ದತ್ತಪೀಠದಲ್ಲಿ ಪೂಜೆಗೆ ಹಿಂದೂ-ಮುಸ್ಲಿಮರಿಗೆ ಅವಕಾಶ: ಸಂಪುಟ ಉಪಸಮಿತಿ ವರದಿ ಶಿಫಾರಸಿಗೆ ಸಂಪುಟ ಸಭೆ ಒಪ್ಪಿಗೆ

ಬೆಂಗಳೂರು : ದತ್ತಪೀಠದಲ್ಲಿ‌ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ನಡೆಯುತ್ತಿದ್ದ ವಿವಾದಕ್ಕೆ ಸರ್ಕಾರ ತೆರೆ ಎಳೆಯಲು ಮುಂದಾಗಿದೆ.
ದತ್ತ ಪೀಠದಲ್ಲಿ ಪೂಜೆ ನೆರವೇರಿಸುವ ಸಂಬಂಧ ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ವ್ಯವಸ್ಥಾಪನಾ ಸಮಿತಿಗೆ ಅರ್ಚಕ ಹಾಗೂ ಮುಜಾವರ ನೇಮಕಾತಿಗೆ ಸೇರಿದಂತೆ ವರದಿಯಲ್ಲಿನ ಶಿಫಾರಸುಗಳನ್ನು ಹೈಕೋರ್ಟ್​ಗೆ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ದಶಕಗಳಿಂದ ಇದ್ದ ಹಿಂದೂ ಸಮುದಾಯದ  ಅರ್ಚಕರ ನೇಮಕಾತಿ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈಗ ಈ ಶಿಪಾರಸುಗಳನ್ನು ಹೈಕೋರ್ಟಿಗೆ ಸಲ್ಲಿಸಲಾಗುತ್ತದೆ.
ಬಾಬಾಬುಡನ್‌ಗಿರಿ ಇನಾಂ ದತ್ತಾತ್ರೇಯ ಪೀಠದಲ್ಲಿ ಹಿಂದೂ ಸಂಪ್ರದಾಯದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಮುಸ್ಲಿಂ ಸಮುದಾಯದ ಮುಜಾವರ್ ನೇಮಿಸಿ ರಾಜ್ಯ ಸರ್ಕಾರ 2018 ರ ಮಾರ್ಚ್‌ 19ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2021ರ ಫೆ 28ರಂದು ಸರ್ಕಾರದ ಆದೇಶವನ್ನು ರದ್ದುಪಡಿಸಿ ಆದೇಶಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ಕಾನೂನು ರೀತಿ ಹೊಸದಾಗಿ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಷಾ ಖಾದ್ರಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡಲು ರಾಜ್ಯ ಸರ್ಕಾರ ಮೂವರು ಸಚಿವರನ್ನೊಳಗೊಂಡ ಸಚಿವ ಸಂಪುಟದ ಉಪಸಮಿತಿ ರಚಿಸಿತ್ತು. ಈ ಉಪ ಸಮಿತಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಗೃಹ ಹಾಗೂ ಮುಜರಾಯಿ ಇಲಾಖೆ ಸಚಿವರಿದ್ದರು. ಸಮಿತಿ ಈಗಾಗಲೇ ಸ್ಥಳಕ್ಕೆ ಭೇಟಿ ಕೊಟ್ಟು ಎರಡೂ ಪಕ್ಷದವರೊಂದಿಗೆ ಸಮಾಲೋಚನೆ ನಡೆಸಿದೆ. ಎರಡೂ ಪಕ್ಷಗಾರರ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ 6 ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕೋರ್ಟ್​ಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ 6 ವಾರ ಮುಂದೂಡಲಾಗಿತ್ತು.
ಉಪಸಮಿತಿ ವರದಿಯು ಹಲವು ಶಿಫಾರಸುಗಳನ್ನು ಮಾಡಿದೆ. ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳ ದಿನಚರಿ ರೂಪಿಸಲು ವ್ಯವಸ್ಥಾಪನಾ ಸಮಿತಿಗೆ ಜವಾಬ್ದಾರಿ- ದರ್ಗಾ ಪೂಜೆ ಹಾಗೂ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಎರಡು ಸಮುದಾಯಕ್ಕೆ ಅವಕಾಶ- ವ್ಯವಸ್ಥಾಪನಾ ಸಮಿತಿಗೆ ಅರ್ಚಕ ಹಾಗೂ ಮುಜಾವರ ನೇಮಕಾತಿ ಜವಾಬ್ದಾರಿ- ವ್ಯವಸ್ಥಾಪನಾ ಸಮಿತಿಯಿಂದ ಪೂಜಾ ಪುನಸ್ಕಾರಗಳು ಹಾಗೂ ಉರುಸ್‌ ಮೇಲ್ವಿಚಾರಣೆ- ಪೂಜೆ ಮಾಡಲು ಅರ್ಚಕರು ಹಾಗೂ ಮುಜಾವರರಿಗೆ ಅವಕಾಶ ಇವೇ ಮೊದಲಾದವುಗಳನ್ನು ಶಿಫಾರಸು ಮಾಡಿದೆ.

ದತ್ತಪೀಠ: ಸಂಪುಟ ಸಭೆ ತೀರ್ಮಾನಕ್ಕೆ ಸಿ.ಟಿ.ರವಿ ಸ್ವಾಗತ
ಸಂಪುಟ ಉಪಸಮಿತಿ ವರದಿಯನ್ನು ಸರಕಾರ ಒಪ್ಪಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವಾಗತಿಸಿದ್ದಾರೆ. ಹಾಗೂ ಇದು 4 ದಶಕಗಳ ಸುದೀರ್ಘ ಹೋರಾಟಕ್ಕೆ ಸಿಕ್ಕಿದ ಗೆಲುವು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಲಾಗಿತ್ತು. ಈಗ ಉಪಸಮಿತಿ ವರದಿಯ ಕುರಿತು ಹೈಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಲು ಸಚಿವ ಸಂಪುಟ ಸಭೆಯು ತೀರ್ಮಾನಿಸಿದ್ದು ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement