ಜಾಗತಿಕ ಶೀತಲ ಸಮರ ಕೊನೆಗೊಳಿಸಿದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

ಮಾಸ್ಕೋ: ಜಾಗತಿಕ ಶೀತಲ ಸಮರ ಕೊನೆಗೊಳಿಸಿ ಇತಿಹಾಸದ ದಿಕ್ಕನ್ನು ಬದಲಿಸಿದ ಮತ್ತು 20 ನೇ ಶತಮಾನದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಿಖಾಯಿಲ್ ಗೋರ್ಬಚೇವ್ 91 ನೇ ವಯಸ್ಸಿನಲ್ಲಿ ಮಾಸ್ಕೋದಲ್ಲಿ ನಿಧನರಾದರು.
ಅವರ ಮರಣವನ್ನು ರಷ್ಯಾದ ಸುದ್ದಿ ಸಂಸ್ಥೆಗಳು ಮಂಗಳವಾರ ಘೋಷಿಸಿದವು, ಗೋರ್ಬಚೇವ್ ಮಾಸ್ಕೋದ ಕೇಂದ್ರ ಆಸ್ಪತ್ರೆಯಲ್ಲಿ “ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದ ನಂತರ” ನಿಧನರಾದರು ಎಂದು ಹೇಳಿದ್ದಾರೆ.
ಗೋರ್ಬಚೇವ್, 1985 ಮತ್ತು 1991 ರ ನಡುವೆ ಹಿಂದಿನ ಸೋವಿಯತ್‌ ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು, ಅವರು ಶೀತಲ ಸಮರದ ಸೋವಿಯತ್‌ ಒಕ್ಕೂಟದ ಕೊನೆಯ ನಾಯಕರಾಗಿದ್ದರು.
2ನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳೊಂದಿಗೆ ರಷ್ಯಾ ಅಂತರ ಕಾಪಾಡಿಕೊಂಡಿತ್ತು. ಕಬ್ಬಿಣದ ಪರದೆ (Iron Curtain) ಎಂದೇ ಸೂಚ್ಯವಾಗಿ ಹೇಳಲಾಗುತ್ತಿದ್ದ ಉದ್ವಿಗ್ನತೆ ಮತ್ತು ಮುಸುಕಿನ ಗುದ್ದಾಟವು ಎರಡು ಪ್ರಬಲ ಶಕ್ತಿಗಳ ನಡುವೆ ಸುದೀರ್ಘ ಕಾಲದವರೆಗೆ ಅಸ್ತಿತ್ವದಲ್ಲಿತ್ತು. ಶಸ್ತ್ರಾಸ್ತ್ರ ಒಪ್ಪಂದಗಳ ಮೂಲಕ ಉದ್ವಿಗ್ನತೆ ಶಮನಗೊಳಿಸಲು ಗೋರ್​ಬಚೆವ್ ಯತ್ನಿಸಿದರು. ಒಡೆದು ತುಂಡಾಗಿದ್ದ ಜರ್ಮನಿಯ ಏಕೀಕರಣಕ್ಕೂ ಪರೋಕ್ಷವಾಗಿ ಅವರೇ ಕಾರಣರಾದರು.

1989ರಲ್ಲಿ ಸೋವಿಯತ್ ದೇಶಗಳಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಆರಂಭವಾದಾಗ ಗೋರ್ಬಚೆವ್ ಸೇನಾ ಬಲ ಬಳಸಿ ಹತ್ತಿಕ್ಕಲಿಲ್ಲ. 1 ಈ ಪ್ರತಿಭಟನೆಗಳು ಕ್ರಮೇಣ ಇತರ ಪ್ರಾಂತ್ಯಗಳಿಗೂ ವ್ಯಾಪಿಸಿತು. ಎರಡೇ ವರ್ಷಗಳಲ್ಲಿ ಅಂದರೆ 1991ರಲ್ಲಿ ಸುಮಾರು 15 ಪ್ರಾಂತ್ಯಗಳು ಸ್ವತಂತ್ರ ಗಣರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದವು. ಸೋವಿಯತ್ ಒಕ್ಕೂಟವು ಕುಸಿಯುವುದನ್ನು ತಡೆಯಲು ಗೋರ್​ಬಚೆವ್ ಹತಾಶ ಪ್ರಯತ್ನ ಮಾಡಿದರು. ಆದರೆ ಈ ಪ್ರಯತ್ನವು ಯಾವುದೇ ಫಲ ಕೊಡಲಿಲ್ಲ.
ತಮ್ಮ 54ನೇ ವರ್ಷದಲ್ಲಿ, ಅಂದರೆ 1985ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷ ಪ್ರಧಾನ ಕಾರ್ಯದರ್ಶಿಯಾದ ಗೋರ್​ಬಚೆವ್ ಸೋವಿಯತ್ ಒಕ್ಕೂಟದ ವಿವಿಧ ಪ್ರಾಂತ್ಯಗಳಿಗೆ ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡುವ ಕ್ರಮಗಳನ್ನು ಪ್ರಕಟಿಸಿದರು. ಆದರೆ ಈ ಸುಧಾರಣಾ ಕ್ರಮಗಳು ನಂತರ ಅವರ ನಿಯಂತ್ರಣ ಮೀರಿ ಹೋದವು. ‘ಗ್ಲಾಸ್​ನೊಸ್ಟ್​’ ಎನ್ನುವ ಮುಕ್ತ ಅಭಿವ್ಯಕ್ತಿಯ ಹೊಸ ನೀತಿ ಆರಂಭಿಸಿದ ಅವರು ಇಂಥದ್ದೊಂದು ವ್ಯವಸ್ಥೆ ರಷ್ಯಾದಲ್ಲಿ ಜಾರಿಯಾಗಬಹುದು ಎಂದು ಊಹಿಸಲೂ ಸಾಧ್ಯವಿರದ ಕಾಲದಲ್ಲಿ ಅದನ್ನು ಜಾರಿಗೆ ತಂದರು. ಪಕ್ಷ ಮತ್ತು ಸರ್ಕಾರವನ್ನು ಜನರು ಮುಕ್ತವಾಗಿ ಟೀಕಿಸಲು ಈ ನೀತಿ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದು ಜನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುವಂತೆ ಮಾಡಿತು. ಲ್ಯಾಟ್​ವಿಯಾ, ಲಿಥುನಿಯಾ, ಈಸ್ಟೊನಿಯಾ ಮತ್ತಿತರರ ಬಾಲ್ಕನ್ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯದ ಬೇಡಿಕೆ ಹೆಚ್ಚಾಯಿತು.ಸೋವಿಯತ್‌ ಒಕ್ಕೂಟ ಒಡೆದು ಅನೇಕ ಸ್ವತಂತ್ರ ದೇಶಗಳಾಗಿ ಅಸ್ತಿತ್ವಕ್ಕೆ ಬಂದವು.

1990 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅವರು ತಮ್ಮ ಕ್ರಮಗಳಿಂದಾಗಿ ಜಾಗತಿಕವಾಗಿ ಮನ್ನಣೆಗಳಿಸಿದರೂ ತಮ್ಮ ದೇಶದ ಪ್ರಾಬಲ್ಯ ಅಂತ್ಯಗೊಂಡಿದಕ್ಕೆ ಅನೇಕ ರಷ್ಯನ್ನರ ಅಪಹಾಸ್ಯಕ್ಕೆ ಒಳಗಾಗಬೇಕಾಯಿತು.
ರಷ್ಯನ್ನರ ಜೀವನಮಟ್ಟದ ಕುಸಿಯಲು ಸಹ ಗೋರ್​ಬಚೆವ್ ತೆಗೆದುಕೊಂಡ ಸುಧಾರಣೆಯ ಕ್ರಮಗಳು ಕಾರಣ ಎಂದು ಹಲವು ರಷ್ಯಾದ ನಾಗರಿಕರು ಇಂದಿಗೂ ಪ್ರಜಾಪ್ರಭುತ್ವಕ್ಕಾಗಿ ಅವರು ನೀಡಿದ ಕೊಡುಗೆ ದೊಡ್ಡದು ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಗೊರ್ಬಚೆವ್ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಕಳೆದ ಜೂನ್ 30ರಂದು ಉದಾರವಾದಿ ರಸ್ಲಾನ್ ಗ್ರಿನ್​ಬರ್ಗ್​ ಗೊರ್​ಬಚೆವ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ನಂತರ ಹೀಗೆ ಹೇಳಿದ್ದರು. ‘ಅವರು ನಮಗೆ ಸ್ವಾತಂತ್ರ್ಯ ಕೊಟ್ಟರು. ಆದರೆ ಅದನ್ನು ಏನು ಮಾಡಬೇಕು ಎನ್ನುವುದು ನಮಗೆ ಗೊತ್ತಾಗಲಿಲ್ಲ’ ಎಂದು ಹೇಳಿದ್ದರು.
ರಷ್ಯಾ ಅಧ್ಯಕ್ಷ ಪುತಿನ್ ಮತ್ತು ಅನೇಕ ರಷ್ಯನ್ನರಿಗೆ, ಸೋವಿಯತ್ ಒಕ್ಕೂಟ ಒಡೆದು ಹೋಗಿದ್ದು ಒಂದು ದುರಂತವಾಗಿದ್ದು, ಅದರೊಂದಿಗೆ ಒಂದು ದಶಕದ ಬಡತನ ಮತ್ತು ಜಾಗತಿಕ ವೇದಿಕೆಯಲ್ಲಿ ರಷ್ಯಾದ ಸ್ಥಾನಮಾನವನ್ನು ಅದು ದುರ್ಬಲಗೊಳಿಸಿತು ಹಾಗೂ ರಷ್ಯಾದ ಶ್ರೇಷ್ಠತೆ ಮತ್ತು ತನ್ನದೇ ಆದ ಪ್ರತಿಷ್ಠೆಗೆ ಧಕ್ಕೆಯಾಯಿತು ಎಂದು ನಂಬುತ್ತಾರೆ.

ಯುಎಸ್ಎಸ್ಆರ್ ಪತನಗೊಂಡಾಗ, ಸೋವಿಯತ್ ನಂತರದ ರಷ್ಯಾದ ಮೊದಲ ಅಧ್ಯಕ್ಷರಾದ ಕಿರಿಯ ಬೋರಿಸ್ ಯೆಲ್ಟ್ಸಿನ್ ಗೋರ್ಬಚೇವ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದರು.
ಅಂದಿನಿಂದ, ಗೋರ್ಬಚೇವ್ ಅವರು ಶೈಕ್ಷಣಿಕ ಮತ್ತು ಮಾನವೀಯ ಯೋಜನೆಗಳಿಗೆ ತನ್ನನ್ನು ತೊಡಗಿಸಿಕೊಂಡರು.
ಅವರು ರಾಜಕೀಯಕ್ಕೆ ಮರಳಲು ಪ್ರಯತ್ನ ಮಾಡಿದರು. 1996 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು ಆದರೆ ಕೇವಲ 0.5 ಶೇಕಡಾ ಮತಗಳನ್ನು ಪಡೆದರು.

ಮುಕ್ತ ಪತ್ರಿಕಾ ಬೆಂಬಲಿಗ
1993 ರಲ್ಲಿ ಸ್ಥಾಪನೆಯಾದ ರಷ್ಯಾದ ಪ್ರಮುಖ ಸ್ವತಂತ್ರ ವೃತ್ತಪತ್ರಿಕೆ ನೊವಾಯಾ ಗೆಜೆಟಾದ ಆರಂಭಿಕ ಬೆಂಬಲಿಗರಾಗಿದ್ದ ಗೋರ್ಬಚೇವ್‌, ಪತ್ರಿಕೆಗೆ ತಮ್ಮ ಮೊದಲ ಕಂಪ್ಯೂಟರ್‌ಗಳನ್ನು ಖರೀದಿಸಲು ಸಹಾಯ ಮಾಡಲು ತಮ್ಮ ನೊಬೆಲ್ ಪ್ರಶಸ್ತಿಯ ಹಣದ ಭಾಗವನ್ನು ದಾನ ಮಾಡಿದರು.
ಆದರೆ ಪತ್ರಿಕೆಯು ರಷ್ಯಾದ ಸ್ವತಂತ್ರ ಮಾಧ್ಯಮದಂತೆ ಪುತಿನ್ ಅವರ ಎರಡು ದಶಕಗಳ ಆಳ್ವಿಕೆಯಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾಯಿತು.
ನೊವಾಯಾ ಗೆಜೆಟಾ, ಅವರ ಮುಖ್ಯ ಸಂಪಾದಕ ಡಿಮಿಟ್ರಿ ಮುರಾಟೊವ್ ಕಳೆದ ವರ್ಷ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು, ಉಕ್ರೇನ್‌ನಲ್ಲಿ ಮಾಸ್ಕೋದ ಮಿಲಿಟರಿ ಹಸ್ತಕ್ಷೇಪದ ನಂತರ ಮಾರ್ಚ್ ಅಂತ್ಯದಲ್ಲಿ ಅದರ ಪ್ರಕಟಣೆಯನ್ನು ಸ್ಥಗಿತಗೊಳಿಸಬೇಕಾಯಿತು.
ಗೋರ್ಬಚೇವ್ ಸ್ವತಃ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡಲಿಲ್ಲ, ಆದರೂ ಅವರ ಪ್ರತಿಷ್ಠಾನವು ” ಯುದ್ಧವನ್ನು ನಿಲ್ಲಿಸಲು ಮತ್ತು ಶಾಂತಿ ಮಾತುಕತೆಗಳನ್ನು ತಕ್ಷಣ ಪ್ರಾರಂಭಿಸಲು” ಕರೆ ನೀಡಿತು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement