ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕದ ಒತ್ತಡಕ್ಕೆ ಮಣಿಯದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ.
ಖಾನ್ ಅವರು ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಮುನ್ನಾದಿನದಂದು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ, ರಷ್ಯಾದಿಂದ ಭಾರತ ತೈಲ ಖರೀದಿ ಬಗ್ಗೆ ಪಾಶ್ಚಿಮಾತ್ಯ ಟೀಕೆಗಳಿಗೆ ಡಾ. ಎಸ್. ಜೈಶಂಕರ್ ಅವರ ಕಟುವಾದ ಪ್ರತಿಕ್ರಿಯೆಯ ಕ್ಲಿಪ್ ಅನ್ನು ಸಮಾವೇಶದಲ್ಲೇ ಪ್ಲೇ ಮಾಡಿದರು. ಸ್ಲೋವಾಕಿಯಾದಲ್ಲಿ ಗ್ಲೋಬ್ಸೆಕ್ 2022 ಬ್ರಾಟಿಸ್ಲಾವಾ ಫೋರಮ್ನಲ್ಲಿ ವೀಡಿಯೊ ಕಳೆದ ಜೂನ್ನಲ್ಲಿ ಜೈಶಂಕರ್ ನೀಡಿದ ಹೇಳಿಕೆಗಳನ್ನು ಅವರು ಪ್ಲೇ ಮಾಡಿದರು.
ರಷ್ಯಾದಿಂದ ಭಾರತದ ತೈಲ ಆಮದುಗಳು ಉಕ್ರೇನ್ ಯುದ್ಧಕ್ಕೆ ಹಣ ನೀಡುತ್ತಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, “ಭಾರತವು ರಷ್ಯಾದ ತೈಲವನ್ನು ಖರೀದಿಸುವುದು ಯುದ್ಧಕ್ಕೆ ಹಣ ನೀಡಿದಂತಾಗುತ್ತದೆ ಎಂದಾದರೆ, ಯುರೋಪ್ ರಷ್ಯಾದ ಅನಿಲವನ್ನು ಖರೀದಿಸುತ್ತಿರುವುದು ಯುದ್ಧಕ್ಕೆ ಧನ ಸಹಾಯ ನೀಡಿದಂತಾಗುವುದಿಲ್ಲವೇ? ಯುದ್ಧಕ್ಕೆ ಧನಸಹಾಯ ನೀಡುವುದು ಭಾರತೀಯ ಹಣ ಮಾತ್ರವೇ ಹೊರತು ಯುರೋಪಿನದ್ದು ಹಣವಲ್ಲವೇ ? ಸ್ವಲ್ಪ ಸಮಚಿತ್ತದಿಂದ ಇರೋಣ ಎಂದು ಜೈಶಂಕರ ಹೇಳಿದ್ದರು.
ರಷ್ಯಾದಿಂದ ಭಾರತದ ತೈಲ ಆಮದುಗಳನ್ನು ಸಮರ್ಥಿಸುವಾಗ ಸಚಿವ ಜೈಶಂಕರ ಅವರು ಈ ಹೇಳಿಕೆಗಳನ್ನು ನೀಡಿದರು ಮತ್ತು ಉಕ್ರೇನ್ ಸಂಘರ್ಷವು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಒತ್ತಿ ಹೇಳಿದರು.
ಸ್ವತಂತ್ರ ರಾಷ್ಟ್ರದ ನಿಜವಾದ ಉದಾಹರಣೆ: ಭಾರತದ ಬಗ್ಗೆ ಇಮ್ರಾನ್ ಖಾನ್
ಲಾಹೋರ್ನಲ್ಲಿ ನಡೆದ ಬೃಹತ್ ಸಮಾವೇಶದ ಮೊದಲು ಕ್ಲಿಪ್ ಪ್ಲೇ ಮಾಡಿದ ಇಮ್ರಾನ್ ಖಾನ್, “ನಾನು ನಿಮಗೆ ಎರಡು ದೇಶಗಳ ವಿದೇಶಾಂಗ ಮಂತ್ರಿಗಳನ್ನು ತೋರಿಸಲು ಬಯಸುತ್ತೇನೆ. ಮೊದಲು, ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕದಿಂದ ಆದೇಶ ಪಡೆದ ಭಾರತೀಯ ವಿದೇಶಾಂಗ ಸಚಿವರು. ಭಾರತವು ಅಮೆರಿಕದ ಕಾರ್ಯತಂತ್ರದ ಮಿತ್ರ. ಆದರೆ ನಾವು ಅಮೆರಿಕದೊಂದಿಗೆ ಯಾವುದೇ ಮೈತ್ರಿ ಹೊಂದಿಲ್ಲ. ಆದರೆ ಅವರು (ಭಾರತ) ಅವರು ಎಲ್ಲಿ ಬೇಕಾದರೂ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳುವುದನ್ನು ಅಮೆರಿಕ ತಡೆಯಲಿಲ್ಲ. ಇದು ಸ್ವತಂತ್ರ ರಾಷ್ಟ್ರದ ಉದಾಹರಣೆಯಾಗಿದೆ ಎಂದು ಇಮ್ರಾನ್ ಖಾನ್ ಸಮಾವೇಶದಲ್ಲಿ ಹೇಳಿದರು.
ಹಾಲಿ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ ಮಾಜಿ ಪ್ರಧಾನಿ, “ನಮಗೆ ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಲು ಧೈರ್ಯವಿಲ್ಲ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಆಕಾಶವನ್ನು ಮುಟ್ಟುತ್ತಿವೆ” ಎಂದು ಸರ್ಕಾರವನ್ನು ಟೀಕಿಸಿದರು.
ಇಮ್ರಾನ್ ಖಾನ್ ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿರುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ, ಅಮೆರಿಕದ ನೇತೃತ್ವದ ಕ್ವಾಡ್ ಮೈತ್ರಿಕೂಟದ ಪ್ರಮುಖ ಸದಸ್ಯನಾಗಿದ್ದರೂ ಸಹ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಿದ್ದಕ್ಕಾಗಿ ಖಾನ್ ಭಾರತವನ್ನು ಹೊಗಳಿದ್ದರು.
“QUAD ನ ಭಾಗವಾಗಿದ್ದರೂ, ಭಾರತವು ಅಮೆರಿಕದ ಒತ್ತಡವನ್ನು ಸಮರ್ಥವಾಗಿ ಎದುರಿಸಿತು ಮತ್ತು ಜನಸಾಮಾನ್ಯರಿಗೆ ಪರಿಹಾರವನ್ನು ಒದಗಿಸಲು ರಿಯಾಯಿತಿ ದರದಲ್ಲಿ ರಷ್ಯಾದ ತೈಲವನ್ನು ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ನಮ್ಮ ಸರ್ಕಾರವು ಅದನ್ನು ಸಾಧಿಸಲು ಕೆಲಸ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಟ್ವೀಟ್ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ