹೆಗಡೆ ಮುಡಾರೆ, ಮುರೂರು-ಕಲ್ಲಬ್ಬೆ ವಲಯ ಅಧ್ಯಕ್ಷ ಎಲ್.ಆರ್.ಹೆಗಡೆ ಮತ್ತು ರಾಮಕಥಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement