ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗುರುವಾರ (ನವೆಂಬರ್ 3) ಗುಜ್ರಾನ್ವಾಲಾ ಪಟ್ಟಣದಲ್ಲಿ ರ್ಯಾಲಿ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ವೀಡಿಯೊವೊಂದರಲ್ಲಿ, ದಾಳಿಕೋರ ಇಮ್ರಾನ್ ಖಾನ್ ಜನರನ್ನು ದಿಕ್ಕು ತಪ್ಪಿಸುತ್ತಿರುವ ಕಾರಣಕ್ಕಾಗಿ ಅವರನ್ನು ಕೊಲ್ಲಲು ಬಯಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ವೀಡಿಯೊವೊಂದರಲ್ಲಿ, ಶೂಟರ್, “ಅವರು (ಇಮ್ರಾನ್ ಖಾನ್) ಜನರನ್ನು ದಾರಿ ತಪ್ಪಿಸುತ್ತಿದ್ದದರಿಂದ ನಾನು ಅವರನ್ನು ಕೊಲ್ಲಲು ಬಯಸಿದ್ದೆ. ನಾನು ಅವರನ್ನು ಶೂಟ್ ಮಾಡಲು ಪ್ರಯತ್ನಿಸಿದ್ದೇನೆಯೇ ಹೊರತು ಬೇರೆ ಯಾರನ್ನೂ ಅಲ್ಲ. ಅವರು ಲಾಹೋರ್ ತೊರೆದಾಗ ನಾನು ಈ ನಿರ್ಧಾರ ತೆಗೆದುಕೊಂಡೆ. ನಾನು ಒಬ್ಬಂಟಿಯಾಗಿ ಮಾಡಿದ್ದೇನೆ, ಬೇರೆ ಯಾರೂ ಇಲ್ಲ ಎಂದು ದಾಳಿಕೋರ ವೀಡಿಯೊ ಮುಂದೆ ಹೇಳಿದ್ದಾನೆ.
ಏತನ್ಮಧ್ಯೆ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಅವರು ಮಾಜಿ ಪ್ರಧಾನಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಇನ್ನೂ ಮೂವರು ನಾಯಕರಿಗೆ ಗಾಯಗಳಾಗಿವೆ ಎಂದು ತಿಳಿಸಿದರು.
ವರದಿಗಳ ಪ್ರಕಾರ, ಇಸ್ಲಾಮಾಬಾದ್ ಕಡೆಗೆ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿರುವಾಗ ಖಾನ್ ಮೇಲೆ ಗುಂಡು ಹಾರಿಸಲಾಯಿತು, ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತದೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಒಬ್ಬರಾದ ಹಿರಿಯ ನಾಯಕ ಫೈಸಲ್ ಜಾವೇದ್ ಖಾನ್, ಪಕ್ಷದ ಸದಸ್ಯರೊಬ್ಬರು ಬುಲೆಟ್ ಗಾಯಗಳಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಶೆಹಬಾಜ್ ಷರೀಫ್, ಅಲ್ಲಾವಾಲಾ ಚೌಕ್ನಲ್ಲಿ ನಡೆದ ಗುಂಡಿನ ದಾಳಿಯನ್ನು ಖಂಡಿಸಿದ್ದು, ಘಟನೆಯ ಕುರಿತು ತಕ್ಷಣ ವರದಿ ನೀಡುವಂತೆ ಕೇಳಿದ್ದಾರೆ.
ಐಜಿ ಪೊಲೀಸ್ ಮತ್ತು ಪಂಜಾಬ್ ಮುಖ್ಯ ಕಾರ್ಯದರ್ಶಿಯಿಂದ ತಕ್ಷಣದ ವರದಿಯನ್ನು ಕೇಳುವಂತೆ ಷರೀಫ್ ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರಿಗೆ ಸೂಚಿಸಿದ್ದಾರೆ.
ಶುಕ್ರವಾರದಿಂದ, ಪಾಕಿಸ್ತಾನದ ಮಾಜಿ ಪ್ರಧಾನಿ ಲಾಹೋರ್ನಿಂದ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಪಾದಯಾತ್ರೆ ಮುನ್ನಡೆಸುತ್ತಿದ್ದಾರೆ, ಏಪ್ರಿಲ್ನಲ್ಲಿ ಅಧಿಕಾರದಿಂದ ಹೊರಹಾಕಲ್ಪಟ್ಟ ನಂತರ ಹೊಸ ಚುನಾವಣೆಯನ್ನು ತಕ್ಷಣವೇ ನಡೆಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಜನಸಮೂಹದಿಂದ ವ್ಯಕ್ತಿ ಗುಂಡು ಹಾರಿಸಿದಾಗ ಇಮ್ರಾನ್ ಖಾನ್ ಗಾಯಗೊಂಡರು.
ಘಟನೆಯ ದೃಶ್ಯಾವಳಿಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡವು ಮತ್ತು ಘಟನೆಯ ನಂತರ ಸ್ಥಳದಲ್ಲಿದ್ದ ಇತರರ ಸಹಾಯದಿಂದ ಖಾನ್ ಅವರನ್ನು ವಾಹನಕ್ಕೆ ಸ್ಥಳಾಂತರಿಸಲಾಯಿತು. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕನ ಕಾಲಿಗೆ ಬ್ಯಾಂಡೇಜ್ ಕಟ್ಟಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ