ತಿರುಮಲ: ತಿರುಮಲ ಪೊಲೀಸರು ಶುಕ್ರವಾರ ಟಿಟಿಡಿ ವಿಜಿಲೆನ್ಸ್ ಇಲಾಖೆಯ ದೂರಿನ ಆಧಾರದ ಮೇಲೆ ಆಂಧ್ರ ಪ್ರದೇಶದ ವಿಧಾನ ಪರಿಷತ್ ಸದಸ್ಯ (ಶಿಕ್ಷಕರ ಕ್ಷೇತ್ರ) ಶೇಕ್ ಸಾಬ್ಜಿ ಮತ್ತು ಅವರ ಪಿಎ ವೇಣುಗೋಪಾಲ ಮತ್ತು ದೇಗರಾಜು ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಶಾಸಕ ಸಾಬಿ ಅವರು ಇತ್ತೀಚೆಗೆ ಶಿಕ್ಷಕರ ಕ್ಷೇತ್ರದಿಂದ (ಏಲೂರು) ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್ ಮಂಜೂರಾತಿಗಾಗಿ ಎಂಎಲ್ಸಿಯಿಂದ ಸರಣಿ ಶಿಫಾರಸು ಪತ್ರಗಳು ಬಂದ ನಂತರ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ದರ್ಶನ ಟಿಕೆಟ್ ದಂಧೆ ನಡೆದ ಅನುಮಾನದ ಮೇಲೆ ತನಿಖೆಯನ್ನು ಕೈಗೆತ್ತಿಕೊಂಡರು. ಪ್ರಕರಣ ದಾಖಲಿಸಿಕೊಂಡ ತಿರುಮಲ ಟೂ ಟೌನ್ ಠಾಣೆ ಪೊಲೀಸರು ಎಂಎಲ್ಸಿ ಶೇಕ್ ಅವರನ್ನು ಠಾಣೆಗೆ ಕರೆತಂದಿದ್ದು, ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಟಿಟಿಡಿ ಹಾಗೂ ಯಾತ್ರಿಕರಿಗೆ ವಂಚಿಸಿದ ಆರೋಪದ ಮೇಲೆ ಸಿಐ ಚಂದ್ರಶೇಖರ್ ಅವರು ಶೇಕ್ ಸಾಬಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ, ಎಂಎಲ್ಸಿ ಶೇಕ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಮತ್ತು ಟಿಟಿಡಿ ವಿಜಿಲೆನ್ಸ್ ಇಲಾಖೆಯಿಂದ ನಡೆಯುತ್ತಿರುವ ದರ್ಶನ ಟಿಕೆಟ್ ದಂಧೆ ತನಿಖೆಯಲ್ಲಿ ಯಾರನ್ನಾದರೂ ಬಲಿಪಶುವನ್ನಾಗಿ ಮಾಡುವ ಪ್ರಯತ್ನದಲ್ಲಿ ತಾನು ನೀಡಿರುವ ಪತ್ರಗಳ ದುರುಪಯೋಗದ ಬಗ್ಗೆ ತನಿಖೆ ನಡೆಯಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಎಂಎಲ್ಸಿ ಮತ್ತು ಇತರ ಇಬ್ಬರು ಪರಸ್ಪರ ಸೇರಿಕೊಂಡು ಹೆಚ್ಚಿನ ಹಣವನ್ನು ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಯಾತ್ರಿಕ ಸುವರ್ಣಪಲ್ಲಿ ವೆಂಕಟೇಶಪ್ಪ ರವೀಂದ್ರ ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದಾರೆ ಎಂದು ತಿರುಮಲದ ವಿಜಿಲೆನ್ಸ್ ವಿಭಾಗದ ಸಹಾಯಕ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿ ಎಸ್ ಪದ್ಮನಾಭನ್ ತಿಳಿಸಿದ್ದಾರೆ.
ಈ ಮೂವರು, ಯಾತ್ರಿಕ ರವೀಂದ್ರ ಹಾಗೂ ಟಿಟಿಡಿ ಸಂಸ್ಥೆಗೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಸಲ್ಲಿಸಿ ವಂಚಿಸಿದ್ದಾರೆ ಎಂದು ವಿಜಿಲೆನ್ಸ್ ಅಧಿಕಾರಿ ತಿಳಿಸಿದ್ದಾರೆ. 300 ರೂಪಾಯಿ ವಿಶೇಷ ಪ್ರವೇಶ ದರ್ಶನ ವಿಭಾಗ ವ್ಯವಸ್ಥೆಯಡಿ ಆರು ಭಕ್ತರಿಗೆ ದರ್ಶನ ನೀಡಲು ಇವರು 1 ಲಕ್ಷ ರೂ. ವಸೂಲಿ ಮಾಡಿದ್ದು, ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ತಿಮ್ಮಪ್ಪನ ದರ್ಶನದ (Tirumala in Tirupati ) ಟಿಕೆಟ್ ಪಡೆದಿದ್ದಾರೆ ಎಂದು ಟಿಟಿಡಿ ಜಾಗೃತ ವಿಭಾಗ ತಿಳಿಸಿದೆ.
ದರ್ಶನ ಟಿಕೆಟ್ಗೆ ಶಿಫಾರಸು ಮಾಡಿ ಎಂಎಲ್ಸಿಯಿಂದ ಹೆಚ್ಚಿನ ಪತ್ರಗಳು ಬಂದ ನಂತರ ಅನುಮಾನಗೊಂಡ ಅಧಿಕಾರಿಗಳು ತನಿಖೆ ಕೈಗೊಂಡರು, ಇದರಲ್ಲಿ ದರ್ಶನ್ ಟಿಕೆಟ್ಗೆ ಎಂಎಲ್ಸಿ 19 ಶಿಫಾರಸು ಪತ್ರಗಳನ್ನು ನೀಡಿರುವುದು ಕಂಡುಬಂದಿದೆ ಎಂದು ವಿಜಿಲೆನ್ಸ್ ಅಧಿಕಾರಿ ಹೇಳಿದರು. ಈ ಬಗ್ಗೆ ಪೊಲೀಸರು Cr.No 53/2023, U/s 420, 468, 471 IPC r/w 34 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕುತೂಹಲಕಾರಿಯಾಗಿ, ಎಂಎಲ್ಸಿ ಶಿಫಾರಸು ಪತ್ರದ ಮೂಲಕ ದರ್ಶನ ಟಿಕೆಟ್ ಪಡೆದವರೆಲ್ಲರೂ ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳವರು ಎಂದು ಟಿಟಿಡಿ ವಿಚಾರಣೆಯಲ್ಲಿ ಕಂಡುಬಂದಿದೆ. ಕಳೆದ ಒಂದು ತಿಂಗಳಲ್ಲಿ ಎಂಎಲ್ಸಿ ಶಿಫಾರಸು ಪತ್ರದ ಮೇಲೆ ಸುಮಾರು 150 ದರ್ಶನ ಟಿಕೆಟ್ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಜಿಲೆನ್ಸ್ ವಿಚಾರಣೆಯಲ್ಲಿ ರವೀಂದ್ರ ಅವರು ದರ್ಶನ ಟಿಕೆಟ್ಗಾಗಿ ಹಣ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ರವೀಂದ್ರ ಮತ್ತು ಇತರ ಐವರ ಆಧಾರ್ ಕಾರ್ಡ್ ಪರಿಶೀಲನೆ ವೇಳೆ ಬೆಂಗಳೂರಿನಲ್ಲಿರುವ ಯಾತ್ರಿಕರು ಹೈದರಾಬಾದ್ನವರೆಂದು ತೋರಿಸಲು ಆಧಾರ ಕಾರ್ಡ್ ತಿರುಚಿರುವುದು ಕಂಡುಬಂದಿದ್ದು, ಎಂಎಲ್ಸಿಯ ಶಿಫಾರಸು ಪತ್ರದ ಹಿಂದಿನ ವಂಚನೆಯನ್ನು ಇದು ಬಹಿರಂಗಪಡಿಸಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ಹೇಳಿದ್ದಾರೆ.
14 ಮಂದಿಗೆ ಶಿಷ್ಟಾಚಾರದಡಿ ವಿಐಪಿ ಬ್ರೇಕ್ ದರ್ಶನ ನೀಡುವ ಕುರಿತು ಎಂಎಲ್ಸಿ ಅವರು ಜೆಇಒ ಕಚೇರಿಗೆ ಮುಂಗಡ ಮಾಹಿತಿ ರವಾನಿಸಿದ್ದಾರೆ ಎಂದು ಟಿಟಿಡಿ ವಿಜಿಲೆನ್ಸ್ ಇಲಾಖೆ ತಿರುಮಲ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ