ಜನವರಿ 11ರಿಂದ ಬೆಳಗಾವಿಯಿಂದ 20 ದಿನಗಳ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಆರಂಭ

ಬೆಂಗಳೂರು: ವಿಧಾನಸಭೆ ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬುಧವಾರ (ಜನವರಿ 11)ದಿಂದ 20 ದಿನಗಳ ಪ್ರಜಾಧ್ವನಿ ರಥಯಾತ್ರೆ ಆರಂಭಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಪ್ರವಾಸ ಮಾಡಲಿದ್ದಾರೆ.
ಇಂದು, ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಬಿಜೆಪಿಯ ಪಾಪದ ಪುರಾಣ ಎಂಬ ದೋಷಾರೋಪಣಾ ಪಟ್ಟಿ ಬಿಡುಗಡೆ ಮಾಡಿದರು.
ಡಿ.ಕೆ.ಶಿವಕುಮಾರ ಮಾತನಾಡಿ, ಮಹಾತ್ಮಾ ಗಾಂಧಿ ಬೆಳಗಾವಿಯಲ್ಲಿ ತಂಗಿದ್ದ ಗಾಂಧಿ ಬಾವಿಯಿಂದ ಬುಧವಾರದಿಂದ ಪ್ರಜಾಧ್ವನಿ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾನು ಮತ್ತು ಸಿದ್ದರಾಮಯ್ಯ ಜೊತೆಯಾಗಿ 20 ಜಿಲ್ಲೆಗಳಲ್ಲಿ ಸಂಚರಿಸಲಿದ್ದೇವೆ. ಜನವರಿ 28ರ ವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಬಳಿಕ ನಾವಿಬ್ಬರು ಪ್ರತ್ಯೇಕ ತಂಡಗಳಲ್ಲಿ ಕ್ಷೇತ್ರವಾರು ಪ್ರವಾಸ ಮಾಡುತ್ತೇವೆ ಎಂದು ಪ್ರವಾಸದ ಮಾಹಿತಿ ನೀಡಿದರು.
ಚುನಾವಣೆಗೂ ಮೊದಲು ಬಿಜೆಪಿ 600 ಭರವಸೆ ನೀಡಿತ್ತು, ಅದರಲ್ಲಿ 50 ಮಾತ್ರ ಈಡೇರಿದೆ, ಇನ್ನೂ 550 ಭರವಸೆಗಳು ಈಡೇರಿಲ್ಲ. ಕಾಂಗ್ರೆಸ್ ಎರಡು ತಿಂಗಳಿನಿಂದ ಬಿಜೆಪಿಯ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿದೆ. ಈವರೆಗೂ ಒಂದಕ್ಕೂ ಬಿಜೆಪಿ ಉತ್ತರ ನೀಡಿಲ್ಲ ಎಮದು ಟೀಕಿಸಿದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಬಗ್ಗೆ ಗುತ್ತಿಗೆದಾರರು ದೂರಿದ್ದಾರೆ. 83190 ಜನ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1258 ಕಂಪೆನಿಗಳು ಮುಚ್ಚಿ ಹೋಗುವ ಪರಿಸ್ಥಿತಿ ಬಂದಿದೆ. ಹೊಸ ಬಂಡವಾಳ ಹೂಡಿಕೆ ಬರುತ್ತಿಲ್ಲ. ನೆರೆಯ ತೆಲಂಗಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಹೋಗುತ್ತಿದೆ ಎಂದು ಆರೋಪಿಸಿದರು.
ಪಿಎಸ್‍ಐ ಸೇರಿದಂತೆ ಸರ್ಕಾರಿ ಉದ್ಯೋಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ತಂತ್ರಜ್ಞಾನವನ್ನೇ ತಿರುಚಿ ಅವ್ಯವಹಾರ ನಡೆಸಲಾಗಿದೆ.
ಭ್ರಷ್ಟಚಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೂರಿದರು.
ಬಿಜೆಪಿಯ ಪಾಪದ ಪುರಾಣದ ಬಗ್ಗೆ ಜನರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆ ಆರಂಭಿಸುತ್ತಿದ್ದೇವೆ. ನಮ್ಮ ಯಾತ್ರೆಯಲ್ಲಿ ಮುಂದೆ ನಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂಬ ಭರವಸೆಗಳನ್ನು ಜನರಿಗೆ ನೀಡುತ್ತೇವೆ ಮತ್ತು ಅದನ್ನು ನಾವು ಈಡೇರಿಸುತ್ತೇವೆ ಎಂಬ ಕಾರಣಕ್ಕೆ ಇದನ್ನು ಗ್ಯಾರಂಟಿ ಯಾತ್ರೆ ಎಂದು ಕರೆಯುತ್ತಿದ್ದೇವೆ ಎಂದರು.

ಜನರ ಯಾವುದೇ ಹೋರಾಟಗಳಿದ್ದರೂ ಕಾಂಗ್ರೆಸ್ ಕೈ ಜೊಡಿಸಲಿದೆ. ನಿಮ್ಮ ಹಕ್ಕು ನಮ್ಮ ಹೋರಾಟ ಎಂಬ ಘೋಷಣಾ ವಾಕ್ಯವನ್ನು ಪಾಲಿಸುತ್ತೇವೆ. ಜನರು ತಮ್ಮ ಬೇಡಿಕೆ ಮತ್ತು ಸಲಹೆಗಳನ್ನು ಪ್ರಜಾಧ್ವನಿ ವೆಬ್‍ಸೈಟ್ ಮೂಲಕವೂ ನಮಗೆ ಕಳುಹಿಸಬಹುದು. ಜೊತೆಗೆ 9537224224 ಸಹಾಯವಾಣಿ ಸ್ಥಾಪಿಸಲಾಗಿದ್ದು ಅದಕ್ಕೆ ದಿನದ 24 ಗಂಟೆ ಕರೆ ಮಾಡಿ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದು ಶಿವಕುಮಾರ ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‍ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ ಖರ್ಗೆ, ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ, ದಿನೇಶ್ ಗೂಳಿಗೌಡ ಮೊದಲಾದವರಿದ್ದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಯಾತ್ರೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement