ವಾರಾಣಸಿ: ಆಂಧ್ರಪ್ರದೇಶದ ಒಂದೇ ಕುಟುಂಬದ ನಾಲ್ವರು ಗುರುವಾರ ವಾರಾಣಸಿಯ ಆಶ್ರಮವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಕಾರ, ಕುಟುಂಬವು ಅನುಮಾನಾಸ್ಪದ ಹಣಕಾಸಿನ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ಆಧ್ಯಾತ್ಮಿಕ ಪ್ರಯಾಣದ ಭಾಗವಾಗಿ ಕುಟುಂಬ ಡಿಸೆಂಬರ್ 3 ರಂದು ವಾರಣಾಸಿಗೆ ಆಗಮಿಸಿತ್ತು. ಅವರು ಡಿಸೆಂಬರ್ 7 ರಂದು ಬೆಳಿಗ್ಗೆ ಆಂಧ್ರಪ್ರದೇಶದ ತಮ್ಮೂರಿಗೆ ಮರಳಲು ಸಿದ್ಧತೆ ನಡೆಸಿತ್ತು. ಆದರೆ, ಸಂಜೆಯ ವೇಳೆಗೆ ಅವರ ಕೊಠಡಿಯಿಂದ ಯಾವುದೇ ಚಟುವಟಿಕೆಯ ಸುಳಿವು ಇಲ್ಲದಿರುವುದು ಆತಂಕಕ್ಕೆ ಕಾರಣವಾಯಿತು. ಕೊಠಡಿಯಲ್ಲೇ ತಂಗಿದ್ದ ಅವರು ಗುರುವಾರ ಸಂಜೆಯಾದರೂ ಹೊರಗೆ ಬಾರದೆ ಇದ್ದಾಗ ಕಟ್ಟಡದ ಸಿಬ್ಬಂದಿಯೊಬ್ಬರು ಮಹಡಿಯ ಮೇಲೆ ಹೋಗಿ ಬಾಗಿಲು ಬಡಿದಿದ್ದಾರೆ. ಇನ್ನೊಂದು ಕಡೆಯಿಂದ ಯಾವುದೇ ಪ್ರತಿಕ್ರಿಯೆಯಿಲ್ಲದೆ, ಸಿಬ್ಬಂದಿ ಕಿಟಕಿಯಿಂದ ಇಣುಕಿ ನೋಡಿದಾಗ ಕೋಣೆಯಲ್ಲಿ ನಾಲ್ಕು ಶವಗಳು ನೇತಾಡುತ್ತಿರುವುದನ್ನು ನೋಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿ ಮ್ಯಾನೇಜರ್ಗೆ ವಿಷಯ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡದೊಂದಿಗೆ ಸಹಾಯಕ ಪೊಲೀಸ್ ಕಮಿಷನರ್ ಅವಧೇಶ್ ಪಾಂಡೆ ಸ್ಥಳಕ್ಕೆ ಆಗಮಿಸಿದರು
ನಂತರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅವರ ಕೊಠಡಿಯ ಬಾಗಿಲನ್ನು ತೆರೆದ ನಂತರ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಪತಿ, ಪತ್ನಿ ಮತ್ತು ಅವರ ಇಬ್ಬರು ಪುತ್ರರು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಂದಾ ಪೇಟಾ ಪ್ರದೇಶದವರಾಗಿದ್ದಾರೆ.ತೆಲುಗಿನಲ್ಲಿ ಬರೆದಿರುವ ಸೂಸೈಡ್ ನೋಟ್ ಪೊಲೀಸರಿಗೆ ಪತ್ತೆಯಾಗಿದೆ. ಪತಿ ಆಂಧ್ರಪ್ರದೇಶದ ತನ್ನ ಕೆಲಸದ ಸ್ಥಳದ ಯಾರೊಬ್ಬರೊಂದಿಗೆ ಹಣಕಾಸಿನ ವಿವಾದದಲ್ಲಿದ್ದರು ಎಂದು ಟಿಪ್ಪಣಿ ಸೂಚಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾಲ್ವರು ಆಂಧ್ರಪ್ರದೇಶಕ್ಕೆ ಸೇರಿದ ಒಂದೇ ಕುಟುಂಬದವರಾಗಿದ್ದು, ಇಲ್ಲಿನ (ವಾರಾಣಸಿ) ಆಶ್ರಮದಲ್ಲಿ ನೆಲೆಸಿದ್ದರು. ಆತ್ಮಹತ್ಯೆ ಪತ್ರದ ಮೂಲಕ, ಕೆಲವು ಹಣಕಾಸಿನ ಸಮಸ್ಯೆಗಳಿವೆ ಎಂದು ನಾವು ಅಂದಾಜಿಸಬಹುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ