ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸೋಮವಾರ ಶಿಕ್ಷಕರ ನೇಮಕಾತಿ ವಿಳಂಬವನ್ನು ವಿರೋಧಿಸಿ ನೂರಾರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪ್ರತಿಭಟನೆಯ ವೀಡಿಯೊ ವೈರಲ್ ಆಗಿದ್ದು, ಅಧಿಕಾರಿಯೊಬ್ಬರು ನೆಲದ ಮೇಲೆ ಮಲಗಿದ ಪ್ರತಿಭಟನಾಕಾರನನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ.
ಪಾಟ್ನಾದ ದಕ್ ಬಾಂಗ್ಲಾ ಚೌರಾದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ವೀಡಿಯೊದಲ್ಲಿ, ಪಾಟ್ನಾದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಕೆ. ಸಿಂಗ್ ಎಂದು ಗುರುತಿಸಲಾದ ಅಧಿಕಾರಿಯು ನೆಲದ ಮೇಲೆ ಮಲಗಿರುವ ಮತ್ತು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿದ್ದ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ನಂತರ ಧ್ವಜವನ್ನು ಪೊಲೀಸರು ಕಿತ್ತುಕೊಂಡಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಜಮಾಯಿಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು. ಸಿಟಿಇಟಿ, ಬಿಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
2019ರಿಂದ ನೇಮಕಾತಿಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಭಟನಾನಿರತ ಅಭ್ಯರ್ಥಿಗಳು ತಿಳಿಸಿದರು. ಕಳೆದ 3 ವರ್ಷಗಳಿಂದ ಸರ್ಕಾರದಿಂದ ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸರ್ಕಾರ ರಚನೆಗೂ ಮುನ್ನ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮೊದಲ ಸಂಪುಟದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳುತ್ತಿದ್ದರು ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದರು. ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ ಎಂದರು.
ಏತನ್ಮಧ್ಯೆ, ಘಟನೆಯ ಬಗ್ಗೆ ಬಿಜೆಪಿ ಹೊಸದಾಗಿ ರಚನೆಯಾದ ಜೆಡಿಯು-ಆರ್ಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 20 ಲಕ್ಷ ಉದ್ಯೋಗ ಕೊಡುವುದಾಗಿ ಮಾತನಾಡಿದ ನಿತೀಶ್ ಕುಮಾರ್ ಪೊಲೀಸರು ಪಾಟ್ನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಅಭ್ಯರ್ಥಿಯನ್ನು ಅಮಾನವೀಯವಾಗಿ ಥಳಿಸಿದ್ದಾರೆ. ಬಿಹಾರ ಸರ್ಕಾರ ಮತ್ತು ಅಧಿಕಾರಿಗಳು ಶಿಕ್ಷಕನ ಮುಖಕ್ಕೆ ರಕ್ತ ಹರಿಸಿದ್ದಲ್ಲದೇ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇದು ಅಸಲಿ ಮುಖ. ಜೆಡಿಯು-ಆರ್ಜೆಡಿ ಸರ್ಕಾರ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ