ಮೈಸೂರು : ಅಪರಿಚಿತ ಮಹಿಳೆ ಬಸ್ ನಿಲ್ದಾಣದಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾಗಿದ್ದಾಳೆ. ನಾನು ದಾರಿ ಕಾಣದೆ ಮಗುವನ್ನು ಮೈಸೂರಿಗೆ ತಂದಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿ ಪೊಲೀಸರಿಗೆ ಮಗುವನ್ನು ಒಪ್ಪಿಸಿದ್ದ ಯುವಕ ನಿಜ ಬಣ್ಣ ಈಗ ಬಯಲಾಗಿದೆ..!
ಹೀಗೆ ಹೇಳಿ ಎಚ್.ಡಿ.ಕೋಟೆಯ ಯುವಕ ರಘು ಎಂಬಾತ ಎಲ್ಲರನ್ನೂ ನಂಬಿಸಿದ್ದಲ್ಲದೆ ಅನಾಥ ಮಗುವಂದೆ ಬಿಂಬಿಸಿ ನಗರದ ಲಷ್ಕರ್ ಪೊಲೀಸ್ ಠಾಣೆಗೆ ನೀಡಿದ್ದ. ಮಗುವನ್ನು ಆರೈಕೆ ಮಾಡಿದ ಸಿಬ್ಬಂದಿ ನಂತರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಇದಕ್ಕೆ ಈಗ ದೊಡ್ಡ ತಿರುವುದು ಸಿಕ್ಕಿದ್ದು ಈ ಯುವಕ ಹೇಳಿದ್ದು ಕಟ್ಟುಕತೆ ಎಂಬುದು ಬೆಳಕಿಗೆ ಬಂದಿದೆ. ಪ್ರಕರಣ ಭೇದಿಸಿದ ಮೈಸೂರಿನ ಲಷ್ಕರ್ ಠಾಣಾ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಮದ್ವೆ ಆಗಲು ನಿರ್ಧರಿಸಿದ್ದ ಇಬ್ಬರಿಗೂ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ರಘು ಪೊಲೀಸರ ಮುಂದೆ ಕಥೆ ಕಟ್ಟಿದ್ದ ಎಂಬುದು ಬಯಲಾಗಿದೆ.
ಘಟನೆ ಹಿನ್ನೆಲೆ: ರಾಯಚೂರಿನ ವಿವಾಹಿತ ಮಹಿಳೆಯನ್ನ ಎಚ್. ಡಿ ಕೋಟೆಯ ಯುವಕ ರಘು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ. ಈ ಮಹಿಳೆಗೆ ಗಂಡು ಮಗು ಇತ್ತು ಹಾಗೂ ಪತಿಯಿಂದಲೂ ದೂರವಾಗಿದ್ದಳು. ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ಒಡನಾಟ ಹೆಚ್ಚಾಗಿತ್ತು. ಇವರಿಬ್ಬರ ಪ್ರೀತಿಗೆ ಮಗು ಅಡ್ಡವಾಗಿತ್ತು. ಮಗುವನ್ನ ದೂರ ಮಾಡಿಕೊಳ್ಳಲು ಪ್ಲಾನ್ ಮಾಡಿದ ಇವರು ಇದಕ್ಕೆ ಯೋಜನೆ ರೂಪಿಸಿದರು. ಯೋಜನೆಯಂತೆ ಯುವಕ ರಘು ತನ್ನ ಪ್ರೇಯಸಿಯ ಮಗುವನ್ನೇ ಅಪರಿಚಿತ ಮಹಿಳೆಯ ಮಗು ಎಂದು ಬಿಂಬಿಸಿದ್ದಾನೆ.
ನಾನು ಕೆಲಸದ ನಿಮಿತ್ತ ಮೇ 8ರಂದು ರಾಯಚೂರಿಗೆ ತೆರಳಿದ್ದೆ. ಮೈಸೂರಿಗೆ ಹಿಂದಿರುಗಲು ಅಂದು ಮಧ್ಯಾಹ್ನ ಬಸ್ ನಿಲ್ದಾಣದಲ್ಲಿದ್ದಾಗ ಮಹಿಳೆಯೊಬ್ಬಳು ನನ್ನ ಬಳಿ ಬಂದು ಶೌಚಗೃಹಕ್ಕೆ ಹೋಗಬೇಕು, 5 ನಿಮಿಷ ಮಗುವನ್ನು ಕೂರಿಸಿಕೊಳ್ಳಿ ವಾಪಸ್ ಬರುವೆ ಎಂದು ಹೇಳಿ ಮಗುವನ್ನು ಕೊಟ್ಟು ಹೋದಳು. ಆದರೆ ಎಷ್ಟೊತ್ತಾದರೂ ವಾಪಸ್ ಬರಲಿಲ್ಲ. ಬಸ್ ನಿಲ್ದಾಣದಲ್ಲಿ ಹುಡುಕಾಡಿದರೂ ಪತ್ತೆಯಾಗಲ್ಲ. ಬಸ್ ಹೊರಡಲು ಸಿದ್ಧವಾಗಿದ್ದರಿಂದ ಮಗುವನ್ನು ನನ್ನ ಜತೆಯೇ ಮೈಸೂರಿಗೆ ಕರೆತಂದೆ ಎಂದು ಹೇಳಿ ಲಷ್ಕರ್ ಪೊಲೀಸ್ ಠಾಣೆಗೆ ಹೋಗಿ ಒಪ್ಪಿಸಿದ್ದ. ಪೊಲೀಸರು ಮಗುವನ್ನು ರಕ್ಷಿಸಿ ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದರು. ನಂತರ ಈ ಪ್ರಕರಣದ ಬೆನ್ನುಬಿದ್ದರ ಪೊಲೀಸರು ಮಗುವಿನ ತಾಯಿಯನ್ನು ಪತ್ತೆ ಹಚ್ಚಿದ ನಂತರ ಸತ್ಯ ಬಯಲಾಗಿದೆ. ಇಬ್ಬರ ಮೇಲೆ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ