ಮಂಡ್ಯ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ವಿಷವುಣಿಸಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮದೊದೂರಿನ ಗ್ರಾಮದಲ್ಲಿ ನಡೆದಿದೆ.
ತಾಯಿ ಉಸ್ನಾ ಕೌಸರ್, ತನ್ನ ಮಕ್ಕಳಾದ ಹಾರಿಸ್(7), ಆಲಿಸಾ (4), ಫಾತಿಮಾ(2)ಗೆ ವಿಷವುಣಿಸಿ ಅವರು ಸಾವಿಗೀಡಾದ ನಂತರ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವೃತ್ತಿಯಲ್ಲಿ ಕಾರ್ ಮೆಕ್ಯಾನಿಕ್ ಆಗಿದ್ದ ಅಖಿಲ್ ಅಹಮದ್ ಅವರ ಪತ್ನಿಉಸ್ನಾ ಕೌಸರ್ (32) ನರ್ಸಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಪತಿ-ಪತ್ನಿಯರ ಮಧ್ಯೆ ಒಂದು ವರ್ಷದಿಂದ ಸಂಬಂಧ ಹಳಸಿತ್ತು ಎನ್ನಲಾಗಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು, ಉಸ್ನಾ ಕೌಸರ್ ಗುರುವಾರ(ಡಿಸೆಂಬರ್ 1) ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಮೂರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಉಷ್ನಾ ಬಾನು ನರ್ಸ್ ಆಗಿದ್ದರಿಂದ ಮಕ್ಕಳಿಗೆ ಯಾವುದೋ ಔಷಧ ಅಥವಾ ಕೀಟನಾಶವನ್ನೋ ಕುಡಿಸಿ ಮಕ್ಕಳನ್ನು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತ್ಮಹತ್ಯೆ ಮಾಡಿಕೊಳ್ಳುವ ಮುನ ತಾಯಿಗೆ ಫೋನ್ ಮಾಡಿ ಬರಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ 7 ಗಂಟೆ ಸಮಯದಲ್ಲಿ ಉಸ್ಮಾ ಕೌಸರ್ ಅವರ ತಾಯಿ ಮನೆಗೆ ಬಂದಾಗ ನಾಲ್ವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಮದ್ದೂರು ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ.
ನಿಮ್ಮ ಕಾಮೆಂಟ್ ಬರೆಯಿರಿ